ಮಗನನ್ನು ಶಾಸಕ ಮಾಡಲು ಕುಮಾರಸ್ವಾಮಿ ಪ್ರತಿಜ್ಞೆ?: ಕ್ಷೇತ್ರ ಯಾವುದು?
Recommended Video
ಮಂಡ್ಯ, ಆಗಸ್ಟ್ 3: ಮಗನನ್ನು ಶಾಸಕನನ್ನಾಗಿ ಮಾಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಣತೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಸಕರನ್ನು ಅನರ್ಹಗೊಳಿಸಿರುವುದು ಅವರಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ. ಹೌದು ಮಗ ಸಂಸದನಂತೂ ಆಗಿಲ್ಲ ಕೊನೆಯ ಪಕ್ಷ ಶಾಸಕನನ್ನಾಗಿಯಾದರೂ ಮಾಡಬೇಕು ಎಂದು ಪ್ರತಿಜ್ಞೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅವರ ಎದುರು ನಿಂತು ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಇನ್ನೊಂದೆಡೆ ಎಚ್ಡಿ ದೇವೇಗೌಡ ಅವರು ಕೂಡ ತುಮಕೂರಿನಿಂದ ನಿಂತು ಸೋತಿದ್ದರು. ಪ್ರಜ್ವಲ್ ರೇವಣ್ಣ ಮಾತ್ರ ಹಾಸನದಿಂದ ನಿಂತು ಜಯಗಳಿಸಿದ್ದರು.

ಈಗ ನಿಖಿಲ್ ಕುಮಾರಸ್ವಾಮಿಯನ್ನು ಶಾಸಕನನ್ನಾಗಿ ಮಾಡಲೇಬೇಕು ಎಂದು ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ.ಮಂಡ್ಯ ಲೋಕಸಭಾ ಚುನಾವಣೆ ಸೋಲಿಗೆ ಕೆ.ಆರ್ ಪೇಟೆ ವಿಧಾನಸಭೆ ಚುನಾವಣೆ ಸವಾಲಾಗಿದೆ.
ಮಂಡ್ಯದಲ್ಲೇ ನಿಖಿಲ್ ರಾಜಕೀಯ ಭವಿಷ್ಯ ರೂಪಿಸಲು ಅಂದೇ ಎಚ್ಡಿಕೆ ಶಪಥ ಮಾಡಿದ್ದು, ಕೆ.ಆರ್.ಪೇಟೆ ಕ್ಷೇತ್ರ ಉಪ ಚುನಾವಣೆಗೆ ಮಗನನ್ನ ಇಳಿಸಲು ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ಬಳಿಕ ನಿಖಿಲ್ ಸ್ಪರ್ಧೆ ಬಗ್ಗೆ ಘೋಷಣೆ ಸಾಧ್ಯತೆ ಗಳಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಬಿಟ್ಟು, ಜೆಡಿಎಸ್ ಪ್ರಾಬಲ್ಯವಿರುವ ಹುಣಸೂರು, ಕೆ.ಆರ್.ಪೇಟೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಕುಮಾರಸ್ವಾಮಿ ಅವರ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮುನಿರತ್ನ ಶಾಸಕರಾಗಿರುವ ಆರ್.ಆರ್.ನಗರವೂ ನಿಖಿಲ್ ಅವರ ಆಯ್ಕೆಯಲ್ಲಿದ್ದು, ಆರ್.ಆರ್.ನಗರದಲ್ಲಿ ಕಳೆದ ಬಾರಿ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಧಕ್ಕಿರಲಿಲ್ಲ. ಹಾಗಾಗಿ ಈಗ ಮುಂದೆ ನಡೆಯುವ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಆರ್.ಆರ್.ನಗರದ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ಸಾಗುತ್ತಿದೆ.
ಕೆಆರ್ ಪೇಟೆಯು ಜೆಡಿಎಸ್ ಭದ್ರಕೋಟೆ ಕೋಟೆಯಾಗಿದ್ದು, ಒಕ್ಕಲಿಗ ಮತದಾರರ ಪ್ರಾಬಲ್ಯವಿದೆ. ಎಚ್ಡಿಕೆ ಸರ್ಕಾರ ಕೆಡವಲು ನಾರಾಯಣಗೌಡ ಸಹ ಕಾರಣ ಅನ್ನೋ ಜನರ ಸಿಟ್ಟು ಗೌಡರ ಕುಟುಂಬಕ್ಕೆ ಸಹಾಯವಾಗಬಹುದು.
ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಕೆಆರ್ಪೇಟೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications