ಸಿಎಂ ಆಗಬೇಕೆಂದು ಹೆಚ್.ಡಿ. ಕುಮಾರಸ್ವಾಮಿ ನನ್ನ ಬಳಿ ಕೈಕಟ್ಟಿ ನಿಂತಿದ್ದರು ಎಂದ ಸಚಿವ
ಮುಖ್ಯಮಂತ್ರಿ ಆಗಬೇಕೆಂದು ಎಚ್.ಡಿ.ಕುಮಾರಸ್ವಾಮಿ ಅವರೇ ನನ್ನ ಬಳಿ ಕೈಕಟ್ಟಿಕೊಂಡು ನಿಂತಿದ್ದರು, ಅಂದು ಜನ ಗೆಲ್ಲಿಸಿದ್ದಕ್ಕೆ ನಾನು ಸಚಿವನಾಗಿ ಕೆಲಸ ಮಾಡಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿದ್ದರು ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎನ್. ಚಲುವರಾಯಸ್ವಾಮಿ, ಮಾಜಿ ಸಿಎಂ ಹೆಚ್ಡಿಕೆ ಅವರೇ ನನ್ನ ಮುಂದೆ ಕೈಕಟ್ಟಿ ನಿಂತಿದ್ದರು ಎಂದಿದ್ದಾರೆ.

ಮಂಡ್ಯ ನಗರದಲ್ಲಿ ₹43 ಕೋಟಿ ವೆಚ್ಚದಲ್ಲಿ ಇಲ್ಲಿನ ಫ್ಯಾಕ್ಟರಿ ಸರ್ಕಲ್ ಹಾಗೂ ಜೆ.ಸಿ.ವೃತ್ತದಲ್ಲಿ ಹೈಟೆಕ್ ಮಾದರಿ ವೃತ್ತ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
₹1000 ಕೋಟಿ ಅನುದಾನ ತಂದಿದ್ದೀನಿ ಎಂದು ಬರಿ ಬಾಯಲ್ಲಿ ಹೇಳುವುದಿಲ್ಲ. ಅಭಿವೃದ್ಧಿ ಬಗ್ಗೆಯಷ್ಟೇ ನಾವು ಮಾತನಾಡುತ್ತೇವೆ. ಅನುದಾನ ತಂದು ಕೆಲಸ ಮಾಡುತ್ತಿದ್ದೇವೆ. ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ದುಂಬಾಲು ಬಿದ್ದಿದ್ದರು ಎಂದು ಹೇಳಿಕೆ ನೀಡುವ ಹೆಚ್.ಡಿ. ಕುಮಾರಸ್ವಾಮಿ ಅವರು, ಸಿಎಂ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿದ್ದರು, ಅವರಪ್ಪ, ಅವರ ಭಾವ ಬೇಡ ಎಂದಾಗ, 39 ಜನ ಶಾಸಕರ ಬಳಿ ಅವರು ಹೇಗೆ ನಿಂತಿದ್ದರು ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನನ್ನು ಜನ ಗೆಲ್ಲಿಸಿದ್ದಕ್ಕೆ ಮಂತ್ರಿ ಮಾಡಿದ್ದರು, ಈಗಲೂ ಜನ ಗೆಲ್ಲಿಸಿರುವುದಕ್ಕೆ ಮಂತ್ರಿ ಮಾಡಿದ್ದಾರೆ ಇದರಲ್ಲಿ ದುಂಬಾಲು ಬೀಳುವುದೇನಿದೆ? ಜೆಡಿಎಸ್ನವರು ಹಳೇ ಭಾಷಣ ಹೊಡೆಯುತ್ತಿದ್ದಾರೆ. ಭಾಷಣದಲ್ಲಿ ಅವರು ಮುಂದೆ ಇದ್ದಾರೆ, ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ನಾವು ಬರೀ ಬಾಯಲ್ಲಿ ಹೇಳಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ಕೆಲವರಿಗೆ ಮಂಡ್ಯ ಅಭಿವೃದ್ಧಿ ಬೇಕಿಲ್ಲ. ಹೊಸ ಫ್ಯಾಕ್ಟರಿ ಬೇಡ, ಕೃಷಿ ವಿವಿಯೂ ಬೇಡ ಅವರಿಗೆ, ಇವರು ಮೆಡಿಕಲ್ ಕಾಲೇಜನ್ನು ಸ್ಥಳಾಂತರ ಮಾಡಲು ಹೇಳುತ್ತಾರೆ, ಅಭಿವೃದ್ಧಿ ಆದರೆ ಜಿಲ್ಲೆ ಇವರ ಹಿಡಿತಕ್ಕೆ ಸಿಗಲ್ಲವಲ್ಲ ಎಂದು ಡಿ.ಸಿ.ತಮ್ಮಣ್ಣ ಅವರ ವಿರೋಧಕ್ಕೆ ಉತ್ತರಿಸಿದರು.
ಯಾರನ್ನೋ ಕೇಳಿ ನಾನು ತೀರ್ಮಾನ ಮಾಡಬೇಕಾಗಿಲ್ಲ, ಜನರ ಅಗತ್ಯಗಳಿಗೆ ಅಭಿವೃದ್ಧಿ ಮಾಡುತ್ತಿದ್ದೇವೆ, ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಮಾತನ್ನು ಎಚ್ಡಿಕೆ ಅವರು ಹೇಳುತ್ತಾರೆ ಹಾಗಾದರೆ ಕಾಂಗ್ರೆಸ್ನಲ್ಲಿ ಒಕ್ಕಲಿಗರಿಲ್ಲವೇ ನಾವು ಒಕ್ಕಲಿಗರಲ್ಲವಾ, ಜಾತಿ ರಾಜಕಾರಣವನ್ನ ಜನ ಈಗ ಒಪ್ಪಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದರು.
ಹೊಟ್ಟೆಪಾಡಿಗಾಗಿ ಜೆಡಿಎಸ್ನವರು ಬಿಜೆಪಿ ಜೊತೆ ಹೋಗಿದ್ದಾರೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ, ಆ ಮಾತನ್ನು ನಾನು ಹೇಳಿದ್ದರೆ ಬೇರೆ ರೀತಿ ಹೇಳಿರುತ್ತೇನೆ ಅಷ್ಟೇ, ಬೆಂಗಳೂರು ಗ್ರಾಮಾಂತರ ಇವರ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಚಿಹ್ನೆ ಬಳಸದೇ ಬಿಜೆಪಿ ಚಿಹ್ನೆ ಬಳಸಿ ಡಾ.ಮಂಜುನಾಥ್ ಅವರನ್ನು ನಿಲ್ಲಿಸಿರುವುದು ಏಕೆ? ಮಂಜುನಾಥ್ ಅವರ ಬಗ್ಗೆ ಅಪಾರ ಗೌರವವಿದೆ, ಇವರ ಪಕ್ಷದ ಚಿಹ್ನೆ ಮೇಲೆ ವಿಶ್ವಾಸವಿಲ್ಲವೇ ಎಂದು ಪ್ರಶ್ನಿಸಿದರು.












Click it and Unblock the Notifications