ಡ್ರಾಮಾ ಮಾಡಿ ಕೈಗೆ ಸಿಗದವರನ್ನು ನಂಬಬೇಡಿ; ಸುಮಲತಾಗೆ ಅನಿತಾ ಟಾಂಗ್?
ಮದ್ದೂರು (ಮಂಡ್ಯ), ಮಾರ್ಚ್ 19: "ಡ್ರಾಮಾ ಮಾಡಿ ಕೈಗೆ ಸಿಗದೆ ತಪ್ಪಿಸಿಕೊಳ್ಳುವವರನ್ನು ನಂಬಬೇಡಿ. ಈಗಾಗಲೇ ಒಂದು ಬಾರಿ ಆ ರೀತಿ ಅನುಭವ ಆಗಿರುವ ಹಿನ್ನೆಲೆಯಲ್ಲಿ ನಿರಂತರವಾಗಿ ನಿಮ್ಮ ಜತೆಯಲ್ಲಿ ಇರುವ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಸಹಕಾರ ಇರಲಿ" ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಹೆಸರು ಹೇಳದೆ ಟಾಂಗ್ ನೀಡಿದ್ದಾರೆ.
ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಸ್ನೇಹ ಜೀವಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟರೆ ತಾತ- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ತಂದೆ- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಂತೆಯೇ ಜನರ ನಡುವೆ ಇದ್ದು, ಜನರ ಸೇವೆ ಮಾಡುತ್ತಾರೆ. ಅವರಿಗೆ ಜನಪರವಾಗಿ ಕೆಲಸ ಮಾಡಲು ಆಸಕ್ತಿಯಿದೆ ಎಂದು ಹೇಳಿದರು.
ಜೆಡಿಎಸ್- ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರೈತ ಹಾಗೂ ಜನಪರ ಕಾಳಜಿಯಿದ್ದು, ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದರೆ ನಿರಂತರವಾಗಿ ನಿಮ್ಮ ಸೇವೆ ಮಾಡುತ್ತಾರೆ ಎಂದರು. ಜಿಲ್ಲೆಯ ಜನತೆಗೂ ಜೆಡಿಎಸ್ ವರಿಷ್ಟರಿಗೂ ಅವಿನಾಭಾವ ಸಂಬಂಧವಿದ್ದು, ಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಜನತೆ ನಮ್ಮ ಕುಟುಂಬವನ್ನು ಎಂದು ಕೈ ಬಿಟ್ಟಿಲ್ಲ ಎಂದರು.

ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡಿದವರು ದೇವೇಗೌಡ
ಈ ಚುನಾವಣೆಯಲ್ಲಿ ನಿಖಿಲ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಜಿಲ್ಲೆಯ ಜನತೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕಾವೇರಿ ನದಿ ನೀರಿನ ವಿಷಯ, ರೈತರಿಗೆ ಸಮಸ್ಯೆ ಬಂದಾಗ ಹಾಗೂ ರಾಜ್ಯದ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಉಂಟಾದಾಗ ಮೊದಲಿಗೆ ಹೋರಾಟಕ್ಕೆ ಬರುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎಂದರು.

ರೈತರ ಸಾಲ ಸಂಪೂರ್ಣ ಮನ್ನಾ ಮಾಡಿದ ಮುಖ್ಯಮಂತ್ರಿ ಎಚ್ ಡಿಕೆ
ಇಂಥ ಹೋರಾಟವನ್ನು ಮೆಚ್ಚಿಯೇ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲ್ಲಿಸಿಕೊಟ್ಟಿದ್ದಾರೆ. ಮಂಡ್ಯ ಜನರ ಋಣ ಎಂದಿಗೂ ನಾವು ಮರೆಯಲು ಸಾಧ್ಯವಿಲ್ಲ. ದೇಶದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಇದ್ದರೆ ಅದು ಸಿಎಂ ಕುಮಾರಸ್ವಾಮಿ ಮಾತ್ರ ಎಂದರು.

ಮಂಡ್ಯ ಸಮಗ್ರ ಅಭಿವೃದ್ಧಿಗೆ 8700 ಕೋಟಿ ರುಪಾಯಿ ಅನುದಾನ
ಮುಖ್ಯಮಂತ್ರಿಯಾದ ನಂತರ ಕುಮಾರಸ್ವಾಮಿ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 8700 ಕೋಟಿ ರುಪಾಯಿ ಅನುದಾನ ನೀಡಿದ್ದು, ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದೇ ರೀತಿಯಲ್ಲಿ ನಿಖಿಲ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಲೋಕಸಭೆಯಲ್ಲಿ ರೈತರ ಹಾಗೂ ಎಲ್ಲ ವರ್ಗದ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಭಾವನಾತ್ಮಕ ನಂಟು ಮುಂದುವರಿಸುವ ಉದ್ದೇಶ
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುವುದಾಗಿ ಈಗಾಗಲೇ ಘೋಷಣೆ ಮಾಡಿಯಾಗಿದೆ. ಇನ್ನು ಸುಮಲತಾ ಅಂಬರೀಶ್ ಸಹ ಪಕ್ಷೇತರರಾಗಿ ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ. ಅಂಬರೀಶ್ ಅವರ ನಿಧನವಾದ ನಂತರ ತಾವು ಈ ನಿರ್ಧಾರ ಮಾಡಿದ್ದು, ಮಂಡ್ಯ ಜನರ ಜತೆಗೆ ನಮ್ಮ ಕುಟುಂಬಕ್ಕೆ ಭಾವನಾತ್ಮಕ ನಂಟಿದೆ. ಅದನ್ನು ಮುಂದುವರಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ಇದೀಗ ಈ ಲೋಕಸಭಾ ಕ್ಷೇತ್ರ ಪೈಪೋಟಿ ಕಣವಾಗಿದೆ.












Click it and Unblock the Notifications