ವಿವಾಹದ ಭರವಸೆ ನೀಡಿ ವಿದ್ಯಾರ್ಥಿನಿ ಮೇಲೆ ಹಾಸ್ಟೆಲ್ ವಾರ್ಡನ್ ಲೈಂಗಿಕ ದೌರ್ಜನ್ಯ
ಮಂಡ್ಯ, ಜೂನ್ 2 : ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಒಬ್ಬರು ಬಾಲಕಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡು, ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ವಂಚಿಸಿರುವ ಪ್ರಕರಣವೊಂದು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದ ಸತೀಶ್ ಎಂಬಾತ ಆರೋಪಿ. ಆತನ ತಾಯಿ, ಸ್ನೇಹಿತರಾದ ಪುಟ್ಟಸ್ವಾಮಿ, ಲೋಕೇಶ್ ಎಂಬುವರ ವಿರುದ್ಧ ಸಂತ್ರಸ್ತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿರುವ ಸತೀಶ್ 2014ರಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯ ಪೋಷಕರನ್ನು ಪರಿಚಯ ಮಾಡಿಕೊಂಡು, ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡ ಸತೀಶ್ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆಂದು ಭರವಸೆ ಕೊಟ್ಟಿದ್ದ.

ದೌರ್ಜನ್ಯ ನಡೆಸಿ ವಂಚನೆ; ಸಲುಗೆ ಹೆಚ್ಚಾದ ನಂತರ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ ವಾರ್ಡನ್ ಬಾಲಕಿಯನ್ನು ಪ್ರೀತಿಸುವಂತೆ ಬಲವಂತಪಡಿಸಿದ್ದಾನೆ. ಆದರೆ, ಬಾಲಕಿ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಒಂದು ದಿನ ದೇವಸ್ಥಾನಕ್ಕೆ ಹೋಗಿಬರೋಣ ಎಂದು ಅರೆತಿಪ್ಪೂರು ಬೆಟ್ಟ, ರಾಮದೇವರ ಬೆಟ್ಟಕ್ಕೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
2017ರಲ್ಲಿ ನನ್ನ ಪೋಷಕರು ನಮ್ಮ ಅಜ್ಜಿಗೆ ಆರೋಗ್ಯ ಸರಿಯಿಲ್ಲದೆ ಬೆಂಗಳೂರಿಗೆ ತೆರಳಿದ್ದ ವಿಷಯ ತಿಳಿದು, ರಾತ್ರಿ 11 ಗಂಟೆಗೆ ನಮ್ಮ ಮನೆಗೆ ಬಂದು ಒಬ್ಬಂಟಿಯಾಗಿದ್ದ ನನ್ನ ಮೇಲೆ ಅತ್ಯಾಚಾರವೆಸಗಿದರು. ಆಗ ನನಗೆ 17 ವರ್ಷವಾಗಿತ್ತು. 18 ವರ್ಷ ತುಂಬಿದ ಬಳಿಕ ನಾನೇ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಹಲವಾರು ಬಾರಿ ಒಂಟಿಯಾಗಿದ್ದ ಸಮಯದಲ್ಲಿ ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿನಿ ಆರೋಪಿಸಿದ್ದಾರೆ.
2020ರಲ್ಲಿ ಯುವತಿ ತಾನೂ ಗರ್ಭವತಿಯಾಗಿರುವ ವಿಷಯವನ್ನು ಸತೀಶ್ಗೆ ತಿಳಿಸಿದಾಗ ಯಾರಿಗೂ ಹೇಳಬೇಡ, ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ. ಮಗುವನ್ನು ತೆಗೆಸುವಂತೆ ಹೇಳಿ ಮಂಡ್ಯದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿದ್ದಾನೆ. 10 ಡಿಸೆಂಬರ್ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸತೀಶ್ ನಂತರದಲ್ಲಿ ನನ್ನ ತಾಯಿಗೆ ಮದುವೆ ಇಷ್ಟವಿಲ್ಲವೆಂದು ಹೇಳಿ ನನ್ನಿಂದ ದೂರವಾಗಿದ್ದಾನೆ.
ಇಷ್ಟಲ್ಲದೆ ಸತೀಶ್ ತಂದೆ-ತಾಯಿ, ಸ್ನೇಹಿತರಾದ ಪುಟ್ಟಸ್ವಾಮಿ, ಲೋಕೇಶ್ ನಮ್ಮ ಮನೆಗೆ ಬಂದು ದಬ್ಬಾಳಿಕೆ ಮಾಡಿ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಮತ್ತು ಕುಟುಂಬವನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ದೂರು ನೀಡುತ್ತಿದ್ದಂತೆಯೇ ಆರೋಪಿ ಸತೀಶ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಬಳಿಕ ಎಲ್ಲರೂ ನಾಪತ್ತೆಯಾಗಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಕೆ. ಎನ್. ಹರೀಶ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications