ಹೊಸ ಪ್ರಯೋಗ; ಹೆರ್ಜ್ಜಾಲೆ ವಲಸೆ ಅರಿಯಲು ಜಿಪಿಎಸ್ ಟ್ಯಾಗ್!
ಮಂಡ್ಯ, ಆಗಸ್ಟ್ 23; ಹೆಜ್ಜಾರ್ಲೆ (ಪೆಲಿಕನ್) ಹಕ್ಕಿಗಳ ವಲಸೆ ಮತ್ತು ಅವುಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಎರಡು ಪೆಲಿಕನ್ಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಸಲು ತಯಾರಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಅಕ್ಟೋಬರ್ನಲ್ಲಿ ಎರಡು ಹೆಜ್ಜಾರ್ಲೆಗಳಿಗೆ ಸೋಲಾರ್ ಶಕ್ತಿಯ ಜಿಪಿಎಸ್-ಜಿಎಸ್ಎಂ ಪೆಟಾಜಿಯಲ್ ಟ್ಯಾಗ್ ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆ.
ಇದಕ್ಕಾಗಿ 4 ಲಕ್ಷ ರೂ. ವೆಚ್ಚದಲ್ಲಿ ಜರ್ಮನಿಯಿಂದ ಉಪಕರಣ ತರಿಸಲಾಗುತ್ತಿದೆ. ಈ ಕಾರ್ಯಕ್ಕೆ ಪಿಸಿಸಿಎ ಅವರು ಈಗಾಗಲೇ ಅನುಮತಿ ನೀಡಿದ್ದು, ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಘಟನೆಯೂ ಕೈ ಜೋಡಿಸಿದೆ.

ಏನಿದು ಜಿಪಿಎಸ್ ಟ್ಯಾಗ್?; ಕೊಕ್ಕರೆ ಬೆಳ್ಳೂರು ಬೇರೆ ಪಕ್ಷಿಧಾಮಕ್ಕಿಂತಲೂ ಭಿನ್ನವಾಗಿದೆ. ಇಲ್ಲಿ ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಯಾವುದೇ ತಾಣ ಅಥವಾ ಸ್ಥಳಗಳಿಲ್ಲ. ಬದಲಿಗೆ ಇದೊಂದು ಗ್ರಾಮವಾಗಿದ್ದು, ಇಲ್ಲಿ ಹೆಜ್ಜಾರ್ಲೆ (ಪೆಲಿಕನ್) ಹಾಗೂ ಬಣ್ಣದ ಕೊಕ್ಕರೆ (ಪೇಟೆಂಡ್ ಸ್ಟ್ರೋಕ್)ಯಂತಹ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿವೆ.
ಜೊತೆಗೆ ಹಕ್ಕಿಗಳ ಸಂತಾನೋತ್ಪತ್ತಿಗೂ ಇದು ಪ್ರಶಸ್ತ ತಾಣವಾಗಿ ಮಾರ್ಪಟ್ಟಿದೆ. ಮೊದಲು ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ನಂತರ ಮರಿಹಕ್ಕಿ ಹಾರಾಟ ನಡೆಸುವಷ್ಟು ಶಕ್ತವಾದ ಬಳಿಕ ಅದರೊಂದಿಗೆ ವಾಪಸ್ ತನ್ನೂರಿಗೆ ಹೋಗುತ್ತದೆ. ಸಾಮಾನ್ಯವಾಗಿ ಕೊಕ್ಕರೆ ಬೆಳ್ಳೂರಿಗೆ ಸೈಬೀರಿಯಾದಿಂದ ಪೆಲಿಕನ್ಗಳು ಬರುತ್ತವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.
1864 ರಿಂದಲೂ ಎಲ್ಲಾ ದಾಖಲೆಗಳಲ್ಲೂ ಇದೇ ರೀತಿ ನಮೂದಾಗಿದೆ. ಹೆಜ್ಜಾರ್ಲೆ ಅಕ್ಟೋಬರ್ನಲ್ಲಿ ಬಂದು ಜುಲೈನಲ್ಲಿ ವಾಪಸ್ ಹೋಗುತ್ತದೆ. ಈ ನಡುವೆ ಸಿಗುವುದು 3 ತಿಂಗಳ ಅಂತರ ಮಾತ್ರ. ಹೀಗಿರುವಾಗ 3 ತಿಂಗಳ ಅವಧಿಯಲ್ಲಿ ಮತ್ತೆ ಸೈಬಿರಿಯಾದಿಂದ ಬರಲು ಹೇಗೆ ಸಾಧ್ಯ?, ಪೆಲಿಕನ್ ವಲಸೆ ಎಲ್ಲಿಂದ ಆಗುತ್ತಿದೆ?, ಇದು ಕ್ರಮಿಸುತ್ತಿರುವ ದೂರ ಎಷ್ಟು?, ಇಲ್ಲಿ ಸಂತಾನೋತ್ಪತ್ತಿ ನಡೆಸಿ ಬೇರೆ ಯಾವ ಪ್ರದೇಶಕ್ಕೆ ತೆರಳುತ್ತವೆ? ಮುಂತಾದ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಜಿಪಿಎಸ್ ಟ್ಯಾಗ್ ಅಳವಡಿಸಲಾಗುತ್ತಿದೆ.
ಹೆಜ್ಜಾರ್ಲೆಗಳು ಸ್ಥಳೀಯವಾಗಿ ಮಾತ್ರ ವಲಸೆ ಹೋಗುತ್ತವೆ. ಎಂಬ ಅಭಿಪ್ರಾಯಗಳಿದ್ದು, ಸಂಚಾರ ಮಾಡಿದ ಸಮಯ ಮತ್ತು ಎಷ್ಟು ದೂರ ಕ್ರಮಿಸಿವೆ ಎಂಬ ಅಧ್ಯಯನಕ್ಕೂ ಇದು ಸಹಕಾರಿಯಾಗಲಿದೆ.
ನಂಬರ್ ಟ್ಯಾಗ್ ಅಳವಡಿಕೆ; ಪೆಲಿಕನ್ ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಎಷ್ಟೋ ಮರಿಗಳು ಕೆಳಗೆ ಬೀಳುತ್ತವೆ. ಇದನ್ನು ಗಮನಿಸಿದ್ದ ಅರಣ್ಯ ಇಲಾಖೆ ಈ ಹಿಂದೆಯೇ ಮರಿಗಳನ್ನು ರಕ್ಷಿಸಿ ನಂಬರ್ ಟ್ಯಾಗ್ ಅಳವಡಿಸಿತ್ತು. ಮೀನು ಮುಂತಾದ ಆಹಾರ ನೀಡಿ ಮೂರಾಲ್ಕು ತಿಂಗಳು ಆರೈಕೆ ಮಾಡಿ ನಂತರ ಬಿಡಲಾಗುತ್ತಿತ್ತು.
ಆದರೆ, ಇದರಿಂದ ಜಿಪಿಎಸ್ ಟ್ಯಾಗ್ ರೀತಿ ಹಕ್ಕಿ ಎಲ್ಲೆಲ್ಲಿ ಹೋಗಿವೆ ಎಂಬುದನ್ನೆಲ್ಲ ತಿಳಿಯಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಜಿಪಿಎಸ್ ಟ್ಯಾಗ್ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ. ಹಾಗೆ ನೋಡಿದರೆ ಮರದಿಂದ ಬಿದ್ದ ಮರಿ ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಕೊಕ್ಕರೆ ಬೆಳ್ಳೂರು ಗ್ರಾಮದ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಈ ಹಿಂದೆಯೇ ಪ್ರಯೋಗ ಮಾಡಿದ್ದರು.
ಆರೈಕೆ ಮಾಡಿದ ಮರಿಗಳನ್ನು ಬಿಡುವ ಮೊದಲು ಕಾಲುಗಳಿಗೆ ಬಣ್ಣದ ವಯರ್ ಮಾದರಿಯನ್ನು ಟ್ಯಾಗ್ ರೀತಿಯಲ್ಲಿ ಕಟ್ಟಿ ಬಿಡುತ್ತಿದ್ದರು. ನಂತರದಲ್ಲಿ ಆ ಪಕ್ಷಿಗಳು ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿದ್ದವು.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ವಿ. ಕರಿಕಾಳನ್ ಈ ಕುರಿತು ಮಾತನಾಡಿ, "ಜಿಪಿಎಸ್ ಟ್ಯಾಗ್ ಅಳವಡಿಸುವುದರಿಂದ ಹೆಜ್ಜಾರ್ಲೆಗಳು ಕೊಕ್ಕರೆ ಬೆಳ್ಳೂರಿನಿಂದ ಯಾವ ಪ್ರದೇಶಕ್ಕೆ ತೆರಳುತ್ತವೆ?, ಅವುಗಳ ವಲಸೆ ಹಾಗೂ ಜೀವನ ಕ್ರಮ ಏನು ಎಂಬುದನ್ನು ತಿಳಿಯಬಹುದು. ಈ ಅಧ್ಯಯನ 3 ವರ್ಷ ನಡೆಯಬಹುದೆಂದು ಅಂದಾಜಿಸಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications