ಸರಕಾರಿ ಗೌರವದೊಂದಿಗೆ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ

ಮಂಡ್ಯ, ಫೆಬ್ರವರಿ 16: ಸಕಲ ಗೌರವದೊಂದಿಗೆ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಗುರು ಅಂತ್ಯಕ್ರಿಯೆ ಶನಿವಾರ ನಡೆಯಿತು. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಗುರು ಅವರ ಪತ್ನಿ ಕಲಾವತಿ, ಪೋಷಕರು ರೋದಿಸುತ್ತಿದ್ದುದನ್ನು ಕಂಡರೆ ಕರುಳು ಕಿವುಚಿ ಬರುತ್ತಿತ್ತು.

ಮದ್ದೂರು-ಮಳವಳ್ಳಿ ರಸ್ತೆಯ ಪಕ್ಕದಲ್ಲಿನ ಸರಕಾರಿ ಜಾಗದಲ್ಲಿ ಅಂತಿಮ ವಿಧಿ ವಿಧಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೂ ಮುನ್ನ ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನರು ಬಂದರು. ತ್ರಿವರ್ಣ ಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು.

ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಹುಟ್ಟೂರು ಗುಡಿಗೆರೆಗೆ ತಲುಪಿದಾಗ ಪತ್ನಿ ಸೆಲ್ಯೂಟ್ ಹೊಡೆಯುವ ಮೂಲಕ ಅಂತಿಮ ವಂದನೆ ಸಲ್ಲಿಸಿದರು. ಗುರು ಪಾರ್ಥಿವ ಶರೀರ ಹುಟ್ಟೂರು ತಲುಪುತ್ತಿದ್ದಂತೆಯೇ ಕುಟುಂಬಸ್ಥರ, ಸಂಬಂಧಿಕರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು.

Kalavathi

ನೂರಾರು ಜನರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಾ ಅಶ್ರುತರ್ಪಣ ನೀಡಿದರು. ಇದೇ ವೇಳೆ ವೀರಯೋಧನ ಕುಟುಂಬಕ್ಕೆ ಮುಖ ಚಹರೆಯನ್ನು ಕೂಡ ನೋಡಲು ಅವಕಾಶ ನೀಡಲಿಲ್ಲ. ಉಗ್ರನ ಕೃತ್ಯಕ್ಕೆ ಛಿದ್ರವಾಗಿದ್ದ ವೀರಯೋಧ ಗುರು ಅವರ ಮುಖ ಚಹರೆಯನ್ನು ಕೂಡ ಕೊನೆಯ ಬಾರಿ ನೋಡಲು ಅವಕಾಶ ಸಿಗಲಿಲ್ಲ.

ಶನಿವಾರ ಮಧ್ಯಾಹ್ನವೇ ಬರಬೇಕಿದ್ದ ಮೃತದೇಹ ಗುಡಿಗೆರೆಗೆ ತಲುಪಲು ಅಕ್ಷರಶಃ ಹರಸಾಹಸ ಪಡಬೇಕಾಗಿತ್ತು. ಬೆಂಗಳೂರಿನಿಂದ ಮೈಸೂರು ರಸ್ತೆಯವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರೂ ರಸ್ತೆಯುದ್ದಕ್ಕೂ ಜನಸಾಗರ ನೆರೆದ ಪರಿಣಾಮ, ಬೆಂಗಳೂರಿನಿಂದ ಮದ್ದೂರು ಬರಲು ಐದು ತಾಸುಗಳೇ ಕಳೆಯಿತು.

ಇತ್ತ ರಸ್ತೆ ಬದಿಯಲ್ಲಿ ಜನರು ನಿಂತು ಹುತಾತ್ಮ ಯೋಧ ಗುರುವಿನ ಹೆಸರು ಹೇಳಿ ಜೈಕಾರ ಕೂಗಿದರು. ನಂತರ ಗುರು ಅವರ ಪಾರ್ಥಿವ ಶರೀರ ಮನೆಗೆ ಆಗಮಿಸಿದ ಬಳಿಕ ಗುರುವಿನ ತಂದೆ, ತಾಯಿ ಸಹೋದರ ಹಾಗೂ ಗುರು ಪತ್ನಿ ಕಲಾವತಿ ಅವರು ಪಾರ್ಥಿವ ಶರೀರಕ್ಕೆ ಹೂ ಮಾಲೆ ಹಾಕಿ, ನಂತರ ಕೆಲ ಹೊತ್ತು ಸೆಲ್ಯೂಟ್ ಮಾಡಿದ ದೃಶ್ಯ ಅಲ್ಲಿದ್ದವರಿಗೆ ದೇಶಪ್ರೇಮದ ಕಿಚ್ಚು ಹೆಚ್ಚಿಸಿತು.

ಗುರು ಅವರ ಪಾರ್ಥಿವ ಶರೀರದ ಅಂತಿಮ ವಿಧಾನ ನೆರವೇರಿಸುವಾಗ ಕುಟುಂಬದವರು ಕಣ್ಣೀರಿನ ಮೂಲಕ ನೆರವೇರಿಸುವ ದೃಶ್ಯ ಎಂಥವರ ಮನ ಕಲಕುವಂತೆ ಮಾಡಿತು. ಗುರು ಪಾರ್ಥಿವ ಶರೀರ ಛಿದ್ರಛಿದ್ರವಾಗಿರುವ ಕಾರಣ ಶವ ಪೆಟ್ಟಿಗೆಯಿಂದ ಹೊರ ತೆಗೆಯಲು ಅವಕಾಶ ಮಾಡಿಕೊಳ್ಳಲಿಲ್ಲ. ಹಾಗಾಗಿ ಪೆಟ್ಟಿಗೆಯೊಳಗೆ ಇರುವ ಅವರ ಛಿದ್ರ -ಛಿದ್ರ ಶರೀರಕ್ಕೆ ಪೂಜೆ ಸಲ್ಲಿಸುವ ಅವಕಾಶ ಕುಟುಂಬಸ್ಥರಿಗೆ ದೊರಕಿತು.

ಇನ್ನು ಅಂತ್ಯ ಸಂಸ್ಕಾರ ನಡೆಯುವ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಗುರು ಅವರ ಪತ್ನಿ ಕಲಾವತಿ ಅವರು ಕೂಡ ಸೆಲ್ಯೂಟ್ ಮಾಡಿದ್ದು ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ಚರ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಕೇಂದ್ರದ ಮಾಜಿ ಸಚಿವ ಎಸ್ಸೆಂ ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಚಿವ ಸಾ.ರಾ.ಮಹೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ತಮ್ಮ ಗೌರವ ಸಲ್ಲಿಸಿದರು.

ಮೂರು ಸುತ್ತು ಕುಶಾಲ ತೋಪು ಹಾರಿಸಿ ಪೊಲೀಸ್ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಲಾವತಿಗೆ ಹಸ್ತಾಂತರಿಸಿದರು. ಜತೆಗೆ ಇಪ್ಪತ್ತೈದು ಲಕ್ಷದ ಚೆಕ್ ವಿತರಿಸಿದರು.

ಆ ನಂತರ ಶವ ಪೆಟ್ಟಿಗೆ ಮೂರು ಸಲ ಚಿತೆಯ ಸುತ್ತ ಪ್ರದಕ್ಷಿಣೆ ಮಾಡಿ, ಚಿತೆಯ ಮೇಲೆ ಇರಿಸಲಾಯಿತು. ಈ ಸಂದರ್ಭದಲ್ಲಿ ಕಲಾವತಿ ಅವರು ಭಾವೋದ್ವೇಗಕ್ಕೆ ಒಳಗಾದರು. ಗುರು ತಂದೆ, ತಾಯಿ ಹಾಗೂ ಪತ್ನಿ ಕಲಾವತಿ ಅವರಿಂದ ಕಟ್ಟಿಗೆ ತುಂಡು ಇಡಿಸಲಾಯಿತು.

ಗುರು ಸಹೋದರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+