ಮಂಡ್ಯ: ಸಾಲದ ಹೊರೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಮಂಡ್ಯ, ಫೆಬ್ರವರಿ 27: ಸಾಲಬಾಧೆಯಿಂದ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೋರೇಮೇಗಲಕೊಪ್ಪಲು ಗ್ರಾಮದಲ್ಲಿ ಸೋಮವಾರ(ಫೆ.26) ನಡೆದಿದೆ.
ಗ್ರಾಮದ ಕರೀಗೌಡ(60) ಆತ್ಮಹತ್ಯೆಗೆ ಶರಣಾಗಿರುವ ರೈತ. ಮೃತ ರೈತ ಕರೀಗೌಡ ಕೃಷಿಗೆ ಮತ್ತು ಬೋರ್ವೆಲ್ ಕೊರೆಸುವುದಕ್ಕಾಗಿ 4 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಚಿನಕುರಳಿ ಸ್ಟೇಟ್ಬ್ಯಾಂಕ್ನಲ್ಲಿ 50 ಸಾವಿರ ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 3.50 ಲಕ್ಷ ಸಾಲ ಮಾಡಿದ್ದರು.
ಸಿಎಂ ತವರಲ್ಲಿ ಮುಂದುವರೆದ ರೈತರ ಆತ್ಮಹತ್ಯೆ
ಆದರೆ ಜಮೀನಿನಲ್ಲಿ ಕೊರೆಯಿಸಿದ್ದ ಎರಡು ಬೋರ್ವೆಲ್ ಗಳು ನೀರು ಬರದೆ ವ್ಯರ್ಥವಾಗಿದ್ದವು. ಇದರಿಂದ ರೈತ ಕರೀಗೌಡ ಸಾಲದ ಸುಳಿಗೆ ಸಿಲುಕಿ ಸೋಮವಾರ ತಮ್ಮ ಜಮೀನಿನ ಬಳಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಶವಪರೀಕ್ಷೆ ವಾರಸುದಾರರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಮೃತ ಕರೀಗೌಡ ಪತ್ನಿ ಸಾಕಮ್ಮ ನೀಡಿದ ದೂರಿನ ಮೇರೆಗೆ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದ ಕರೀಗೌಡರ ಮೃತ ದೇಹದ ಅಂತಿಮ ದರ್ಶನಪಡೆದ ಸಂಸದ ಸಿ.ಎಸ್.ಪುಟ್ಟರಾಜು ಕರೀಗೌಡರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.