ಮದ್ದೂರು ಬಳಿ ಹೂತ ಶವ ತೆಗೆದು ಸುಟ್ಟಿದ್ದೇಕೆ?
ಸರಿಯಾಗಿ ಮಳೆಯಾಗಲಿಲ್ಲ, ಸಕಾಲಕ್ಕೆ ಮಳೆಯಾಗಲಿಲ್ಲ ಅಂದರೆ ಜನರ ನಂಬಿಕೆ ಅಥವಾ ಮೂಢ ನಂಬಿಕೆಗಳು ಹೇಗೆಲ್ಲ ಕೆಲಸ ಮಾಡುತ್ತವೆ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಉದಾಹರಣೆ ಸಿಕ್ಕಿದೆ, ಓದಿ
ಮಂಡ್ಯ, ಮೇ 9: ಮೂಢನಂಬಿಕೆಯ ಪರಮಾವಧಿ ಮುಂದುವರೆದಿದ್ದು ತೊನ್ನು ರೋಗವಿದ್ದ ಪೂಜಾರಿಯೊಬ್ಬ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದು, ಆಗ ಆತನನ್ನು ಹೂಳಲಾಗಿತ್ತು. ಇದೀಗ ಮಳೆ ಬಾರದ ಕಾರಣ ಆತನ ಮೃತದೇಹವನ್ನು ಹೊರತೆಗೆದು ಸುಡುವ ಮೂಲಕ ಮತ್ತೊಮ್ಮೆ ಅಂತ್ಯಕ್ರಿಯೆ ನಡೆಸಲಾಗಿದೆ.
ಇಂತಹ ವಿಚಿತ್ರ ಘಟನೆ ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಇದೀಗ ಬಹಿರಂಗಗೊಂಡಿದೆ. ಪೂಜಾರಿ ರಾಮಣ್ಣ ಎಂಬಾತ ಮಾಲಗಾರನಹಳ್ಳಿಯ ಶನಿದೇವರ ದೇವಸ್ಥಾನದ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ. ಅನಾರೋಗ್ಯದಿಂದ 14 ಜುಲೈ, 2016ರಂದು ಮೃತಪಟ್ಟಿದ್ದ.[ಮಾಲಂಬಿ ಮಳೆಮಲ್ಲೇಶ್ವರನಿಗೆ ಮಳೆಗಾಗಿ ಪ್ರಾರ್ಥಿಸಿ ಪಾದಯಾತ್ರೆ!]

ಗ್ರಾಮದಲ್ಲಿ ಇತ್ತೀಚೆಗೆ ಮಳೆಯಾಗದಿದ್ದಾಗ ತೊನ್ನು ಇದ್ದ ರಾಮಣ್ಣನನ್ನು ಹೂತು ಹಾಕಿದ್ದೇ ಕಾರಣ, ಆದ್ದರಿಂದ ಶವವನ್ನು ಹೊರತೆಗೆದು ಸುಟ್ಟರೆ ಮಳೆಯಾಗುತ್ತದೆ ಎಂಬ ಮೂಢನಂಬಿಕೆಯಿಂದ ಗ್ರಾಮದ ನಾರಾಯಣ, ರವೀಶ, ನಾಗರಾಜು ಎಂಬುವರು ಶವವನ್ನು ಹೊರತೆಗೆದು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.[ಮಂಡ್ಯದ ಲಕ್ಷ್ಮಿಸಾಗರದಲ್ಲಿ ಕತ್ತೆಗಳ ಮದುವೆ, ಭರ್ಜರಿ ಮೆರವಣಿಗೆ]

ಮೃತನ ಮನೆಯವರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಆತನ ಅಂತ್ಯಕ್ರಿಯೆ ನಡೆಸಿದ ವೇಳೆ ಮನೆಯವರು ಕಲ್ಲೊಂದನ್ನು ನೆಟ್ಟಿದ್ದರು. ಇದೀಗ ಅದನ್ನು ಕಿತ್ತು ಹಾಕಿ ಶವವನ್ನು ಹೊರತೆಗೆದು ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಮುಖಂಡರು ಪ್ರಕರಣವನ್ನು ತಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳುವುದಾಗಿ ತಿಳಿಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.












Click it and Unblock the Notifications