ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ತಿರುಗೇಟು ಕೊಡಲು ಸಜ್ಜಾದ ಕಾಂಗ್ರೆಸ್: ಮಂಡ್ಯದಲ್ಲಿ ಸಮಾವೇಶ
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಇದ್ದು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ತಿರುಗೇಟು ಕೊಡಲು ಈಗ ಕಾಂಗ್ರೆಸ್ ಕೂಡ ರಣತಂತರ ರೂಪಿಸಿದ್ದು, ಪಾದಯಾತ್ರೆಗೆ ವಿರುದ್ಧವಾಗಿ ಜನಾಂದೋಲನ ಸಮಾವೇಶ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಈಗಾಗಲೇ ರಾಮನಗರದಲ್ಲಿ ಕೂಡ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದು, ಬಿಜೆಪಿ-ಜೆಡಿಎಸ್ ವಿರುದ್ಧ ಮಂಡ್ಯದಲ್ಲಿ ಆಗಸ್ಟ್ 6ರಂದು ಜನಾಂದೋಲನ ಸಮಾವೇಶ ನಡೆಸುವುದಾಗಿ ಶಾಸಕ ಪಿ. ರವಿಕುಮಾರ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹ ಆಗಮಿಸಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ನವರ ನಾಟಕಕ್ಕೆ ಫುಲ್ಸ್ಟಾಪ್ ಹಾಕಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟರೆಂದು ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ
ನಿಮ್ಮ ಆಡಳಿತದ ಅವಧಿಯಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದಿದ್ದಕ್ಕೆ ಇಂದು ಜನ ನಿಮ್ಮನ್ನು ಮನೆಯಲ್ಲಿ ಕೂರಿಸಿ, ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಜಾಗವನ್ನು ಮುಡಾದವರೆ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಆದರೂ ವಿನಾಕಾರಣ ಸಿಎಂ ಹೆಸರನ್ನು ಈ ಪ್ರಕರಣದಲ್ಲಿ ತರಲಾಗುತ್ತಿದೆ ಎಂದು ರವಿಕುಮಾರ್ ಟೀಕಿಸಿದರು.
ಸಿಎಂ ಪತ್ನಿ ಈಗ ಮುಡಾದವರ ಮೇಲೆ 420 ಕೇಸ್ ಹಾಕಬೇಕಾಗಿದೆ. ಬಿಜೆಪಿಯವರೇ ಮುಡಾ ಹಗರಣ ಮಾಡಿ, ಈಗ ಸಿಎಂ ಸಿದ್ದರಾಮಯ್ಯನವರನ್ನು ಸಿಕ್ಕಿ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುದ್ಧ ಹಸ್ತದವರು. ಸಿಎಂ ಆಗಿ 5 ವರ್ಷ ಅಧಿಕಾರ ಅನುಭವಿಸಿದ ನಂತರ ಚುನಾವಣೆ ಎದುರಿಸಬೇಕಾದಾಗ ಎಂಟಿಬಿ ನಾಗರಾಜ್ ಬಳಿ ಸಾಲ ಮಾಡಿದ್ದರು ಎಂದರು.
ರಾಜಭವನವನ್ನು ಬಿಜೆಪಿಗರು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಯಾವುದೇ ಪತ್ರವನ್ನೂ ಕಳಿಸಲ್ಲ. ರಾಜ್ಯಪಾಲರ ಹೆಸರಿನಲ್ಲಿ ಬಿಜೆಪಿ ವಕ್ತಾರರು ಮಾಸ್ಟರ್ ಮೈಂಡ್ಗಳು ಕಳುಹಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹುನ್ನಾರ ಮಾಡಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದುಕೊಂಡಿದ್ದಾರೆ. ಅದಕ್ಕಾಗಿಯೇ ಈ ದೊಂಬರಾಟ ಮಾಡುತ್ತಿದ್ದಾರೆ ಎಂದರು.
ನಮ್ಮ ಕುಟುಂಬದ ವಿರುದ್ದ ಸಿಡಿ ಬಿಟ್ಟರು, ಪೆನ್ಡ್ರೈವ್ ಬಿಟ್ಟರು ಆದ್ದರಿಂದ ನಾನು ಹೋರಾಟಕ್ಕೆ ಬರಲ್ಲ ಎಂದಿದ್ದರು. ಈಗ ಅವರನ್ನೇ ಕರೆದುಕೊಂಡು ಹೊರಟಿದ್ದಾರೆ. ಇವರಿಗೆ ಯಾವುದೇ ನಿಲುವಿಲ್ಲ. ಸಿದ್ದರಾಮಯ್ಯನವರನ್ನು ಇಳಿಸಿ ಇವರು ಸಿಎಂ ಆಗಿಬಿಡಬೇಕು ಎನ್ನುವ ದುರಾಸೆ ಅಷ್ಟೆ ಎಂದರು.
ಪಾದಯಾತ್ರೆ ರೀತಿ ಬರುತ್ತಿರುವ ಡ್ರಾಮಾ ಕಂಪನಿಗೆ ಉತ್ತರ ಕೊಡಲೆಂದೇ ನಾವು ಸಮಾವೇಶ ಮಾಡುತ್ತಿದ್ದೇವೆ. ಅವರಲ್ಲೇ ಗೊಂದಲವಿದೆ. ನಾಯಕತ್ವಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಬೆಳಿತಾರೆ ಅಂತ ಜೆಡಿಎಸ್ನವರು, ಜೆಡಿಎಸ್ನವರು ಬೆಳಿತಾರೆ ಎಂದು ಬಿಜೆಪಿಯವರು, ಒಟ್ಟಿನಲ್ಲಿ ಇದು ಡ್ರಾಮಾ ಕಂಪನಿಯಾಗಿದೆ ಎಂದು ಹೇಳಿದರು.












Click it and Unblock the Notifications