ಮಹಾಮಳೆಗೆ ಧುಮ್ಮಿಕ್ಕುತ್ತಿವೆ ಕಾವೇರಿ ಕೊಳ್ಳದ ಅಣೆಕಟ್ಟೆಗಳು
ಮಂಡ್ಯ, ಆಗಸ್ಟ್ 9: ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಆರಂಭವಾಗಬೇಕಾಗಿದ್ದ ಮುಂಗಾರು ಮಳೆ ಜುಲೈ ಕಳೆದರೂ ಆಗಮನವಾಗಲಿಲ್ಲ. ಆದರೆ ಆಗಸ್ಟ್ ತಿಂಗಳ ಆರಂಭದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಹೀಗಾಗಿ ಕಾವೇರಿ ಕೊಳ್ಳದ ಕೆ ಆರ್ ಎಸ್, ಮೈಸೂರಿನ ಕಬಿನಿ, ಕೊಡಗಿನ ಹಾರಂಗಿ, ಹಾಸನದ ಹೇಮಾವತಿ ಜಲಾಶಯಗಳಲ್ಲಿ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ.
ವರುಣನ ಆರ್ಭಟ: ಉತ್ತರ ಕರ್ನಾಟಕದಲ್ಲಿ ಮಳೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನಲ್ಲಿ ಪ್ರವಾಹವೇ ಸೃಷ್ಟಿಯಾಗಿದೆ. ಜನ- ಜಾನುವಾರುಗಳು ಸಂಕಷ್ಟದಲ್ಲಿದ್ದು ರಕ್ಷಣೆಗಾಗಿ ಪರಿತಪಿಸುತ್ತಿದ್ದಾರೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ಕಾವೇರಿ ಕೊಳ್ಳದ ಪ್ರಮುಖ ನಾಲ್ಕು ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಅಣೆಕಟ್ಟುಗಳು ಜಲಧಾರೆಯಿಂದ ವಿಜೃಂಭಿಸುತ್ತಿದೆ. ಜಡಿಮಳೆಯಿಂದಾಗಿ ಮೂರು ದಿನಗಳಲ್ಲಿ ನಿರೀಕ್ಷೆಗೆ ಮೀರಿ ಈ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಕೆಆರ್ ಎಸ್ ನಲ್ಲಿ ಮೂರು ದಿನದಲ್ಲಿಯೇ 9 ಅಡಿ ನೀರು ಹೆಚ್ಚಳವಾಗಿದೆ. ಒಳ ಹರಿವಿನ ಪ್ರಮಾಣ ಪ್ರಸ್ತುತ 37,375 ಕ್ಯೂಸೆಕ್ ದಾಖಲಾಗಿದೆ.

ಆ.7ರಂದು ಬೆಳಗ್ಗೆ 86.90 ಅಡಿ ಇದ್ದ ಜಲಾಶಯದ ನೀರಿನ ಮಟ್ಟವು ಸಂಜೆ ವೇಳೆಗೆ 88.60 ಅಡಿ ತಲುಪಿತ್ತು. ಪುನಃ ಆ.8ರಂದು 91 ಅಡಿಗೇರಿತ್ತು. ಸಂಜೆ ವೇಳೆಗೆ 93.50 ಅಡಿ ಮುಟ್ಟಿದೆ. ಇದರ ನಡುವೆ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ಸ್ಥಗಿತಗೊಳಿಸಲಾಗಿದೆ. ಒಳಹರಿವಿನ ಪ್ರಮಾಣ 37,375 ಕ್ಯುಸೆಕ್ ಗೆ ಏರಿಕೆಯಾಗಿದ್ದು, ಅಣೆಕಟ್ಟೆಯಿಂದ 421 ಕ್ಯುಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ.

ಕಬಿನಿ ಡ್ಯಾಂನಿಂದ ಮಧ್ಯರಾತ್ರಿ ಹೆಚ್ಚಿನ ನೀರು ಬಿಡುಗಡೆ ಮಾಡಿರುವುದರಿಂದ ಅಂತಾರಾಜ್ಯ ಸಂಪರ್ಕಕ್ಕೆ ಸಮಸ್ಯೆಯಾಗಿದೆ. ಊಟಿ-ಮೈಸೂರು ಸಂಚಾರ ಬಂದ್ ಮಾಡಲಾಗಿದೆ. ಕಬಿನಿ ಜಲಾಶಯದ ಒಳ ಹರಿವು 80 ಸಾವಿರ ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದ 4 ಕ್ರಸ್ಟ್ ಗೇಟ್ ಮುಖಾಂತರ ನದಿಗೆ ಬಿಡಲಾಗುತ್ತಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಜಲಾಶಯದ ಸಂರಕ್ಷಣೆ ದೃಷ್ಟಿಯಿಂದ ಜಲಾಶಯದ ಮಟ್ಟವನ್ನು 2282 ಅಡಿಗೆ ಕಾಯ್ದಿರಿಸಿಕೊಳ್ಳಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 19.55 ಟಿಎಂಸಿ ಆಗಿದ್ದು, ಸದ್ಯಕ್ಕೆ ಜಲಾಶಯದಲ್ಲಿ 17 ಟಿಎಂಸಿ ನೀರು ಇದೆ. ಇನ್ನು ಕಬಿನಿ ಜಲಾಶಯದಿಂದ ನದಿಗೆ 1,00,000 ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆ ತೆಗೆಯುವ ಪ್ರಶ್ನೆಯೇ ಇಲ್ಲ ಎಂಬಂತಾಗಿದೆ.
ಅಬ್ಬಾ, ನೀರು ತುಂಬಿದ ಸೇತುವೆ ಮೇಲೇ ಬಸ್ ಸಂಚಾರ
ಕೊಡಗಿನ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗದ್ದು, 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಪ್ರಸಕ್ತ 2852.50 ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. 8.5 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 5.723 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ 35 ಸಾವಿರ ಒಳಹರಿವು ಕಂಡುಬಂದಿದೆ.

ಹೇಮಾವತಿ ಜಲಾಶಯದ ಒಳಹರಿವು 97,300 ಕ್ಯೂಸೆಕ್ ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 25,900 ಕ್ಯೂಸೆಕ್ ನೀರನ್ನು ಹೊರಬಿಡುವ ಮೂಲಕ ಅಣೆಕಟ್ಟೆಯಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಜಲಾಶಯದ ಆರು ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರ ಹರಿಸಲಾಗುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಅಣೆಕಟ್ಟೆಯತ್ತ ಹರಿದು ಬರುತ್ತಿದೆ.












Click it and Unblock the Notifications