ಮಂಡ್ಯ; ಮನ್ಮುಲ್ ಕಲಬೆರಕೆ ಪ್ರಕರಣದ ತನಿಖೆಗೆ ಸಿಐಡಿಗೆ
ಮಂಡ್ಯ, ಜೂನ್ 14; ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮನ್ಮುಲ್) ಹಗರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಿಐಡಿ ತನಿಖೆಗೆ ವಹಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಮಂಡ್ಯ ಹಾಲಿನ ಕಲಬೆರಕೆ ಪ್ರಕರಣ ಈ ಬಗ್ಗೆ ಪ್ರಾಥಮಿಕ ತನಿಖೆಗೆ ಆದೇಶ ಮಾಡಲಾಗಿದೆ. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬದಲಾವಣೆ ಮಾಡಿ, ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗಿದೆ" ಎಂದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ಧಾರ ಖಂಡಿಸಿದ ಶಾಸಕ ಎ.ಮಂಜುನಾಥ್
"ತಪ್ಪಿತಸ್ಥರನ್ನು ಅಮಾನತು ಮಾಡಲಾಗಿದೆ. ತಪ್ಪು ಎಸಗಿದವರ ವಿರುದ್ಧ ತನಿಖೆ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಸಿಐಡಿ ತನಿಖೆಗೆ ವಹಿಸಲು ತೀರ್ಮಾನ ಮಾಡಲಾಗಿದೆ" ಎಂದು ಹೇಳಿದರು.
ಏನಿದು ಪ್ರಕರಣ; ಮಂಡ್ಯ ಹಾಲು ಒಕ್ಕೂಟದಲ್ಲಿ ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣ ಬೆಳಕಿಗೆ ಬಂದಿತ್ತು. ಹಗರಣ ಬೆಳಕಿಗೆ ಬಂದು 10 ದಿನಗಳು ಕಳೆದರೂ ಪೊಲೀಸರ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದಿರಲಿಲ್ಲ.
ಜನರು ಹಗರಣದ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದ್ದರು. ಆಡಳಿತ ಮಂಡಳಿ ಗಮನಕ್ಕೆ ಬಾರದೇ ಇಂತಹ ಘಟನೆ ನಡೆಯುವುದು ಅಸಾಧ್ಯ. ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದ್ದರು.
ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ?
ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹಾಲು ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯಿಂದ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಮಂಡ್ಯ ಹಾಲು ಒಕ್ಕೂಟದ ಕಚೇರಿ ಇದೆ. ಪ್ರತಿದಿನ ಸುಮಾರು 9.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಇಲ್ಲಿನ ಆಡಳಿತ ಜೆಡಿಎಸ್ ಪಕ್ಷದ ವಶದಲ್ಲಿದೆ.
ಹಳ್ಳಿಗಳಿಂದ ಹಾಲನ್ನು ತುಂಬಿಕೊಂಡು ಬರುವಾಗ ಅಪಾರ ಪ್ರಮಾಣದ ನೀರನ್ನು ಮಿಶ್ರಣ ಮಾಡಿಕೊಂಡು ಬರುವುದು ಮೇ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು. ಒಕ್ಕೂಟಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವನ್ನು ಮಾಡಲಾಗಿತ್ತು.
ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಹಾಲಿಗೆ ನೀರನ್ನು ಮಿಶ್ರಿಣ ಮಾಡಲು ಟ್ಯಾಂಕರ್ಗಳಿಗೆ ವಿಶೇಷ ವಿನ್ಯಾಸ ಮಾಡಲಾಗಿತ್ತು.
ಲಾರಿ ಚಾಲಕನೊಬ್ಬನನ್ನು ಬಂಧಿಸಿರುವುದು, ಚನ್ನಪಟ್ಟಣ ಮೂಲದ ಗುತ್ತಿಗೆದಾರ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು ಬಿಟ್ಟರೆ ಪ್ರಕರಣದಲ್ಲಿ ಬೆಳವಣಿಗೆ ನಡೆದಿರಲಿಲ್ಲ. ಈಗ ಸರ್ಕಾರ ಸಿಐಡಿ ತನಿಖೆಗೆ ವಹಿಸುವ ಕುರಿತು ನಿರ್ಧಾರ ಕೈಗೊಂಡಿದೆ.