ಮಗು ಹೊತ್ತ ತಾಯಿಯ ವೇದನೆ ಅನುಭವಿಸುತ್ತಿದ್ದೇನೆ: ಎಚ್ಡಿಕೆ ಮತ್ತೆ ಭಾವುಕ
Recommended Video

ಮಂಡ್ಯ, ಫೆಬ್ರವರಿ 19: ಮೈತ್ರಿ ಸರ್ಕಾರ ಒಂಬತ್ತು ತಿಂಗಳು ಆಡಳಿತ ಪೂರೈಸುತ್ತಿದ್ದು, ಮಗುವನ್ನು ಹೊತ್ತಿರುವ ತಾಯಿಯ ವೇದನೆ ನಾನು ಅನುಭವಿಸುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಭಾವುಕರಾದರು.
ಮಂಡ್ಯದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಒಂಬತ್ತು ತಿಂಗಳಿಗೆ ಕಾಲಿಡುತ್ತಿದೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡುವುದು ಮಗುವಿಗೆ ಜನ್ಮ ನೀಡಿದಂತೆ ಆಗುತ್ತಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಮಂಡ್ಯ ಜಿಲ್ಲೆ ನಮಗೆ ಏಳು ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ, ಅದಕ್ಕೆ ನಾನು ಸದಾ ಚಿರರುಣಿ ಎಂದ ಕುಮಾರಸ್ವಾಮಿ, ಬಜೆಟ್ ನಲ್ಲಿ ಮಂಡ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇವೆ, ಬಜೆಟ್ ಹೊರತಾಗಿಯೂ ಹಲವು ಯೋಜನೆಗಳನ್ನು ಮಂಡ್ಯಕ್ಕೆ ಕೊಡಲಾಗುವುದು ಎಂದರು.

ಸಾಲಮನ್ನಾ ಮಾಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ, ಆದರೆ ಅಧಿಕಾರಿಗಳು ನನ್ನ ವೇಗಕ್ಕೆ ಸರಿಹೊಂದುತ್ತಿಲ್ಲ ಎಂದ ಅವರು ಕೆಲವೇ ದಿನಗಳಲ್ಲಿ ಮಂಡ್ಯದಲ್ಲಿ ಋಣಮುಕ್ತ ಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಹೋರಾಟಗಾರ ಪುಟ್ಟಣ್ಣಯ್ಯ ಅವರನ್ನು ನೆನೆದ ಸಿಎಂ, ಅವರಿದ್ದಾಗಲೇ ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಬೀಗಹಾಕಲಾಯಿತು, ಕಬ್ಬು ಬೆಳೆಗಾರರಿಗೆ ಅನ್ಯಾಯ ಆಯಿತು, ಆದರೆ ಅವರಿದ್ದಿದ್ದರೆ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗಲು ಪುಟ್ಟಣ್ಣಯ್ಯ ಬಿಡುತ್ತಿರಲಿಲ್ಲ ಎಂದರು.
ಮಂಡ್ಯಕ್ಕೆ ನೀಡಿರುವ, ನೀಡಲಿರುವ ಯೋಜನೆಗಳ ಪಟ್ಟಿ ಓದಿದ ಕುಮಾರಸ್ವಾಮಿ, ಫೆಬ್ರವರಿ 27 ರಂದು ಮೂರು ಸಾವಿರ ಕೋಟಿಯ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು. ಹೊಸ ಸಕ್ಕರೆ ಕಾರ್ಖಾನೆ ತೆರೆಯಲು 100 ಕೋಟಿ ಮಂಜೂರು ಮಾಡಿದ್ದು, ಭತ್ತ ಖರೀದಿಗೂ 50 ಕೋಟಿ ನೀಡಲಾಗಿದೆ ಎಂದರು.












Click it and Unblock the Notifications