ಪದವೀಧರ ಚುನಾವಣೆಯಲ್ಲಿ ಗೆಲುವಿನ ಕಾರಣ ಬಿಚ್ಚಿಟ್ಟ ಚಲುವರಾಯಸ್ವಾಮಿ
ಮಂಡ್ಯ, ಜೂ17: ''ನಾಲ್ಕು ಜಿಲ್ಲೆಗಳಲ್ಲಿನ ಕಾಂಗ್ರೆಸ್ ಒಗಟ್ಟಿನ ಪ್ರದರ್ಶನದಿಂದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು'' ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ, ''ಚುನಾವಣೆಗೆ ಒಂದು ವರ್ಷವಿರುವಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಜಿ.ಮಾದೇಗೌಡ ಅವರನ್ನು ಘೋಷಣೆ ಮಾಡಿತು. ಹಾಸನ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕಾಂಗ್ರೆಸ್ಸಿಗರು ಅಭ್ಯರ್ಥಿ ಪರವಾಗಿ ಒಗ್ಗಟ್ಟು ಪ್ರದರ್ಶಿಸಿದರು. ಇದರೊಂದಿಗೆ ಪದವೀಧರರ ಒಲವು ಕಾಂಗ್ರೆಸ್ ಪರವಾಗಿದ್ದರಿಂದ ಭಾರೀ ಮತಗಳ ಅಂತರದ ಗೆಲುವು ಸಾಧ್ಯವಾಯಿತು'' ಎಂದರು.
ನೆಂಟಸ್ತಿಕೆ ರಾಜಕಾರಣ ಮಾಡಿಕೊಳ್ಳುವ ಬಿಜೆಪಿ-ಜೆಡಿಎಸ್ಗೆ ತಕ್ಕ ಉತ್ತರ
ಬಿಜೆಪಿಯ ದುರಾಡಳಿತ, ಜೆಡಿಎಸ್ ರಾಜಕೀಯ ದೊಂಬರಾಟಗಳಿಂದ ಬೇಸತ್ತ ಪದವೀಧರರು 40 ವರ್ಷದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಇದು ಜಿಲ್ಲೆಯ ಸ್ವಾಭಿಮಾನಕ್ಕೆ ಸಿಕ್ಕ ಗೆಲುವಾಗಿದೆ. ಶೇ.70ರಷ್ಟು ಮೊದಲ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಿರುವ ಪದವೀಧರರು, ಆಗಾಗ ನೆಂಟಸ್ತಿಕೆ ರಾಜಕಾರಣ ಮಾಡಿಕೊಳ್ಳುವ ಬಿಜೆಪಿ-ಜೆಡಿಎಸ್ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಚುಚ್ಚಿದರು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ. ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ವಾತಾವರಣ ಸೃಷ್ಟಿಯಾಗಿದೆ. 2018ರ ಚುನಾವಣೆಯಲ್ಲಿದ್ದ ಪರಿಸ್ಥಿತಿ ಬದಲಾಗಿದೆ.
ಏಳಕ್ಕೆ ಏಳು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ
ಜಿಲ್ಲೆಯೊಳಗೆ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸುವ ಸನ್ನಿವೇಶವಿದೆ. ಹಾಗಾಗಿ ನಾವು ಇನ್ನಷ್ಟು ಪರಿಶ್ರಮದೊಂದಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ ಎಂದರು. ಜೆಡಿಎಸ್ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಕೀಲಾರ ಜಯರಾಂ ಬೆಂಬಲಿಗರು ಪಕ್ಷದ ವರಿಷ್ಠರ ನಿಲುವಿನಿಂದ ಬೇಸತ್ತು ಹೊರಬಂದು ಕಾಂಗ್ರೆಸ್ ಬೆಂಬಲಿಸಿದರು.

30 ವರ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದವರಿಗೆ ಕೈಕೊಟ್ಟು ಹಣವಿದ್ದವರಿಗೆ ನಾಯಕರು ಮಣೆ ಹಾಕಿದ್ದರಿಂದ ಅವರು ಮಧುಗೆ ಶಕ್ತಿ ತುಂಬಿದರು. ರೈತಸಂಘ, ದಸಂಸ ಹಾಗೂ ಜೆಡಿಎಸ್ನ ಹಲವರು ಎರಡನೇ ಪ್ರಾಶಸ್ತ್ಯದ ಮತಗಳನ್ನು ಮಧುಗೆ ನೀಡಿದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಯಿತು ಎಂದು ನುಡಿದರು.
ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ರವಿಕುಮಾರ ಗಣಿಗ, ಡಾ.ಹೆಚ್.ಕೃಷ್ಣ, ರುದ್ರಪ್ಪ ಇತರರಿದ್ದರು.












Click it and Unblock the Notifications