ಕಾಂಗ್ರೆಸ್ ಪಕ್ಷ ಜನರನ್ನು ದಿಕ್ಕು ತಪ್ಪಿಸುತ್ತಿದೆ: ಬೂಕನಕೆರೆಯಲ್ಲಿ ಮಾಜಿ ಸಿಎಂ ಬಿಎಸ್ವೈ ಆಕ್ರೋಶ
ಕೆ.ಆರ್.ಪೇಟೆ, ನವೆಂಬರ್, 23: ಇಲ್ಲ ಸಲ್ಲದ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷ ಜನರನ್ನು ದಿಕ್ಕು ತ್ತಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಬೂಕನಕೆರೆಯಲ್ಲಿ ಕಿಡಿಕಾರಿದರು.ಸ್ವಗ್ರಾಮ ಬೂಕನಕೆರೆ ಗ್ರಾಮದಲ್ಲಿ ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆದೇಶ ಉಲ್ಲಂಘನೆ: ಮುಜುಗರ ತಪ್ಪಿಸಿಕೊಳ್ಳಲು ಸಭೆ ರದ್ದುಪಡಿಸಿದ ಮಂಡ್ಯ ಸಂಸದೆ ಸುಮಲತಾ
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯುತ್ತಮವಾಗಿ ಆಡಳಿತವನ್ನು ನಡೆಸುತ್ತಿದ್ದಾರೆ. ಇದನ್ನು ಸಹಿಸದ ವಿರೋಧ ಪಕ್ಷಗಳು ಪ್ರತಿನಿತ್ಯ ದಾಳಿ ನಡೆಸುತ್ತಿವೆ. ಇದರಿಂದ ಬೊಮ್ಮಾಯಿ ವಿಚಲಿತರಾಗಲಿ ಎಂಬುದೇ ಅವರೆಲ್ಲರ ಹುನ್ನಾರವಾಗಿದೆ. ಈ ಹುನ್ನಾರ ನಮಗೂ ಗೊತ್ತಿದ್ದು, ಇದನ್ನು ಸಮರ್ಥವಾಗಿ ಬಸವರಾಜ ಬೊಮ್ಮಾಯಿಯವರೇ ಎದುರಿಸುತ್ತಾರೆ. ಬಿಜೆಪಿ ಪಕ್ಷವೂ ಎದುರಿಸುತ್ತದೆ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಗಳಾಗಿ ಆಡಳಿತ ನಡೆಸುತ್ತಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಅವರಿಗೆ ತಪ್ಪಿದ್ದಾಗ ಎಚ್ಚರಿಸುತ್ತಿದೆವು ಅಷ್ಟೆ. ಆದರೆ ಅವರು ತಪ್ಪಲ್ಲದ ವಿಷಯಗಳನ್ನು ತಿರುಚಿ ರಾಜ್ಯದ ಜನರ ಮುಂದೆ ಇಟ್ಟು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ವಿರುದ್ಧ ಬಿಎಸ್ವೈ ಕಿಡಿ
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರು ಏನು ಕೆಲಸ ಮಾಡಿದ್ದಾರೆ? ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿಯನ್ನು ಟೀಕಿಸುವ ಮೊದಲು ನಿಮ್ಮ ಸರ್ಕಾರದಲ್ಲಿ ನೀವೇನು ಮಾಡಿದ್ದೀರಿ? ಮೈಶುಗರ್ ಕಾರ್ಖಾನೆಯನ್ನು ಮುಚ್ಚಿಸಿದವರು ಯಾರು? ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸಿದವರು ಯಾರು? ಬಿಜೆಪಿ ಸರ್ಕಾರ ಬಂದಮೇಲೆ ಎರಡೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲಾಗಿದೆ. ಈ ಮೂಲಕ ರೈತರ ಕಣ್ಣೀರನ್ನು ಒರೆಸುವ ಕೆಲಸವನ್ನು ಬಿಜೆಪಿ ಮಾಡಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದಾರೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾರಾಯಣ ಗೌಡ ಮನವಿ ಮಾಡಿದರು.
ಜನರ ಕೆಲಸಗಳನ್ನು ಮಾಡಲು ಸದಾ ಸಿದ್ಧ
ನಾನು ಬೂಕನಕೆರೆಯ ಮಣ್ಣಿನ ಮಗನಾಗಿದ್ದೇನೆ. ನಿಮ್ಮ ಗ್ರಾಮದ ಮಗ ಬೆಂಗಳೂರಿನಲ್ಲಿ ಇದ್ದಾನೆ ಅಂತಾ ತಿಳಿದುಕೊಳ್ಳಿ. ನಾನು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವಿಟ್ಟು ದೇಶದ ರಾಜಕಾರಣಕ್ಕೆ ಕರೆದೊಯ್ದಿದ್ದಾರೆ. ಈ ಊರಿನ ಮಗನಾಗಿ ಮೋದಿಜೀಯವರ ಮತ್ತು ನಿಮ್ಮೆಲ್ಲರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಕ್ಷೇತ್ರದ ಶಾಸಕ ಹಾಗೂ ಸಚಿವ ಕೆ.ಸಿ.ನಾರಾಯಣಗೌಡರಿಗೆ ನೀವೂ ಸಹಕರಿಸಿ ಎಂದು ಮನವಿ ಮಾಡಿದರು.
ಸಚಿವರಿಂದ ಅಭಿವೃದ್ದಿಯ ಮಹಾಪೂರ
ನಾರಾಯಣಗೌಡರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಅಭಿವೃದ್ದಿಯ ಮಹಾಪೂರವನ್ನೇ ಹರಿಸಿದ್ದಾರೆ. ಮಂಡ್ಯ ಜಿಲ್ಲೆಗೆ ನಾರಾಯಣಗೌಡರು ಜನಪರವಾದ ಕೆಲಸಗಳನ್ನು ಮಾಡಿಸಿದ್ದಾರೆ. ಕೆ.ಆರ್. ಪೇಟೆಯಲ್ಲಿಯೂ ಅಭಿವೃದ್ಧಿಯ ನಾಗಾಲೋಟವೇ ಮುಂದುವರೆದಿದೆ. ಕುಡಿಯುವ ನೀರು ಹಾಗೂ ಕೃಷಿಗೆ ಬೇಕಾದ ನೀರನ್ನು ಒದಗಿಸಲು ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಕೆಲಸಗಳು ಕೂಡ ಬಿರುಸಿನಿಂದ ನಡೆಯುತ್ತಿವೆ. ರಸ್ತೆ ಅಭಿವೃದ್ಧಿಯ ಬಗ್ಗೆ ಗಮನಹರಿಸುವಂತೆ ನಾರಾಯಣಗೌಡರಿಗೆ ಹೇಳಿದ್ದೇನ ಎಂದರು.
ಅನುದಾನ ಬಿಡುಗಡೆಯ ಭರವಸೆ
ಇನ್ನೂ ಹೆಚ್ಚಿನ ಅನುದಾನವನ್ನು ನಮ್ಮ ಕೆ.ಆರ್.ಪೇಟೆ ತಾಲೂಕಿಗೆ ಒದಗಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ನಾರಾಯಣಗೌಡರ ಅಭಿವೃದ್ದಿ ಕಾರ್ಯಗಳ ಬಗ್ಗೆ ನನಗೆ ತೃಪ್ತಿಯಿದೆ. ಈ ಅಭಿವೃದ್ದಿಯನ್ನು ನೋಡಿ ಮುಂಬರುವ ಚುನಾವಣೆಯಲ್ಲಿ ನಾರಾಯಣಗೌಡರ ವಿರುದ್ಧ ಯಾರೂ ಸ್ಪರ್ಧೆ ಮಾಡುವ ದುಸ್ಸಾಹಸವನ್ನು ಮಾಡಲಾರರು ಎನಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಸಚಿವ ಡಾ.ನಾರಾಯಣಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮುಖಂಡರಾದ ಬಿ.ಜವರಾಯಿಗೌಡ, ಹುಲ್ಲೇಗೌಡ, ಮೀನಾಕ್ಷಿ ಪುಟ್ಟರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.