ಮಂಡ್ಯ: ಅಣ್ಣೂರು ಕಟ್ಟೆಯಲ್ಲಿ ಮೀನುಗಳ ಮಾರಣ ಹೋಮ
ಮಂಡ್ಯ, ನವೆಂಬರ್ 23: ಮಂಡ್ಯ ಜಿಲ್ಲೆಯ ಭಾರತೀನಗರ ಸಮೀಪದ ಅಣ್ಣೂರು ಗ್ರಾಮದಲ್ಲಿರುವ ಕಟ್ಟೆಯಲ್ಲಿ ಮೀನುಗಳು ಕಳೆದ ಮೂರು ದಿನಗಳಿಂದ ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ದುರ್ವಾಸನೆ ಬೀರುತ್ತಿದೆ. ಮೀನುಗಳು ಸಾಯಲು ಕಾರಣ ಏನು ಎಂಬುದು ಮಾತ್ರ ಪತ್ತೆಯಾಗಿಲ್ಲ. ಈ ಸಂಬಂಧ ಸಂಬಂಧಪಟ್ಟವರು ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಇಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮೀನುಗಳಿದ್ದು, ಪ್ರತಿ ದಿನವೂ ಇವುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸುತ್ತಮುತ್ತಲ ರೈತರಿಗೆ ಇದೇ ಕಟ್ಟೆಯ ನೀರು ಎಲ್ಲದಕ್ಕೂ ಬಳಕೆಯಾಗುತ್ತಿದ್ದು, ಪ್ರತಿ ದಿನವೂ ಜಾನುವಾರುಗಳಿಗೆ ನೀರು ಕುಡಿಸುವುದು, ಮೈತೊಳೆಯುವುದು ಮಾಡಲಾಗುತ್ತದೆ. ಆದ್ದರಿಂದ ಜಾನುವಾರುಗಳಿಗೂ ರೋಗ ತಗುಲುವ ಭಯ ರೈತರನ್ನು ಕಾಡುತ್ತಿದೆ. ಹೀಗಾಗಿ ಸತ್ತು ತೇಲುತ್ತಿರುವ ಮೀನನ್ನು ತೆಗೆದು ಶುಚಿಗೊಳಿಸಿ ಎಂಬುದು ರೈತರ ಆಗ್ರಹವಾಗಿದೆ.
ಜತೆಗೆ ಮೀನುಗಳ ಸಾವಿಗೆ ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಿ, ಒಂದು ವೇಳೆ ಯಾರಾದರೂ ಕಾರಣರಾಗಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.












Click it and Unblock the Notifications