'ದೇವೇಗೌಡ, ಸಿದ್ದರಾಮಯ್ಯ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ'
Recommended Video

ಮಂಡ್ಯ, ಅಕ್ಟೋಬರ್ 23 : 'ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವು ಮುಂಗುಸಿ ಇದ್ದಂತೆ. ಅವರಿಬ್ಬರೂ ಒಂದಾಗುತ್ತಾರೆ ಎಂದರೆ ಅದನ್ನು ಜನರು ನಂಬುವುದಿಲ್ಲ' ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಆರ್.ಅಶೋಕ ಹೇಳಿದರು.
ಆರ್.ಅಶೋಕ ಮಂಡ್ಯದಲ್ಲಿ ಲೋಕಸಭೆ ಉಪ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, 'ಇಬ್ಬರೂ ಸೇರಿ ಜನರಿಗೆ ಮಂಕುಬೂದಿ ಎರಚಿ ಉಪ ಚುನಾವಣೆ ಗೆಲ್ಲಲು ಹೊರಟಿದ್ದಾರೆ' ಎಂದು ಆರೋಪಿಸಿದರು.
'ಈ ಉಪ ಚುನಾವಣೆ ನ್ಯಾಯ-ಅನ್ಯಾಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಬಿಜೆಪಿ ಕಾರ್ಯಕರ್ತರ ಇದರ ಸದುಪಯೋಗ ಪಡೆದುಕೊಳ್ಳಬೇಕು. ಎರಡೂ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ' ಎಂದು ಅಶೋಕ್ ತಿಳಿಸಿದರು.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಕಣದಲ್ಲಿದ್ದಾರೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ....

ಒಂದೇ ವೇದಿಕೆ ಹಂಚಿಕೊಂಡಿದ್ದಾರೆ
'ದೇವೇಗೌಡರು ಮತ್ತು ಸಿದ್ದರಾಮಯ್ಯ ಮೊನ್ನೆ ಒಂದೇ ವೇದಿಕೆಯಲ್ಲಿ ಕುಳಿತು ಮಾತನಾಡಿದ್ದಾರೆ. ಹಾವು-ಮುಂಗುಸಿ ಎಂದಾದರೂ ಒಂದಾಗುತ್ತವೆಯೇ?. ಅವರಿಬ್ಬರೂ ಒಂದಾಗುತ್ತಾರೆ ಎಂದರೆ ಜನರು ನಂಬುವುದಿಲ್ಲ. ಜನರಿಗೆ ಮಂಕುಬೂದಿ ಎರಚಿ ಉಪ ಚುನಾವಣೆ ಗೆಲ್ಲಲು ಹೊರಟಿದ್ದಾರೆ' ಎಂದು ಆರ್.ಅಶೋಕ ಆರೋಪಿಸಿದರು.

ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ
'2018ರ ವಿಧಾನಸಭೆ ಚುನಾವಣೆ ಬಳಿಕ ಅಪವಿತ್ರ ಮೈತ್ರಿ ಮಾಡಿಕೊಂಡು ಈ ತಾಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದಾರೆ. ಜನರು ನೀಡಿದ ಆದೇಶವನ್ನು ತಿರಸ್ಕಾರ ಮಾಡಿ ಸರ್ಕಾರವನ್ನು ರಚನೆ ಮಾಡಿದ್ದಾರೆ' ಎಂದು ಅಶೋಕ ದೂರಿದರು.

ಸರ್ಕಾರ ಇರುವ ಬಗ್ಗೆ ನಂಬಿಕೆ ಇಲ್ಲ
'ರಾಜ್ಯದಲ್ಲಿ ಸರ್ಕಾರ ಬಂದು 5 ತಿಂಗಳು ಕಳೆದಿದೆ. ಆದರೆ, ಸರ್ಕಾರ ಇದೆ ಎಂಬ ನಂಬಿಕೆಯೇ ರಾಜ್ಯದ ಜನರಿಗೆ ಇಲ್ಲವಾಗಿದೆ. ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಏದುಸಿರು ಬಿಡುತ್ತಿದ್ದಾರೆ. ಇದರಿಂದ ರೈತರು ಹತಾಶರಾಗಿ ಆತ್ಮಹತ್ಯೆಗೆ ಇಳಿದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿಯೇ 250ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದರು.

ರಾಷ್ಟ್ರೀಯ ಪಕ್ಷದ ಲಕ್ಷಣವಲ್ಲ
'ಶಿವಮೊಗ್ಗ, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸದೇ ಜೆಡಿಎಸ್ ಪಕ್ಷಕ್ಕೆ ಶರಣಾಗಿದೆ. ಇದು ರಾಷ್ಟ್ರೀಯ ಪಕ್ಷದ ಲಕ್ಷಣವಲ್ಲ. ಇದರ ಲಾಭವನ್ನು ಬಿಜೆಪಿ ಕಾರ್ಯಕರ್ತರು ಪಡೆದುಕೊಳ್ಳಬೇಕು. ಈ ಉಪಚುನಾವಣೆ ನ್ಯಾಯ-ಅನ್ಯಾಯಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದೆ' ಎಂದು ಅಶೋಕ ಹೇಳಿದರು.












Click it and Unblock the Notifications