ದೀಪಾವಳಿ 2022; ಮಂಡ್ಯದಲ್ಲಿ ನಷ್ಟದ ಸುಳಿಗೆ ಸಿಲುಕಿದ ಪಟಾಕಿ ವ್ಯಾಪಾರಸ್ಥರು
ಮಂಡ್ಯ, ಅಕ್ಟೋಬರ್, 24: ಮಂಡ್ಯ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಗಳಲ್ಲಿ ಜನರು ಪಟಾಕಿಗಳನ್ನು ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ವ್ಯಾಪಾರವಿಲ್ಲದೇ ಪಟಾಕಿ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ. ದೀಪಾವಳಿಯ ಪ್ರಮುಖ ಆಕರ್ಷಣೆ ಪಟಾಕಿ ವರ್ಷದಿಂದ ವರ್ಷಕ್ಕೆ ಜನರಿಂದ ದೂರ ಆಗುತ್ತಲೇ ಇದೆ. ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಬೆಲೆ ಮಾತ್ರ ಗಗನಕ್ಕೆ ಏರುತ್ತಲೆ ಇದೆ.
ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿಗಳು ಪಟಾಕಿ ಮಾರಾಟಗಾರರು, ಗ್ರಾಹಕರ ಪಾಲಿಗೆ ಸಂಕಷ್ಟ ತಂಡೊಡ್ಡಿವೆ. ಪಟಾಕಿಗಳಿಂದ ಉಂಟಾಗಿರುವ ಅಪಾಯವನ್ನು ಅರಿತಿರುವ ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಖರೀದಿಸದೆ, ಮಕ್ಕಳಿಗೆ ಅಪಾಯವಾಗದಂತಹ ಸಣ್ಣಪುಟ್ಟ ಪಟಾಕಿಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಕೊಳ್ಳುತ್ತಿದ್ದಾರೆ. ಲಕ್ಷ್ಮೀ ಪಟಾಕಿ, ಆಟಂಬಾಂಬ್, ರಾಕೆಟ್, ಡಬ್ಬಲ್ ಸೌಂಡ್ ಪಟಾಕಿ ಸೇರಿದಂತೆ ಭಾರಿ ಸದ್ದು ಮಾಡುವ ಪಟಾಕಿಗಳನ್ನು ಕೊಳ್ಳುವುದಕ್ಕೆ ಯಾರೂ ಆಸಕ್ತಿಯನ್ನೇ ತೋರುತ್ತಿಲ್ಲ. ಆದ್ದರಿಂದ ಪಟಾಕಿಗಳಿಗೆ ಬೇಡಿಕೆ ಕಡಿಮೆ ಆಗಿದ್ದು, ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪಟಾಕಿಗಳ ಬೆಲೆ ಶೇಕಡಾ 35 ರಿಂದ 40ರಷ್ಟು ಹೆಚ್ಚಳವಾಗಿದೆ. ಪಟಾಕಿ ಸಿಡಿಸುವವರ ಆಸಕ್ತಿಯೇ ಕಡಿಮೆ ಆಗಿರುವಾಗ ಬೆಲೆ ಹೆಚ್ಚಳವಾದರೆ ಕೊಳ್ಳಲು ಯಾರು ಬರುತ್ತಾರೆ ಎನ್ನುವುದು ವ್ಯಾಪಾರಸ್ಥರ ಅಳಲಾಗಿದೆ.
ದೀಪಾವಳಿ ಹಬ್ಬ 2022; ಕರ್ನಾಟಕದ ನಗರಗಳಲ್ಲಿ ಇಂದಿನ ಹೂ, ಹಣ್ಣಿನ ದರ ತಿಳಿಯಿರಿ
ಗ್ರಾಹಕರಿಲ್ಲದೆ ತತ್ತರಿಸಿದ ವ್ಯಾಪಾರಸ್ಥರು
ಹಸಿರು ಪಟಾಕಿಗಳನ್ನು ಸಿಡಿಸುವ ಕಚ್ಚಾ ಸಾಮಗ್ರಿಗಳ ಕೊರತೆ ಇರುವುದರಿಂದ ಅವುಗಳ ಉತ್ಪಾದನೆಯೂ ಕ್ಷೀಣಿಸಿದೆ. ಇನ್ನು ಪಟಾಕಿಗಳನ್ನು ಉತ್ಪಾದನೆ ಮಾಡುವ ಕಂಪನಿಗಳು ಕಡ್ಡಾಯವಾಗಿ ಪಾಕೆಟ್ಗಳ ಮೇಲೆ ಗ್ರೀನ್ ಸೀಲ್ ವರ್ಕ್ಸ್ ಎಂದು ಮುದ್ರಿಸಿರಬೇಕು. ಇಲ್ಲದಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣದಿಂದ ಅನೇಕ ಕಂಪನಿಗಳು ಪಟಾಕಿ ಉತ್ಪಾದನೆಗೆ ಮುಂದಾಗಲಿಲ್ಲ. ಇನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆಗಿರುವ ಪಟಾಕಿಗಳಿಗೆ ಬೆಲೆ ಹೆಚ್ಚಳವಾಗಿದೆ.
ಕಾರವಾರದಲ್ಲಿ ದೀಪಾವಳಿ; ಮಾರುಕಟ್ಟೆಗಳಲ್ಲಿ ಪೂಜಾ ಸಾಮಾಗ್ರಿಗಳ ಬೆಲೆಯ ವಿವರ, ಇಲ್ಲಿದೆ ಮಾಹಿತಿ
ಪಟಾಕಿ ಮಳಿಗೆಗೆ ತಗುಲುವ ವೆಚ್ಚ
ಸ್ಥಳೀಯ ಮಾರಾಟಗಾರರು ಶಿವಕಾಶಿಗೆ ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಯನ್ನು ತಂದು ಮಾರಾಟಕ್ಕಿಟ್ಟಿದ್ದಾರೆ. ಕೊಳ್ಳುವುದಕ್ಕೆ ಗ್ರಾಹಕರೇ ಅಂಗಡಿಗಳ ಕಡೆ ಮುಖ ಮಾಡುತ್ತಿಲ್ಲ. ಕೆಲವು ಜನರು ಬಂದರೂ ಸಣ್ಣ ಪುಟ್ಟ ಪಟಾಕಿಗಳನ್ನು ಆರಿಸಿಕೊಂಡು ಹೋಗುತ್ತಿರುವುದರಿಂದ ಮಾರಾಟಗಾರರಿಗೆ ಅಂತಹ ಲಾಭವೇನೂ ಆಗುತ್ತಿಲ್ಲ. ಪ್ರತಿ ಅಂಗಡಿ ಮಾಲೀಕರಿಗೆ 30 ಸಾವಿರ ಖರ್ಚು ತಾಗುತ್ತದೆ. ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಪಟಾಕಿ ಮಾರಾಟಗಾರರು ವ್ಯಾಪಾರ ಮಾಡುವುದಕ್ಕೆ ಒಂದು ಮಳಿಗೆಗೆ 25 ಸಾವಿರ ರೂಪಾಯಿ ಪಾವತಿಸಿದ್ದಾರೆ. ಹೀಗೆ ಹಣವನ್ನು ಪಾವತಿಸಿ ನಗರಸಭೆಯಿಂದ ಏಳು ದಿನಗಳ ಕಾಳ ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇಲ್ಲಿ ಒಟ್ಟು 21 ಮಳಿಗೆಗಳಿದ್ದು, ಅಗ್ನಿಶಾಮಕದಳದ ಪರವಾನಗಿ, ಆಕಸ್ಮಿಕ ಅವಘಡಗಳನ್ನು ತಡೆಯಲು ಮತ್ತೆ ಮುಂಜಾಗ್ರತೆ ವೆಚ್ಚ ಸೇರಿ 30 ಸಾವಿರ ರೂಪಾಯಿ ಆಗಲಿದೆ.
ಪಟಾಕಿ ಅಂಗಡಿಗಳತ್ತ ಮುಖ ಮಾಡದ ಜನ
ದೀಪಾವಳಿ ಹಬ್ಬದ ಒಂದು ದಿನದ ಮುಂಚೆಯೇ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಟಾಕಿ ಖರೀದಿಗೆ ಬರುತ್ತಾರೆಂದು ಮಾರಾಟಗಾರರು ನಿರೀಕ್ಷೆಯಲ್ಲಿದ್ದು, ಆದರೆ ಇದೀಗ ಆ ನಿರೀಕ್ಷೆ ಹುಸಿಯಾದಂತಾಗಿದೆ. ಅಕ್ಟೋಬರ್ 23ರಂದು ಭಾನುವಾರದ ದಿನವೂ ಜನರಿಲ್ಲದೆ ಅಂಗಡಿಗಳು ಭಣಗುಡುತ್ತಿದ್ದವು. ಕಳೆದ ವರ್ಷ ಕೊರೊನಾ ನಡುವೆಯೂ ಪಟಾಕಿ ವ್ಯಾಪಾರ ನಷ್ಟವಾಗದಂತೆ ನಡೆದಿತ್ತು. ಆದರೆ ಈ ಬಾರಿ ಪಟಾಕಿಗಳ ಬೆಲೆ ಹೆಚ್ಚಳ ಆಗಿರುವುದರಿಂದ ಜನರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ನರಕಚತುರ್ದಶಿಯ ದಿನವಾದ ಅಕ್ಟೋಬರ್ 24 ಸೋಮವಾರದಿಂದ ಗ್ರಾಹಕರು ಪಟಾಕಿ ಅಂಗಡಿಗಳ ಕಡೆ ಸುಳಿಯಬಹುದೆಂಬ ಭಾವನೆಯಿಂದ ವ್ಯಾಪಾರಸ್ಥರು ಎದುರುನೋಡುತ್ತಿದ್ದರು.
ಪಟಾಕಿ ವ್ಯಾಪಾರಸ್ಥರು ಅಳಲು
ಪಟಾಕಿ ಬೆಲೆ ದುಬಾರಿ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಂದೆ ಬರುತ್ತಿಲ್ಲ. ನಿಯಮಾವಳಿಗಳು ಕಠಿಣ ಅಗಿರುವುದರಿಂದ ಪಟಾಕಿಗಳ ಉತ್ಪಾದನೆಯೂ ಕಡಿಮೆ ಆಗಿದೆ. ಯುವಕರೂ ಮೊದಲಿನಂತೆ ಪಟಾಕಿ ಸಿಡಿಸಿ ಸಂಭ್ರಮಿಸಲು ಆಸಕ್ತಿ ತೋರದಿರುವುದರಿಂದ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷ ಪರಮೇಶ್ ತಿಳಿಸಿದ್ದಾರೆ. ಅಕ್ಟೋಬರ್ 23ರಂದು ಭಾನುವಾರ ಪಟಾಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದೆಂಬ ಎನ್ನುವ ನಿರೀಕ್ಷೆ ಇತ್ತು. ಆದರೆ ಜನರು ಅಂಗಡಿಗಳ ಕಡೆ ಸುಳಿಯುತ್ತಿಲ್ಲ. ಹಬ್ಬದ ದಿನವಾದ ಇಂದಿನಿಂದ ಪಟಾಕಿಗಳ ಮಾರಾಟ ಹೆಚ್ಚಾಗುವ ನಿರೀಕ್ಷೆಯಲ್ಲಿ ಇದ್ದೇವೆ. ಕಳೆದ ವರ್ಷ ಕೊರೊನಾ ನಡುವೆ ವ್ಯಾಪಾರ ನಷ್ಟವಿಲ್ಲದಂತೆ ನಡೆದಿತ್ತು ಎಂದು ಪಟಾಕಿ ಮಳಿಗೆಯ ವ್ಯಾಪಾರಸ್ಥ ಶೀತಲ್ ತಿಳಿಸಿದರು.