ಮಹಾಮಳೆಗೆ ತತ್ತರಿಸಿದ 'ಸಕ್ಕರೆ ನಗರಿ' ಮಂಡ್ಯ
ಮಂಡ್ಯ, ಸೆಪ್ಟೆಂಬರ್ 27: ಮಂಡ್ಯ ಜಿಲ್ಲೆಯಾದ್ಯಂತ ವರುಣನ ಆರ್ಭಟಕ್ಕೆ ಮನೆ, ರಸ್ತೆ ಕುಸಿತವಲ್ಲದೆ, ತಗ್ಗುಪ್ರದೇಶ ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದ ಬಳಿ ನಿರ್ಮಾಣ ಹಂತದ ಸೇತುವೆ ಕುಸಿದ ಪರಿಣಾಮ ಹಾಲಿನ ಲಾರಿ ಸಿಲುಕಿಕೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಡ್ಯದ ಗುತ್ತಲು ಕಾಲೋನಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನೀರು ನುಗ್ಗಿದ್ದು, ಗೋಡೆಗಳು ಕುಸಿದು ಬೀಳುವ ಹಂತ ತಲುಪಿದೆ.

ಸೇತುವೆ ಕುಸಿತ
ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಹಾಲಿನ ಟ್ಯಾಂಕರ್ ಸಿಲುಕಿಕೊಂಡಿದೆ. ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ಮಾಯಮ್ಮ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಆಲದ ಮರ ಬಿದ್ದ ಪರಿಣಾಮ ದೇವಸ್ಥಾನ ಸಂಪೂರ್ಣ ಜಖಂಗೊಂಡಿದೆ.

ಭತ್ತದ ಗದ್ದೆಗಳು ಜಲಾವೃತ
ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು ಬೆಳೆ ನಾಶವಾಗಿದೆ. ಗುಡಿಗೆರೆ ಗ್ರಾಮದಲ್ಲಿ ಕೆರೆಯ ಕೋಡಿ ತುಂಬಿ ಹರಿಯುತ್ತಿದ್ದು, ಗ್ರಾಮದ ಸುಮಾರು ಹತ್ತು ಎಕರೆಯಷ್ಟು ಗದ್ದೆಗಳು ಜಲಾವೃತ್ತವಾಗಿವೆ.

ಮನೆ ಕುಸಿತ; ಪ್ರಾಣಾಪಾಯದಿಂದ ಪಾರು
ಭಾರತೀನಗರ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಅರೆತಿಪ್ಪೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜಲಾವೃತ್ತಗೊಂಡಿದೆ.
ಕೆ.ಆರ್.ಪೇಟೆ ತಾಲೂಕಿನ ಜೈನ್ನಹಳ್ಳಿ ಗ್ರಾಮದ ಕಾಳೇಗೌಡ ಎಂಬುವರಿಗೆ ಸೇರಿದ ವಾಸದ ಮನೆಯು ಕುಸಿದು ಬಿದ್ದಿದೆ ಇದರಿಂದಾಗಿ ಮನೆಯೊಳಗೆ ಕಟ್ಟಿ ಹಾಕಲಾಗಿದ್ದ ಜಾನುವಾರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮನೆ ಕುಸಿತದಿಂದ ಕಾಳೇಗೌಡ ಅವರಿಗೆ ಸುಮಾರು 1ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

ಕೆ.ಆರ್.ಪೇಟೆ ಬಸ್ನಿಲ್ದಾಣ ಜಲಾವೃತ
ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮಳೆಯ ನೀರು ನುಗ್ಗಿದ್ದರಿಂದ ಬಸ್ ನಿಲ್ದಾಣದೊಳಗಿರುವ ಬೈಕ್ ಸ್ಟಾಂಡ್ ಸಂಪೂರ್ಣ ನೀರಿನಿಂದ ಆವೃತಗೊಂಡಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಡಿಸಿಸಿ ಬ್ಯಾಂಕ್ ಕಟ್ಟಡದ ಸುತ್ತಲೂ ಇರುವ ಪುರಸಭೆಯ ಖಾಲಿ ನಿವೇಶನದಲ್ಲಿ ಸುಮಾರು ಐದಾರು ಅಡಿ ಎತ್ತರದಲ್ಲಿ ನೀರು ನಿಂತಿದ್ದು ಬ್ಯಾಂಕಿನ ಜನರೇಟರ್ ಕೊಠಡಿಗೆ ನೀರು ನುಗ್ಗಿದೆ.
ಅಲ್ಲದೆ ಬ್ಯಾಂಕ್ ಕಟ್ಟಡದ ಸುತ್ತಲೂ ಕಳೆದ 15ದಿನಗಳಿಂದಲೂ ನೀರು ಹೊರಹೋಗದೇ ನಿಂತಿರುವ ಕಾರಣ ಕಟ್ಟಡದ ಗೋಡೆಗಳು ನೀರಿನಿಂದ ತೇವಾಂಶಗೊಂಡಿದ್ದು ಅಪಾಯ ಸಂಭವಿಸುವ ಸಾಧ್ಯತೆಗಳಿವೆ.

ಪ್ರಯಾಣಿಕರ ಪರದಾಟ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮಳೆ ನೀರು ಹೊರಹೋಗಲು ಸುವ್ಯಸ್ಥಿತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾತ್ರಿಯಿಂದಲೂ ನೀರು ಕೆರೆಯಂತೆ ನಿಂತಿದೆ. ಇದರಿಂದ ಬೈಕ್ ಮಾಲೀಕರು ತಮ್ಮ ಬೈಕ್ ನಿಲ್ಲಿಸಲು ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ.
ಒಟ್ಟಾರೆ ಸಕ್ಕರೆ ನಗರಿ ಮಂಡ್ಯ ಕೂಡ ವರುಣನ ಆರ್ಭಟಕ್ಕೆ ತಲ್ಲಣಗೊಂಡಿದ್ದು, ಕೆರೆಕಟ್ಟೆಗಳು ತುಂಬತೊಡಗಿವೆ. ಕಳೆದ ಕೆಲವು ವರ್ಷಗಳಿಂದ ಮಳೆ ಬಾರದೆ ಬರದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಮಳೆ ಸುರಿಯುತ್ತಿದ್ದು ಈಗ ಕಷ್ಟವಾದರೂ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.












Click it and Unblock the Notifications