ಬಿಜೆಪಿಯವರಿಗೆ ಎರಡು ನಾಲಗೆ, ಎರಡು ತಲೆ; ಸಿಎಂ
ಮಂಡ್ಯ, ಜನವರಿ 12: ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಕೆಲಸ ಮಾಡಿದ್ದೇವೆ, ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ, ಈಗ ಮಾಡಿರುವ ಕಾರ್ಯಕ್ಕೆ ಮತ ರೂಪದ ಕೂಲಿ ಕೇಳುತ್ತಿದ್ದೇವೆ ಎಂದರು.
ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಏನು?
ಬಿಜೆಪಿಯವರಿಗೆ ಎರಡು ತಲೆ, ಎರಡು ನಾಲಗೆ ಎಂದು ಮೂದಲಿಸಿದ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ಟಿಪ್ಪುವನ್ನು ಹೊಗಳಿ ಈಗ ನಾವು ಟಿಪ್ಪು ಜಯಂತಿ ಆಚರಿಸುವಾಗ ವಿರೋಧ ಮಾಡುತ್ತಿದ್ದಾರೆ ಎಂದರು.
ಶೋಷಿತರು ನಿರ್ನಾಮ ಮಾಡುತ್ತಾರೆ
ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದ ಮುಖ್ಯಮಂತ್ರಿ ಅವರು, ಬಿಜೆಪಿ ಸಸ್ಯರು ಸಂವಿಧಾನ ಬದಲದಾಯಿಸುವ ಮಾತನಾಡುತ್ತಿದ್ದಾರೆ, ಹಾಗೇನಾದರೂ ಮಾಡಿದರೆ ದೇಶದಲ್ಲಿ ಧಂಗೆಗಳಾಗುತ್ತವೆ, ಶೋಷಿತರು ಬಿಜೆಪಿಯನ್ನು ನಿರ್ನಾಮ ಮಾಡಿಬಿಡುತ್ತಾರೆ ಎಂದು ಎಚ್ಚರಿಸಿದರು.
ಯಾಕೆ ಸಾಲ ಮನ್ನಾ ಮಾಡಲಿಲ್ಲ
ಜೆಡಿಎಸ್ ಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಅವರು, ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಸುಮ್ಮನೇ ಭರವಸೆಗಳನ್ನು ಕೊಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ಅವರು ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಹೇಗೋ ಅಧಿಕಾರಕ್ಕೆ ಬರೋದಿಲ್ಲ ಸುಮ್ಮನೆ ಕತೆ ಹೇಳುತ್ತಾರೆ ಎಂದರು.
ಮುನಿಸು ಮರೆಯಿರಿ
ಮಳ್ಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ಮಖಂಡ ಶಿವಣ್ಣ ಅವರುಗಳಿಗೆ ವೇದಿಕೆ ಮೇಲೆಯೇ ಸಿದ್ದರಾಮಯ್ಯ ಅವರು ಬುದ್ಧಿಮಾತು ಹೇಳಿದರು. ಇಬ್ಬರೂ ನಾಯಕರಿಗೆ ಪರಸ್ಪರ ಮನಸ್ಥಾಪ ಇದೆ, ಆದರೆ ಅದನ್ನೆಲ್ಲಾ ಬಿಟ್ಟು ಒಟ್ಟಾಗಿ ಚುನಾವಣೆಗೆ ಹೋಗಬೇಕು ಎಂದರು. ಇಬ್ಬರನ್ನೂ ಕರೆಸಿ ಮಾತನಾಡುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದರು.
ನೀರು ಕೊಟ್ಟೆ ಕೊಡುತ್ತೇವೆ
ಮಳವಳ್ಳಿ ರೈತರು ನೀರಿಲ್ಲಾ ಎಂಬ ಕಾರಣಕ್ಕೆ ಜಮೀನು ಮಾರಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಕುರಿಗಾಲಿ ಏತನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ ಖಂಡಿತಾ ಇಲ್ಲಿನ ರೈತರಿಗೆ ನೀರು ಕೊಟ್ಟೇ ಕೊಡುತ್ತೇವೆ ಆತುರಪಟ್ಟು ಆಂಧ್ರದವರಿಗೆ ಜಮೀನು ಮಾರಿ ನಿಮ್ಮದೇ ಜಮೀನಿನಲ್ಲಿ ಕೂಲಿ ಆಳಾಗಬೇಡಿ ಎಂದು ಮನವಿ ಮಾಡಿದರು.
ಧೀರ ವ್ಯಕ್ತಿತ್ವವನ್ನು ನೆನದರೆ ತಪ್ಪಾ?
ಟಿಪ್ಪು ಇತಿಹಾಸವನ್ನು ನೆನೆಸಿಕೊಂಡ ಸಿದ್ದರಾಮಯ್ಯ ಅವರು ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ಜನರಿಗೆ ತಿಳಿಸಿದರು. ಕೊನೆಯ ಯುದ್ಧದಲ್ಲಿ 'ಮೀರ್ ಸಾದಕ್' ರು ಮೋಸ ಮಾಡದೇ ಇದ್ದರೆ ಟಿಪ್ಪು ವಿಜಯಿಯಾಗಗುತ್ತಿದ್ದರು, ಮಹಾನ್ ದೇಶಭಕ್ತ ಆತ ಎಂದು ಸಿದ್ದರಾಮಯ್ಯ ಹೇಳಿದರು. ಅಂತಹಾ ವ್ಯಕ್ತಿಯನ್ನು ನೆನೆದರೆ ಏನು ತಪ್ಪು ಎಂದು ಅವರು ಕೇಳಿದರು.