ಸಚಿವ ನಾರಾಯಣ ಗೌಡರಿಗೆ ಮಾಜಿ ಸ್ಪೀಕರ್ ಕೃಷ್ಣ ಹೇಳಿದ ಕಿವಿಮಾತೇನು?
ಮಂಡ್ಯ, ಫೆಬ್ರವರಿ 20: ರಾಜಕೀಯದ ಹೊಸ ಬೆಳವಣಿಗೆಯಲ್ಲಿ ಒಂದಷ್ಟು ಬದಲಾವಣೆಗಳಾಗುತ್ತಿದ್ದು, ಸದ್ಯ ಜೆಡಿಎಸ್ ಭದ್ರಕೋಟೆ ಎಂದೇ ಹೇಳುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣ ಗೌಡರು ಗೆಲುವು ಪಡೆಯುವುದರೊಂದಿಗೆ ಕಮಲದ ಅಲೆ ಆರಂಭವಾದಂತೆ ಕಾಣತೊಡಗಿದೆ.
ಇದೆಲ್ಲದರ ನಡುವೆ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್, ಮಂಡ್ಯದ ಗಾಂಧಿಯೆಂದೇ ಜನಪ್ರಿಯರಾಗಿರುವ ಸರಳ ಸಜ್ಜನ ರಾಜಕಾರಣಿ ಕೃಷ್ಣ ಅವರು ನಾರಾಯಣ ಗೌಡರಿಗೆ ಕಿವಿಮಾತು ಹೇಳಿರುವುದು ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ ನಾರಾಯಣಗೌಡರಿಗೆ ಇದೀಗ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಅವರ ಕೆಲ ಹಿಂಬಾಲಕರು ಸದ್ದಿಲ್ಲದೆ, ಜೆಡಿಎಸ್ ತೊರೆದು ಬಿಜೆಪಿ ಕಡೆಗೆ ಒಲವು ತೋರುತ್ತಿರುವುದು ಕಂಡು ಬರತೊಡಗಿದೆ.

ದೇವೇಗೌಡರ ಕುಟುಂಬದ ಬಗ್ಗೆ ಆರೋಪ
ಈ ನಡುವೆ ನಾರಾಯಣಗೌಡರು ತನಗೆ ದೇವೇಗೌಡರ ಕುಟುಂಬದಿಂದ ಸಾಕಷ್ಟು ಮಾನಸಿಕ ಹಿಂಸೆ ಆಗುತ್ತಿದೆ. ಜತೆಗೆ ಅವರ ಮನೆಯ ಹೆಣ್ಣು ಮಕ್ಕಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂಬ ಹೇಳಿಕೆ ನೀಡುವ ಮೂಲಕ ದೇವೇಗೌಡರ ಕುಟುಂಬದ ಬಗ್ಗೆ ಹತ್ತು ಹಲವು ಆರೋಪಗಳನ್ನು ಮಾಡಿದ್ದರು. ಇದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದಾದ ನಂತರ ಜೆಡಿಎಸ್ ನ ಕೆಲವು ಮುಖಂಡರು ಮಾತನಾಡತೊಡಗಿದ್ದರು. ಆದರೆ ಇದ್ಯಾವುದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೆ ಹೋದರೂ ಸರಳ ಸಜ್ಜನ ರಾಜಕಾರಣಿ ಕೃಷ್ಣ ಅವರು ಕೂಡ ದೇವೇಗೌಡರ ಕುಟುಂಬದಿಂದ ಅನುಭವಿಸಿದ ಕಿರಿಕಿರಿಯನ್ನು ಒಪ್ಪಿಕೊಂಡಿದ್ದಾರೆ.

ನಾರಾಯಣ ಗೌಡರಿಗೆ ಮಾಜಿ ಸ್ಪೀಕರ್ ಕೃಷ್ಣ ಕಿವಿ ಮಾತಿದು
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ಹಿರಿಯ ಮುಖಂಡ ಬಿ.ಜವರಾಯಿಗೌಡ ಅವರು ಸಚಿವ ನಾರಾಯಣಗೌಡರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರು ನಾರಾಯಣ ಗೌಡರನ್ನು ಸನ್ಮಾನಿಸುತ್ತಾ ಒಂದಷ್ಟು ಕಿವಿಮಾತು ಹೇಳಿದ್ದಾರೆ. ಅದೇನು ಎಂಬುದು ಇಲ್ಲಿದೆ. ನಾನೂ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ, ವಿಧಾನಸಭೆಯ ಸ್ಪೀಕರ್ ಆಗಿ ಕೆಲಸ ಮಾಡಿದ್ದೇನೆ. ದೇವೇಗೌಡರ ಕುಟುಂಬದಿಂದ ಮಾನಸಿಕ ಕಿರುಕುಳ ಅನುಭವಿಸಿದ ಬಗ್ಗೆ ಮಾತನಾಡಿದಿರಿ. ನಾರಾಯಣ ಗೌಡರೇ ನಿಮ್ಮಿಂದ ಈ ಮಾತುಗಳು ಬರಬಾರದು, ರಾಜಕಾರಣದಲ್ಲಿ ಇವೆಲ್ಲ ಮಾಮೂಲು ಎಂದು ಕಿವಿ ಮಾತು ಹೇಳಿದ್ದಾರೆ.

"ಇನ್ಯಾರ ಸರ್ಟಿಫಿಕೇಟ್ ನಿಮಗೆ ಬೇಕಿದೆ?"
"ಮಂಡ್ಯ ಜಿಲ್ಲೆಯಲ್ಲಿ, ಅದು ಕೃಷ್ಣರಾಜಪೇಟೆ ತಾಲೂಕಿನಲ್ಲಿ ಕಮಲ ಅರಳಿಸಿ ಶಾಸಕರಾಗಿದ್ದೀರಿ. ಹ್ಯಾಟ್ರಿಕ್ ಸಾಧನೆ ಮಾಡಿ ಇತಿಹಾಸವನ್ನೇ ನಿರ್ಮಿಸಿದ್ದೀರಿ. ಇನ್ಯಾರ ಸರ್ಟಿಫಿಕೇಟ್ ನಿಮಗೆ ಬೇಕಾಗಿದೆ ಹೇಳಿ? ಕೃಷ್ಣರಾಜಪೇಟೆ ತಾಲೂಕಿನ ಇತಿಹಾಸದಲ್ಲಿ 25 ವರ್ಷಗಳ ನಂತರ ನೀವು ಸಚಿವರಾಗಿ ಮೂರು ಪ್ರಮುಖವಾದ ಖಾತೆಗಳನ್ನು ಪಡೆದುಕೊಂಡಿದ್ದೀರಿ. ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಬಲ ಕೊಡುವ ಸಲುವಾಗಿ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಗೆ ಹೋಗಿ ಮತ್ತೊಮ್ಮೆ ಗೆದ್ದು ಸಚಿವರಾಗಿರುವುದು ಕಡಿಮೆ ವಿಚಾರವಲ್ಲ" ಎಂದು ಹೊಗಳಿದ್ದಾರೆ.

"ಹೊಗಳುಭಟರನ್ನು ದೂರವಿಡಿ, ಪಕ್ಷಾತೀತರಾಗಿ ಕೆಲಸ ಮಾಡಿ"
"ನಿಮ್ಮ ಒಳ್ಳೆಯ ಕೆಲಸಗಳಿಗೆ ನನ್ನ ಬೆಂಬಲವಿದೆ. ನಿಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಳ್ಳಿ, ಪಿಎಗಳು ಮತ್ತು ಪಿಎಸ್ ಗಳು ಒಳ್ಳೆಯವರಾಗದೆ ಹೋದರೆ ನಿಮಗೆ ಕೆಟ್ಟ ಹೆಸರನ್ನು ತರುತ್ತಾರೆ. ಆದ್ದರಿಂದ ಜೋಪಾನವಾಗಿ ಕೆಲಸ ಮಾಡಿ. ಭಟ್ಟಂಗಿಗಳು ಹಾಗೂ ಹೊಗಳು ಭಟರನ್ನು ದೂರವಿಟ್ಟು ಪಕ್ಷಾತೀತವಾಗಿ ಕೆಲಸ ಮಾಡಿ. ಇಂತಹ ಅವಕಾಶ ನಮ್ಮ ತಾಲೂಕಿಗೆ ಮತ್ತೆ ಸಿಗಲ್ಲ" ಎನ್ನುವ ಮೂಲಕ ಸಚಿವ ನಾರಾಯಣ ಗೌಡರಿಗೆ ಧೈರ್ಯ ತುಂಬಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಹೊಸತೊಂದು ಶಕೆ ಆರಂಭವಾಗಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications