ಮಂಡ್ಯ: ಪುಂಡ-ಪೋಕರಿಗಳ ಅಡ್ಡೆಯಾದ ಸುಂದರ ತಾಣ ಹೇಮಗಿರಿ

ಮಂಡ್ಯ, ನವೆಂಬರ್ 23: ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ಕೆ.ಆರ್.ಪೇಟೆಗೆ ಸುಮಾರು ಎಂಟು ಕಿ.ಮೀ ದೂರದಲ್ಲಿರುವ ಹೇಮಗಿರಿ ಅಣೆಕಟ್ಟೆಯು ನಿಸರ್ಗ ಸುಂದರ ತಾಣವಾಗಿದ್ದು, ಪೇಟೆ, ಪಟ್ಟಣದ ಜನಜಂಗುಳಿಯಲ್ಲಿ ಒತ್ತಡದಿಂದ ಕೆಲಸ ಮಾಡುವ ಜನ ಇಲ್ಲಿಗೆ ಭೇಟಿ ನೀಡಿ ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ. ಆದರೆ ಈಗ ಕೆಲವರು ಈ ತಾಣವನ್ನು ಮೋಜು ಮಸ್ತಿಗೆ ಬಳಸಿಕೊಳ್ಳುತ್ತಿರುವುದರಿಂದ ಪ್ರವಾಸಿಗರ ಇತ್ತ ತೆರಳಲು ಭಯಪಡುವಂತಾಗಿದೆ.

ಧುಮ್ಮಿಕ್ಕುವ ನೀರ ಝರಿ... ಸುತ್ತಲೂ ಹರಡಿ ನಿಂತ ಹಚ್ಚ ಹಸುರಿನ ನಿಸರ್ಗ... ಹೇಮಗಿರಿಯ ವಿಶೇಷತೆಯಾಗಿದ್ದು, ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ಉಲ್ಲಾಸಿತರಾಗಲು ಆಗಾಗ್ಗೆ ಪ್ರವಾಸಿಗರು ಬರುತ್ತಾರೆ. ಪಕ್ಕದ ಚಂದಗೋನಹಳ್ಳಿಯಲ್ಲಿರುವ ಅಮ್ಮನವರ ದೇವಸ್ಥಾನಕ್ಕೂ ವಿವಿಧ ಸೇವೆ ಸಲ್ಲಿಸಲು ಭಕ್ತರು ಬರುತ್ತಿದ್ದು, ಹೀಗೆ ಬಂದವರು ಹೇಮಗಿರಿಯಲ್ಲಿ ಸಮಯ ಕಳೆದು ಹೋಗುತ್ತಾರೆ. ಇನ್ನು ಏಕಾಂತ ಬಯಸಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಷ್ಟೇ ಆಗಿದ್ದರೆ ಯಾವುದೇ ರೀತಿಯ ತೊಂದರೆಯಿರಲಿಲ್ಲ.

ಏಕಾಂತ ಬಯಸಿ ಬರುವವರೇ ಜಾಸ್ತಿ

ಏಕಾಂತ ಬಯಸಿ ಬರುವವರೇ ಜಾಸ್ತಿ

ಆದರೆ ಈಗ ಹೇಮಗಿರಿಯ ಸುಂದರ ತಾಣ ಪುಂಡ ಪೋಕರಿಗಳ ಅಡ್ಡೆಯಾಗುತ್ತಿದ್ದು, ಮೋಜು ಮಸ್ತಿ ಮಾಡಲೆಂದು ಬರುವವರು ಹೆಚ್ಚಾಗಿದ್ದಾರೆ. ಇದರಿಂದ ಸುಂದರ ಪ್ರವಾಸಿ ತಾಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ಹೇಳುವಂತೆ ಇತ್ತೀಚಿನ ದಿನಗಳಲ್ಲಿ ಹೇಮಗಿರಿಯಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು ಕೊಲೆ, ಆತ್ಮಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವುದು ಬೆಚ್ಚಿ ಬೀಳಿಸುವಂತಾಗಿದೆ.

ಎಲ್ಲೆಂದರಲ್ಲಿ ರಾಶಿಬಿದ್ದ ಖಾಲಿ ಬಾಟಲಿಗಳು

ಎಲ್ಲೆಂದರಲ್ಲಿ ರಾಶಿಬಿದ್ದ ಖಾಲಿ ಬಾಟಲಿಗಳು

ಹೇಮಗಿರಿಯ ಸುತ್ತಮುತ್ತಲಿನ ನಿರ್ಜನ ಪ್ರದೇಶಕ್ಕೆ ಪ್ರತಿ ದಿನ ಸಂಜೆ ಮದ್ಯಸೇವನೆಗಾಗಿ ಜನರು ಸ್ಕೂಟರ್, ಕಾರುಗಳಲ್ಲಿ ಆಗಮಿಸುತ್ತಾರೆ. ಹೀಗೆ ಬರುವವರು ಎಲ್ಲೆಂದರಲ್ಲಿ ಕುಳಿತು ಪಾರ್ಟಿ ಮಾಡಿ ನಂತರ ಮದ್ಯದ ಖಾಲಿ ಬಾಟಲ್‌ಗಳು, ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ಕವರ್, ಮೂಳೆ ಚೂರುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುವುದರ ಜೊತೆಗೆ ಗಾಳಿಗೆ ಪ್ಲಾಸ್ಟಿಕ್ ಕವರ್‌ಗಳು ತೂರಿಕೊಂಡು ಹೋಗಿ ರಾಶಿ ಬೀಳುತ್ತಿವೆ. ಸಂಜೆ ಸಮಯದಲ್ಲಿ ಪ್ರೇಮಿಗಳಂತೆ ನಾಟಕವಾಡುತ್ತಾ ಬರುವವರು ನಿರ್ಜನ ಪ್ರದೇಶ ಸೇರಿದಂತೆ ಬೆಟ್ಟ ಹಾಗೂ ಶಾಲೆಯ ಸುತ್ತಮುತ್ತಲಿನಲ್ಲಿ ಪ್ರಣಯದಾಟವಾಡುತ್ತಾ ಮುಜುಗರವನ್ನುಂಟು ಮಾಡುತ್ತಿದ್ದು, ಇದಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ.

ಪೊಲೀಸ್ ಠಾಣೆ ಸ್ಥಾಪನೆಗೆ ಆಗ್ರಹ

ಪೊಲೀಸ್ ಠಾಣೆ ಸ್ಥಾಪನೆಗೆ ಆಗ್ರಹ

ಒಂದೇ ತಿಂಗಳಲ್ಲಿ ಎರಡು ಕೊಲೆಗಳು ಇಲ್ಲಿ ನಡೆದಿದ್ದು, ಜನಸಾಮಾನ್ಯರು ರಾತ್ರಿ ವೇಳೆಯಲ್ಲಿ ತಿರುಗಾಡಲು ಭಯಪಡುತ್ತಿದ್ದಾರೆ. ಆದ್ದರಿಂದ ಹೇಮಗಿರಿಯ ಪ್ರವೇಶದ್ವಾರದ ಬಸವಣ್ಣನ ಗುಡಿಯ ಸಮೀಪದಲ್ಲಿಯೇ ಒಂದು ಹೊರ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕು. ಹಾಗೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಾದ ಹೇಮಾವತಿ ಅಣೆಕಟ್ಟು, ಸೇತುವೆ, ದೇವಸ್ಥಾನದ ಮಂಟಪ, ಜಲವಿದ್ಯುತ್ ಸ್ಥಾವರ, ಪಂಪ್ ಹೌಸ್, ಸೇರಿದಂತೆ ಹತ್ತು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅಮ್ಮನವರ ದೇಗುಲಕ್ಕೆ ಬರುವ ಭಕ್ತರು

ಅಮ್ಮನವರ ದೇಗುಲಕ್ಕೆ ಬರುವ ಭಕ್ತರು

ಹೇಮಗಿರಿ ಸಮೀಪದಲ್ಲಿಯೇ ಚಂದಗೋನಹಳ್ಳಿ ಅಮ್ಮನವರ ದೇವಸ್ಥಾನವಿದ್ದು, ವಾರದ ನಾಲ್ಕು ದಿನಗಳು ಅಲ್ಲಿ ಪರ, ಬೀಗರ ಔತಣ, ನಾಮಕರಣ, ಸೇರಿದಂತೆ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಬಂದವರು ಮದ್ಯಪಾನ ಮಾಡಿ, ತಮಗಿಷ್ಟವಾದ ಆಹಾರವನ್ನು ತಂದು ಗಿಡ ಮರಗಳ ನೆರಳಿನಲ್ಲಿ ತಿಂದು, ಕುಡಿದು, ಪೊಟ್ಟಣ, ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದು ಹೀಗೆಯೇ ಮುಂದುವರೆದರೆ ಸುಂದರ ಪ್ರವಾಸಿ ತಾಣ ಕಸದ ತೊಟ್ಟಿಯಾಗುವ ದಿನಗಳು ದೂರವಿಲ್ಲ.

Recommended Video

    ಮಹಾಮಾರಿಗೆ Gandhi ಮರಿ ಮೊಮ್ಮಗ ಬಲಿ | Oneindia Kannada
    ನಿರ್ಲಕ್ಷ್ಯಕ್ಕೆ ತುತ್ತಾದ ಪ್ರವಾಸಿ ತಾಣ

    ನಿರ್ಲಕ್ಷ್ಯಕ್ಕೆ ತುತ್ತಾದ ಪ್ರವಾಸಿ ತಾಣ

    ಹೇಮಗಿರಿ ಪ್ರವಾಸಿ ತಾಣವಾಗಿದ್ದು, ಇತಿಹಾಸ ಪ್ರಸಿದ್ಧವಾದ ದನಗಳ ಜಾತ್ರೆಯೂ ಪ್ರತಿವರ್ಷ ಇಲ್ಲಿ ನಡೆಯುತ್ತದೆ. ಭೃಗ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಇದಾಗಿದೆ. ಇಷ್ಟೆಲ್ಲ ಇದ್ದರೂ ಈ ತಾಣವನ್ನು ಅಭಿವೃದ್ಧಿ ಮಾಡುವತ್ತ ಯಾರೂ ಚಿತ್ತ ಹರಿಸದಿರುವುದು ಎದ್ದು ಕಾಣುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಇತ್ತ ಗಮನ ನೀಡಿದಂತೆ ಕಾಣುತ್ತಿಲ್ಲ. ಇಲ್ಲಿನ ಹೇಮಾವತಿ ನದಿಗೆ ಮತ್ತು ಅಣೆಕಟ್ಟೆಯ ಕೆಳಗೆ ಇಳಿಯಲು ಸೂಕ್ತ ಮೆಟ್ಟಿಲುಗಳಿಲ್ಲ. ಪ್ರವಾಸಿಗರು ಉಳಿದುಕೊಳ್ಳಲು ಪ್ರವಾಸಿ ಮಂದಿರವೂ ಇಲ್ಲದಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ತಾಣವನ್ನು ಅಭಿವೃದ್ಧಿ ಪಡಿಸಿಸುವ ಅಗತ್ಯವಿದೆ. ಅಷ್ಟೇ ಅಲ್ಲದೆ, ಅನೈತಿಕ ಚಟುವಟಿಕೆಗಳಿಗೂ ಕಡಿವಾಣ ಹಾಕಬೇಕಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+