ಇನ್ನೂ ಮಳೆಯಾಗಿಲ್ಲ, ಇಲ್ಲಿನ ಜಲಾಶಯಗಳ ಈಗಿನ ಸ್ಥಿತಿಯೇನು?

ಮಂಡ್ಯ, ಜೂನ್ 25: ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವ ವಿಚಾರವಾಗಿ ರಾಜ್ಯದ ಜನರು ಕೊಂಚ ನೆಮ್ಮದಿಯ ಉಸಿರು ಬಿಡುವಂತೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರ ಪ್ರಕಾರ, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ತಿಳಿಸಲಾಗಿದೆ. ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು.

ಜುಲೈ ತಿಂಗಳ ನೀರನ್ನೂ ಬಿಡುವಂತೆ ತಮಿಳುನಾಡು ಬೇಡಿಕೆಯಿಟ್ಟಿತ್ತು. ಆದರೆ, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿರುವುದರಿಂದ ಸದ್ಯ ನೀರು ಹರಿಸುವ ವಿಚಾರವಿಲ್ಲ. ಆದರೆ ಇದು ಸದ್ಯದ ಮಟ್ಟಿಗೆ ನೆಮ್ಮದಿ ತರುವ ವಿಚಾರವಷ್ಟೇ. ಮುಂದೆ ಮತ್ತೆ ತಮಿಳುನಾಡು ನೀರು ಬಿಡುವಂತೆ ಮನವಿ ಮಾಡಿಯೇ ತೀರುತ್ತದೆ. ಹಾಗಾದಲ್ಲಿ ಹಳೆ ಮೈಸೂರು ಭಾಗದ ಜನರು ಸಂಕಷ್ಟವನ್ನೇ ಎದುರಿಸಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.

ಮಳೆ ಚೆನ್ನಾಗಿ ಬಂದರೆ ಮಾತ್ರ ರೈತನ ಮೊಗದಲ್ಲಿ ಸಂತಸ. ಇಲ್ಲವಾದರೆ ಪರಿಸ್ಥಿತಿ ಬೇರೆಯೇ ಆಗಬಹುದು. ಹಾಗಾಗಿ ಸದ್ಯ ಕೆಆರ್ ಎಸ್ ಭಾಗದ ಜಲಾಶಯಗಳಲ್ಲಿ ಇಂದಿನ ನೀರಿನ ಪ್ರಮಾಣ ಹೇಗಿದೆ? ಎಷ್ಟು ದಿನಕ್ಕೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳುವುದೂ ಅವಶ್ಯಕವಿದೆ.

 ಚುರುಕುಗೊಂಡಿಲ್ಲ ಕೃಷಿ ಚಟುವಟಿಕೆ

ಚುರುಕುಗೊಂಡಿಲ್ಲ ಕೃಷಿ ಚಟುವಟಿಕೆ

ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ಜೂನ್ ತಿಂಗಳು ಕಳೆಯುತ್ತಿದ್ದರೂ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದಿಲ್ಲ. ಕೇರಳದಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿಲ್ಲ. ಈ ಹಿನ್ನೆಲೆ ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಬದಲಾವಣೆ ಆಗಿಲ್ಲ. ಪರಿಣಾಮ ಕುಡಿಯುವ ನೀರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಮುಂದೆ ಉತ್ತಮ ಮಳೆ ಆದಲ್ಲಿ, ಆಗಸ್ಟ್ ತಿಂಗಳಲ್ಲಿಯೋ, ಸೆಪ್ಟೆಂಬರ್ ತಿಂಗಳಲ್ಲಿಯೋ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆ ಇದೆ.

ಕರ್ನಾಟಕ - ಕರಾವಳಿ ಕೇರಳ ಭಾಗದಲ್ಲಿ ಮಾತ್ರ ಸ್ವಲ್ಪ ಮಳೆ ಕಂಡು ಬಂದಿದ್ದು, ಕೇರಳದ ವೈನಾಡು ಭಾಗದಲ್ಲಿ ಮೊದಲು ಉತ್ತಮ ಮಳೆಯಾಗಿ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಕಬಿನಿ ಜಲಾಶಯಕ್ಕೂ ಇನ್ನೂ ನೀರು ಬಂದಿಲ್ಲ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಮುಂಗಾರು ನೆಚ್ಚಿಕೊಂಡು ಬಿತ್ತನೆ ಮಾಡಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,91,493 ಒಟ್ಟು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದ್ದು, ಮಳೆ ಕೈಕೊಟ್ಟ ಕಾರಣ ಮಳೆಯಾಶ್ರಿತ ಪ್ರದೇಶಗಳ ಬೆಳೆ ಸೊರಗಿ ಹೋಗಿದೆ. ಇನ್ನು ಮಳೆ ಕೊರತೆಯಿಂದ ಇಳುವರಿ ಕೂಡ ಇಳಿಮುಖವಾಗಿದೆ.

 ಕೆಆರ್ ಎಸ್ ನಲ್ಲಿ ಇನ್ನು 79 ಅಡಿ ನೀರು

ಕೆಆರ್ ಎಸ್ ನಲ್ಲಿ ಇನ್ನು 79 ಅಡಿ ನೀರು

ಮಂಡ್ಯ ಜಿಲ್ಲೆಯಲ್ಲಿ ನೀರಾವರಿ ಬೆಳೆಗಳು ಒಣಗುತ್ತಿವೆ. ನಾಲೆಗೆ ನೀರು ಬಿಡುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಐದನೇ ದಿನ ತಲುಪಿದೆ. ಕೆಆರ್ ಎಸ್ ನಲ್ಲಿ ಜೂನ್ ಅಂತ್ಯ ಬಂದರೂ ಇನ್ನೂ 79 ಅಡಿ ನೀರು ಮಾತ್ರ ಇದೆ. ಕಬಿನಿಯಲ್ಲಿ 56 ಅಡಿ ಮಾತ್ರ ನೀರು ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಆರ್ಎಸ್ ಮತ್ತು ಕಬಿನಿಯಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ನೀರಿರುವುದು ಇದೇ ಮೊದಲ ಬಾರಿ ಎನ್ನಬಹುದು.

ನೀರೇ ಇಲ್ಲದ ಪರಿಸ್ಥಿತಿಯ ನಡುವೆ ತಮಿಳುನಾಡು ತಮಗೆ 19.19 ಟಿಎಂಸಿ ನೀರು ಬಿಡುವಂತೆ ಬೇಡಿಕೆ ಇಟ್ಟಿದೆ. ಆದರೆ, ಜಿಲ್ಲೆಯಲ್ಲಿ ಒಂದೆಡೆ ಮಳೆ ಕೊರತೆಯಾದರೆ, ಮತ್ತೊಂದೆಡೆ ಜಿಲ್ಲೆಯ ಜೀವನಾಡಿ ಕನ್ನಂಬಾಡಿಕಟ್ಟೆಯ ಒಡಲು ಬರಿದಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ ಜಲಾಶಯದ ನೀರಿನ ಮಟ್ಟ 105 ಅಡಿ ಇತ್ತು. 2018ರ ಹೊರತಾಗಿ ಅದರ ಹಿಂದಿನ ಐದು ವರ್ಷಗಳಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 2014ರಲ್ಲಿ ತುಂಬಿದ್ದೇ ಕೊನೆ. ಆ ಬಳಿಕ ಸತತ ಮೂರು ವರ್ಷವೂ ಭರ್ತಿಯಾಗಿಲ್ಲ. ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯ ತುಂಬುವ ನಿರೀಕ್ಷೆಯಿದೆ. ಗರಿಷ್ಠ 124.80 ಅಡಿಯ ಜಲಾಶಯವು 49.452 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ‌ ಹೊಂದಿದೆ.

 ಕೃಷಿಗೆ, ಕುಡಿಯಲು ನೀರಿನ ಕೊರತೆ

ಕೃಷಿಗೆ, ಕುಡಿಯಲು ನೀರಿನ ಕೊರತೆ

ಜಲಾಶಯ ಸಂಪೂರ್ಣ ಭರ್ತಿಯಾದರೆ 125 ಚದರ ಕಿ.ಮೀ. ವಿಸ್ತಾರದ ಪ್ರದೇಶದಲ್ಲಿ ನೀರು ಸಂಗ್ರಹವಾಗಲಿದೆ. ಇದು ಒಂದೆಡೆಯಾದರೆ ಸದ್ಯ ಜಲಾಶಯದ ನೀರಿನ ಮಟ್ಟವು 79.79 ಅಡಿಗೆ ಕುಸಿದಿದೆ. ಕೇವಲ 10.693 ಟಿಎಂಸಿ ಅಡಿ ನೀರು ಮಾತ್ರ ಜಲಾಶಯದಲ್ಲಿ ತುಂಬಿದ್ದು, ಇದರಲ್ಲಿ 2.314 ಅಡಿ ನೀರು ಮಾತ್ರ ಕೃಷಿ ಬಳಕೆಗೆ ಲಭ್ಯವಾಗಲಿದೆ. 253 ಕ್ಯೂಸೆಕ್ ಒಳ ಹರಿವು, 324 ಕ್ಯೂಸೆಕ್ ಹೊರ ಹರಿವಿನ ಪ್ರಮಾಣ ಲಭ್ಯವಿದೆ. ಅದರಲ್ಲಿ ಒಟ್ಟಾರೆ ಲಭ್ಯವಿರುವ 8.379 ಟಿಎಂಸಿ ಅಡಿ ನೀರಿನಲ್ಲಿ 4.401 ಟಿಎಂಸಿ ಬಳಸಲು ಬಾರದ ಬಾರದ ಡೆಡ್ ಸ್ಟೋರೇಜ್. ಬಾಕಿ 3.978 ಟಿಎಂಸಿ ಅಡಿಯು ಕುಡಿಯುವ ನೀರಿಗೆ ಮೀಸಲಾಗಿರುತ್ತದೆ.

 ಜಲಾಶಯ ಭರ್ತಿಯಾಗದಿದ್ದರೆ ಮುಂದೇನು?

ಜಲಾಶಯ ಭರ್ತಿಯಾಗದಿದ್ದರೆ ಮುಂದೇನು?

ಕಳೆದ ವರ್ಷ ಇದೇ ವೇಳೆಯಲ್ಲಿ ಕಾವೇರಿ ಕಣಿವೆಯ ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ, ಕಪಿಲಾ ಜಲಾಶಯಗಳಲ್ಲಿ ಒಟ್ಟು 59 ಟಿಎಂಸಿ ನೀರಿತ್ತು. ಈ ವರ್ಷ 13 ಟಿಎಂಸಿಗೆ ಇದು ಕುಸಿದಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ಬಿಂಬಿಸಿದೆ. ಇತ್ತ ಕಪಿಲಾ ಜಲಾಶಯದಲ್ಲಿ ಈಗ 2.50 ಟಿಎಂಸಿ ಮಾತ್ರ ಇದೆ. ಕುಡಿಯುವುದಕ್ಕೆ ಇದನ್ನು ಇಟ್ಟುಕೊಳ್ಳಲಾಗಿದೆ. ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಕಾರಣ ಈ ಬಾರಿ ಜಲಾಶಯ ಭರ್ತಿಯಾಗುವುದೇ ಎಂಬ ಆತಂಕವಿದೆ.

ಕಳೆದ ವರ್ಷ ಈ ವೇಳೆಗೆ ಭರ್ತಿಯಾಗುವ ಹಂತ ತಲುಪಿದ್ದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ಕೇವಲ 4.81 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ 16 ಟಿಎಂಸಿ ನೀರಿತ್ತು. 2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ 2806.66 ಅಡಿಗಳಷ್ಟು ನೀರಿದೆ. ಒಳಹರಿವು 181 ಕ್ಯೂಸೆಕ್ ‌ಗಳಷ್ಟಿದ್ದು, 50 ಕ್ಯೂಸೆಕ್ ಹೊರಹರಿವು ಇದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ‌ದ ಅಣೆಕಟ್ಟೆಯಲ್ಲಿ ಪ್ರಸ್ತುತ 1.618 ಟಿಎಂಸಿ ನೀರಿದ್ದು, ಇದರಲ್ಲಿ ಡೆಡ್ ಸ್ಟೋರೇಜ್ ಕಳೆದರೆ 0.868 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಕಳೆದ ವರ್ಷ ಜುಲೈ ಮೊದಲ ವಾರವೇ ಕೆ ಆರ್ ಎಸ್ ಜಲಾಶಯ ಭರ್ತಿಯಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಂಪತಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಈ ವರ್ಷ ಕುಡಿಯಲು ನೀರಿಲ್ಲದೇ ಬರದ ಪರಿಸ್ಥಿತಿ ತಲುಪಿರುವುದು ಶೋಚನೀಯ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+