ಮಂಡ್ಯ ವಿಶೇಷ; ಹದ್ದಿನಕಲ್ಲಿನಲ್ಲಿ ಆಂಜನೇಯನ ಜೊತೆ ಇರುವುದು ರಾಮನಲ್ಲ!
ಮಂಡ್ಯ, ಸೆಪ್ಟೆಂಬರ್ 27: ಇದು ಅಚ್ಚರಿಯಾದರೂ ಸತ್ಯ. ಸಾಮಾನ್ಯವಾಗಿ ಆಂಜನೇಯನ ದೇಗುಲಗಳಲ್ಲಿ ಶ್ರೀರಾಮನ ಮೂರ್ತಿಯಿರುತ್ತದೆಯಲ್ಲದೆ, ರಾಮನಿಗೂ ಪೂಜೆ ನಡೆಯುತ್ತದೆ. ಆದರೆ ಮಂಡ್ಯ ಜಿಲ್ಲೆಯ ಗಡಿಭಾಗದಲ್ಲಿರುವ ಹದ್ದಿನಕಲ್ಲು ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಮಾತ್ರ ಆಂಜನೇಯನ ಜತೆಗೆ ಇಂದ್ರಜಿತ್ ವೀರಾಜಮಾನನಾಗಿದ್ದು, ಎಡೆ ಒಪ್ಪಿಸಿ ಪೂಜೆಯೂ ನಡೆಯುತ್ತದೆ.
ಬಹುಶಃ ರಾವಣನ ಪುತ್ರ ಇಂದ್ರಜಿತ್ನನ್ನು ಪೂಜಿಸುವುದು ಬೇರೆಲ್ಲೂ ಕಂಡು ಬರುವುದಿಲ್ಲ. ಅಷ್ಟೇ ಅಲ್ಲದೆ ಆಂಜನೇಯನ ಜತೆಗಿರುವುದು ಕೂಡ ಅಪರೂಪವೇ. ಆದರೆ ಹದ್ದಿನಕಲ್ಲು ಆಂಜನೇಯ ಕ್ಷೇತ್ರದಲ್ಲಿ ಮಾತ್ರ ಎಲ್ಲವೂ ಅದಲು ಬದಲಾಗಿದ್ದು, ಆಂಜನೇಯನ ಜತೆ ಇಂದ್ರಜಿತ್ ಕೂಡ ಭಕ್ತರಿಂದ ಭಕ್ತಿ ಸಮರ್ಪಣೆಯಾಗುವುದರೊಂದಿಗೆ ಎಡೆಯೂ ಸಲ್ಲುತ್ತದೆ. ಇಷ್ಟೆಲ್ಲ ತಿಳಿದ ಮೇಲೆ ಹದ್ದಿನಕಲ್ಲು ಆಂಜನೇಯ ಕ್ಷೇತ್ರ ಎಲ್ಲಿದೆ? ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಡಿಗ್ರಾಮವಾದ ಭೈರಸಂದ್ರದ ಬಳಿ ಹದ್ದಿನಕಲ್ಲು ಆಂಜನೇಯ ಕ್ಷೇತ್ರವಿದೆ. ಈ ಕ್ಷೇತ್ರಕ್ಕೆ ತೆರಳಬೇಕಾದರೆ ಮಂಗಳೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಬೆಳ್ಳೂರು ಕ್ರಾಸ್ನಲ್ಲಿರುವ ಟೋಲ್ ಕೇಂದ್ರದಿಂದ ಮುಂದಕ್ಕೆ ಬೆಂಗಳೂರಿನ ಕಡೆಗೆ ಎರಡು ಕಿ.ಮೀ ಸಾಗಿದರೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವನ್ನು ಸ್ವಾಗತಿಸುವ ಹೆಬ್ಬಾಗಿಲು ಸಿಗುತ್ತದೆ.
ಈ ಹಾದಿಯಲ್ಲಿ ಸುಮಾರು 4 ಕಿ. ಮೀ. ಮುನ್ನಡೆದರೆ ಭೈರಸಂದ್ರ ಗ್ರಾಮ ಎದುರಾಗುತ್ತದೆ. ಇಲ್ಲಿ ಹದ್ದಿನಕಲ್ಲು ಹನುಮಂತರಾಯಸ್ವಾಮಿಯ ಭವ್ಯ ದೇವಾಲಯ ಸಿಗುತ್ತದೆ. ಇಲ್ಲಿಂದ ನಿಂತು ಒಮ್ಮೆ ಕಣ್ಣುಹಾಯಿಸಿದರೆ ಒಂದು ಕ್ಷಣ ಮೈನವಿರೇಳಿಸುವ ನಿಸರ್ಗ ನೋಟ ನಮ್ಮ ಎದುರಿಗೆ ಬಂದು ನಿಲ್ಲುತ್ತದೆ.

ನಿಸರ್ಗ ಸೌಂದರ್ಯ ಸೆಳೆಯುತ್ತದೆ
ಕೆಂಪುಕಲ್ಲಿನಿಂದ ಆವೃತವಾದ ಬೃಹತ್ ಬೆಟ್ಟ ಅದರ ನಡುವೆ ಬೆಳೆದು ನಿಂತ ಹಸಿರು ಸಿರಿ ಅದರ ಮೇಲೆ ವೀರಾಜಮಾನನಾಗಿ ಕಂಗೊಳಿಸುವ ಆಂಜನೇಯ ಭಕ್ತರನ್ನು ಸೆಳೆಯುತ್ತಾನೆ. ಹಾಗೆಂದು ಆಂಜನೇಯನನ್ನು ಅಷ್ಟು ಸುಲಭವಾಗಿ ನೋಡಲು ಸಾಧ್ಯವಿಲ್ಲ. ಈತನ ಬಳಿಗೆ ತೆರಳಬೇಕಾದರೆ ಹದ್ದಿನಕಲ್ಲು ಹನುಮಂತರಾಯಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ಕಡಿದಾದ ಹಾದಿಯಲ್ಲಿ ಸುಮಾರು ಒಂದು ಸಾವಿರ ಮೆಟ್ಟಿಲನ್ನು ಏರಲೇ ಬೇಕು. ಹೀಗೆ ಬೆಟ್ಟ ಏರುತ್ತಾ ಹೋಗುವಾಗ ಹಾದಿಯುದ್ದಕ್ಕೂ ವಾನರರು ಸ್ವಾಗತಿಸುತ್ತಾರೆ.

ದೇಶದಲ್ಲಿಯೇ ಅಪರೂಪದ ಪುಣ್ಯ ಕ್ಷೇತ್ರ
ಬೆಟ್ಟದ ಮೇಲ್ಭಾಗ ತಲುಪುತ್ತಿದ್ದಂತೆಯೇ ಗರುಡಗಂಭದ ಆಂಜನೇಯನ ಮೂರ್ತಿಯ ದರ್ಶನವಾಗುತ್ತದೆ. ಬೆಟ್ಟದ ಮೇಲೆ ಬೀಸಿ ಬರುವ ತಂಗಾಳಿ ಮತ್ತು ನಿಸರ್ಗದ ಸುಂದರ ನೋಟ ನಮ್ಮ ಆಯಸವನ್ನು ಹೊಡೆದೋಡಿಸಿ ಮನಶಾಂತಿ ನೀಡುತ್ತದೆ.
ಇನ್ನು ದೇವಸ್ಥಾನದ ಬಗ್ಗೆ ಹೇಳುವುದಾದರೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವು ದೇಶದಲ್ಲಿಯೇ ಅಪರೂಪದ ಪುಣ್ಯಕ್ಷೇತ್ರವಾಗಿದೆ. ದಾನಿಗಳು ಹಾಗೂ ಭಕ್ತರ ನೆರವಿನಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶ್ರೀ ಆಂಜನೇಯಸ್ವಾಮಿಯ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಗಿದ್ದು, ತಿರುಮಲದಲ್ಲಿನ ಶ್ರೀ ವೆಂಕಟೇಶ್ವರಸ್ವಾಮಿಯ ದೇವಾಲಯದ ಗರ್ಭ ಗುಡಿಯ ಗೋಪುರದಂತೆ ಆಂಜನೇಯಸ್ವಾಮಿಯ ದೇವಾಲಯದ ಗರ್ಭಗುಡಿ ಗೋಪುರವನ್ನು ಬಂಗಾರದ ತಗಡುಗಳಿಂದ ಅಲಂಕಾರ ಮಾಡಲಾಗಿದೆ. 80 ಅಡಿ ಎತ್ತರದ ರಾಜಗೋಪುರ ಭಕ್ತರ ಮನಸೆಳೆಯುತ್ತದೆ.

ಗಾಳಿ ಸೋಂಕು, ಪೀಡೆ, ಪಿಶಾಚಿಗಳ ನಿರ್ಮೂಲನೆ
ದೇವಾಲಯದಲ್ಲಿ ಪ್ರತಿದಿನ ಪೂಜೆ ಪುರಸ್ಕಾರಗಳು ನಡೆಯುವುದಲ್ಲದೆ, ಗಾಳಿಯ ಸೋಂಕು, ಪೀಡೆ-ಪಿಶಾಚಿಗಳ ನಿರ್ಮೂಲನೆ ಮಾಡುವ ಶಕ್ತಿಯನ್ನು ಇಲ್ಲಿನ ಆಂಜನೇಯ ಹೊಂದಿದ್ದಾನೆ. ಹರಕೆ ಹೊತ್ತ ಭಕ್ತರು ಆಂಜನೇಯಸ್ವಾಮಿಯ ಅಡ್ಡಪಲ್ಲಕಿ ಉತ್ಸವ ಹರಕೆ ತೀರಿಸುವ ಸಂಪ್ರದಾಯವಿದೆ. ಜತೆಗೆ ಪರ ಮತ್ತು ಪೂಜಾ ಕಾರ್ಯಗಳನ್ನು ನೆಂಟರಿಷ್ಟರು ಹಾಗೂ ಬಂಧುಗಳೊಡಗೂಡಿ ನಡೆಸಲು ವಿಶಾಲವಾದ ಸಭಾ ಭವನಗಳು ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಕೆಳಗೆ ಹಾಗೂ ಮೇಲ್ಬಾಗದಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
Recommended Video

ನಿಸರ್ಗದ ಮಡಿಲ ಸುಂದರ ಕ್ಷೇತ್ರ
ಮಂಡ್ಯ ಜಿಲ್ಲೆಗೆ ಸೇರುವ ದೇವಾಲಯಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ತುಮಕೂರು ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ಪೂಜೆ ಪುರಸ್ಕಾರವನ್ನು ನೆರವೇರಿಸುತ್ತಾರೆ. ಒಟ್ಟಾರೆಯಾಗಿ ಹತ್ತು ಹಲವು ವಿಶೇಷತೆ ಹೊಂದಿರುವ ಹದ್ದಿನಕಲ್ಲು ಆಂಜನೇಯ ಸ್ವಾಮಿ ಕ್ಷೇತ್ರ ನಿಸರ್ಗದ ಮಡಿಲ ಸುಂದರ ಮತ್ತು ಶಕ್ತಿಯುತ ದೇಗುಲವಾಗಿ ಎಲ್ಲರ ಗಮನಸೆಳೆಯುತ್ತಿರುವುದಂತು ಸತ್ಯ.












Click it and Unblock the Notifications