Sumalatha Ambareesh: ರಾಜಕೀಯದಲ್ಲಿ ಸುಮಲತಾ ಅಂಬರೀಶ್ ಹೊಸ ಅಧ್ಯಾಯ ಯಾವಾಗ ಆರಂಭ?
ಬೆಂಗಳೂರು, ಜನವರಿ 23: ಮಂಡ್ಯದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ದಳಪತಿಗಳಿಗೆ ಹೆಜ್ಜೆ, ಹೆಜ್ಜೆಗೂ ಟಕ್ಕರ್ ನೀಡುತ್ತಾ ಬಂದಿದ್ದ ಸುಮಲತಾ ಅಂಬರೀಶ್ ಇದೀಗ ಮೌನಕ್ಕೆ ಜಾರಿದ್ದಾರಾ ಅಥವಾ ರಾಜಕೀಯದಿಂದ ದೂರ ಸರಿದಿದ್ದಾರಾ? ಹೀಗೆಂಬ ಸಂಶಯಗಳು ರಾಜಕೀಯ ಪಡಸಾಲೆಯಲ್ಲಿ ಹೆಚ್ಚು ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಆದರೆ ಸದ್ಯದ ರಾಜಕಾರಣದಿಂದ ಸ್ವಲ್ಪ ದೂರ ಸರಿದಂತೆ ಕಂಡರೂ ಒಂದೊಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಮಂಡ್ಯದಿಂದಲೇ ರಾಜಕಾರಣ ಆರಂಭ ಮಾಡಿದ್ದು ಅಲ್ಲಿಯೇ ಅಂತ್ಯಗೊಳಿಸುತ್ತೇವೆ ಎಂಬಂತಹ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದಾರೆ. ಹೀಗಾಗಿ ಅವರ ರಾಜಕಾರಣ ಮಂಡ್ಯದಲ್ಲಿಯೇ ಮುಂದುವರೆಯುತ್ತದೆ ಮತ್ತು ಮುಂದಿನ ರಾಜಕಾರಣ ಕೂಡ ಇಲ್ಲಿಯೇ ಸಾಗುತ್ತದೆ ಎಂಬುವುದನ್ನು ತಳ್ಳಿಹಾಕಲಾಗದು. ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ರಾಜಕಾರಣ ಮಾಡುತ್ತಾ ಬಂದವರು ಅವರು, ಒಬ್ಬ ಸಂಸದೆಯಾಗಿ ಐದು ವರ್ಷಗಳ ಕಾಲ ಮಂಡ್ಯವನ್ನು ಪ್ರತಿನಿಧಿಸಿದ ಅವರು ಯಾರೇ ಟೀಕೆ ಮಾಡಿದರೂ ಅದಕ್ಕೆ ಸಕಾಲದಲ್ಲಿ ತಕ್ಕ ಟಕ್ಕರ್ ನೀಡಿ ಸೈ ಎನಿಸಿಕೊಂಡವರು.

ಐದು ವರ್ಷಗಳ ಕಾಲ ಬಿಜೆಪಿಗೆ ಬೆಂಬಲ ನೀಡುತ್ತಾ ರಾಜಕೀಯ ಮಾಡುತ್ತಾ ಬಂದಿದ್ದರೂ ಪಕ್ಷೇತರ ಸಂಸದೆಯಾಗಿಯೇ ಕಾಣಿಸಿಕೊಂಡಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸವಾಲ್ ಒಡ್ಡುತ್ತಲೇ ಕೆಲಸ ಮಾಡಿಕೊಂಡು ಬಂದಿದ್ದ ಅವರು 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು ಆದರೆ ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ. ಇದಾದ ನಂತರ 2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆ ಗೊಂಡರಾದರೂ ಅವರಿಗೆ ಟಿಕೆಟ್ ಸಿಗಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅದಾಗಲೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಮತ್ತೆ ಮಂಡ್ಯದಲ್ಲಿ ಮನೆ ಮಾಡಿದ ಸುಮಲತಾ!
ಇದಾದ ನಂತರ ಸುಮಲತಾ ರಾಜಕೀಯವಾಗಿ ಮೌನಕ್ಕೆ ಜಾರಿದರು. ಲೋಕಸಭಾ ಚುನಾವಣಾ ಪ್ರಚಾರದಿಂದ ದೂರ ಸರಿದರು. ಬಿಜೆಪಿ ಪಕ್ಷದ ವೇದಿಕೆಗಳಲ್ಲಿಯೂ ಅವರು ಕಾಣಲಿಲ್ಲ. ಅವರ ಬೆಂಬಲಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ರಾಜಕೀಯ ಪಕ್ಷಗಳತ್ತ ವಲಸೆ ಹೋದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾದರೆ ಸುಮಲತಾ ಅವರು ಬಿಜೆಪಿಯಲ್ಲಿ ಉಳಿಯುತ್ತಾರಾ? ಮಂಡ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಮುಂದಾಗುತ್ತಾರಾ? ಹೀಗೆಂಬ ಪ್ರಶ್ನೆಗಳಿಗೆ ಉತ್ತರ ಸದ್ಯಕ್ಕೆ ಸಿಕ್ಕಂತೆ ಕಾಣಿಸುತ್ತಿಲ್ಲ. ಆದರೆ ಅವರು ಮತ್ತೆ ಮಂಡ್ಯದಲ್ಲಿ ಮನೆ ಮಾಡಿದ್ದಾರೆ ಎಂಬ ಸುದ್ದಿಯಿದ್ದು, ಇದರ ಜತೆಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಹಾಗೆನೋಡಿದರೆ ಅಂಬರೀಶ್ ನಿಧನ ನಂತರ ಸುಮಲತಾ ಅವರ ಮೇಲೆ ಮಂಡ್ಯ ಜನರಲ್ಲಿ ಅನುಕಂಪವಿತ್ತು. ಅದು 2019ರ ಲೋಕಸಭಾ ಚುನಾವಣೆಯಲ್ಲಿ ಮತವಾಗಿ ಮಾರ್ಪಟ್ಟು ಗೆಲುವಿಗೆ ಕಾರಣವಾಗಿತ್ತು. ಆದರೆ ಸಂಸದೆಯಾದ ಬಳಿಕ ಅವರನ್ನು ಜನ ರಾಜಕಾರಣಿಯಂತೆ ನೋಡಲು ಆರಂಭಿಸಿದ್ದರಲ್ಲದೆ, ಅವರಿಂದ ಜಿಲ್ಲೆಗೇನು ಲಾಭವಾಗಿದೆ? ನಮಗೇನು ಲಾಭವಾಗಿದೆ? ಎಂಬ ಲೆಕ್ಕಗಳನ್ನು ಕೇಳಲಾರಂಭಿಸಿದ್ದರು. ಇದಕ್ಕೆ ಉತ್ತರವನ್ನು ನೀಡಿದ್ದರು. ಆದರೆ ಆರಂಭದಲ್ಲಿದ್ದ ಜನರ ಒಲವು 2024ರ ಲೋಕಸಭಾ ಚುನಾವಣೆ ವೇಳೆಗೆ ಕಡಿಮೆಯಾಗಿತ್ತು. ಜತೆಗೆ ಮಂಡ್ಯಕ್ಕೆ ಗೆಲ್ಲುವ ಕುದುರೆ ಬೇಕಾಗಿತ್ತು. ಹೀಗಾಗಿ ಬಿಜೆಪಿ ಕೂಡ ಸುಮಲತಾ ಅವರ ಬದಲಿಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ಹಿಡಿದಿತ್ತು.

ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಅರಿತಿದ್ದಾರೆ
ದಳಪತಿಗಳು ಮತ್ತು ಕೈ ನಾಯಕರನ್ನು ಸಮಾನಂತರವಾಗಿ ಎದುರಿಸಿಕೊಂಡು ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದ ಸುಮಲತಾ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡದೆ ಇರುವುದು ಒಂದು ದೊಡ್ಡ ಅವಮಾನ ಎಂದು ಎದುರಾಳಿಗಳು ಟೀಕಿಸಿದ್ದರು. ಆದರೆ ಯಾವುದೇ ಟೀಕೆಗಳಿಗೆ ಉತ್ತರ ನೀಡದೆ ಸುಮಲತಾ ಮೌನಕ್ಕೆ ಜಾರಿರುವುದರ ಹಿಂದೆ ಏನೋ ಒಂದು ರಾಜಕೀಯ ಅಜೆಂಡಾವಿದೆ ಎಂದು ಜನ ಮಾತನಾಡಿಕೊಂಡಿದ್ದರು. ಆದರೆ ಲೋಕಸಭಾ ಚುನಾವಣೆ ನಡೆದು ಏಳೆಂಟು ತಿಂಗಳೇ ಕಳೆದು ಹೋಗಿದೆ. ಹೊಸ ಬೆಳವಣಿಗೆಗಳು ಆದಂತೆ ಕಾಣುತ್ತಿಲ್ಲ. ಸುಮಲತಾ ಅವರಿಗೆ ಯಾವುದೇ ಸ್ಥಾನಮಾನಗಳು ದೊರೆತಿಲ್ಲ.
ರಾಜಕೀಯಕ್ಕೆ ಧುಮುಕಿ, ಐದು ವರ್ಷಗಳ ಕಾಲ ಸಂಸದೆಯಾಗಿ ರಾಜಕೀಯ ಪಟ್ಟುಗಳನ್ನು ಅವರು ಕಲಿತಿದ್ದಾರೆ. ಹೀಗಾಗಿ ಅವರು ಸಾರ್ವಜನಿಕ ಜೀವನದಿಂದ ದೂರವಾದರೆ ಮುಂದೆ ರಾಜಕೀಯದಲ್ಲಿ ಮುಂದುವರೆಯುವುದಕ್ಕೆ ಕಷ್ಟವಾಗಬಹುದು. ನಮ್ಮ ಜನಕ್ಕೆ ಮರೆವು ಜಾಸ್ತಿ. ಆದ್ದರಿಂದ ಕೇಂದ್ರ ರಾಜಕೀಯದಿಂದ ರಾಜ್ಯ ರಾಜಕೀಯದತ್ತ ಮುಖ ಮಾಡಿದರೂ ಅಚ್ಚರಿಯಿಲ್ಲ. ಇನ್ನು ಮೂರು ವರ್ಷಗಳಲ್ಲಿ ಮತ್ತೆ ವಿಧಾನಸಭಾ ಚುನಾವಣೆ ಬರಲಿದೆ. ಹೀಗಾಗಿ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಾರಾ ಗೊತ್ತಿಲ್ಲ.

ರಾಜಕೀಯದ ಹೊಸ ಆಟಕ್ಕೆ ತಯಾರಾಗುತ್ತಿದ್ದಾರಾ?
2025ರಿಂದ ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಅದಕ್ಕೆ ಚಾಲನೆ ಯಾವಾಗ ಕೊಡುತ್ತಾರೆ ಎಂಬುದು ಕೂಡ ನಿಗೂಢವಾಗಿ ಉಳಿದಿದೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ಬಣಬಡಿದಾಟ ಜೋರಾಗಿಯೇ ನಡೆಯುತ್ತಿದೆ. ಇದಕ್ಕೊಂದು ಇತಿಶ್ರೀ ಆಗುವ ತನಕ ಸುಮಲತಾ ಎಲ್ಲವನ್ನೂ ಮೌನವಾಗಿದ್ದುಕೊಂಡೇ ಗಮನಿಸುತ್ತಿದ್ದಾರಾ? ಅದು ಗೊತ್ತಿಲ್ಲ. ಆದರೆ ರಾಜ್ಯ ನಾಯಕರಿಂದ ಕೇಂದ್ರದ ತನಕ ಎಲ್ಲ ಬಿಜೆಪಿ ನಾಯಕರೊಂದಿಗೆ ಒಡನಾಟದಲ್ಲಿರುವ ಸುಮಲತಾ ಅವರು ಕಾದು ನೋಡುವ ತಂತ್ರವನ್ನಂತು ಅನುಸರಿಸುತ್ತಿದ್ದಾರೆ. ಕೆಲವು ಸಮಯಗಳ ಹಿಂದೆ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ನೂತನವಾಗಿ ಬಾಡಿಗೆಗೆ ಮನೆಯನ್ನು ಮಾಡಿರುವ ಅವರು ಇಲ್ಲಿಂದಲೇ ರಾಜಕೀಯದ ಹೊಸ ಆಟ ಶುರು ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications