7.30ಕ್ಕೆ ಬಾಗಿಲು ತೆರೆಯಲಿದೆ ಮೇಲುಕೋಟೆ ದೇವಾಲಯ
ಮಂಡ್ಯ, ಜೂನ್ 27 : ಮೇಲುಕೋಟೆಯ ಪ್ರಸಿದ್ಧ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಇನ್ನು ಮುಂದೆ ಮುಂಜಾನೆಯೇ ದೇವರ ದರ್ಶನ ಪಡೆಯಬಹುದಾಗಿದೆ. ಹೌದು, ದೇವಾಲಯದ ಬಾಗಿಲು ತೆರೆಯುವ ಸಮಯವನ್ನು ಬದಲಾವಣೆ ಮಾಡಲಾಗುತ್ತದೆ.
ಭಕ್ತಾದಿಗಳ ಒತ್ತಾಯದ ಹಿನ್ನಲೆಯಲ್ಲಿ ಇನ್ನು ಮುಂದೆ ಚೆಲುವನಾರಾಯಣ ಸ್ವಾಮಿ ದೇವಾಲಯ ಬೆಳಗ್ಗೆ 7.30ಕ್ಕೆ ಬಾಗಿಲು ತೆರೆಯಲಿದೆ. ಮೊದಲು 9.30ಕ್ಕೆ ಬಾಗಿಲು ತೆರೆಯಲಾಗುತ್ತಿತ್ತು. ಇದರಿಂದ ಮುಂಜಾನೆ ಆಗಮಿಸಿದ ನೂರಾರು ಭಕ್ತಾದಿಗಳು ದೇವರ ದರ್ಶನಕ್ಕೆ ಹಲವು ತಾಸು ಕಾಯಬೇಕಾಗಿತ್ತು.
ದೇವಾಲಯದ ಫಲಕದಲ್ಲಿ 7.30ಕ್ಕೆ ಬಾಗಿಲು ತೆರೆಯಲಾಗುತ್ತದೆ ಎಂದು ಬರೆದಿದೆ. ಆದರೆ, ಇಷ್ಟು ದಿನ 9.30ಕ್ಕೆ ಬಾಗಿಲು ತೆರೆಯಲಾಗುತ್ತಿತ್ತು. ಈಗ ಈ ನಿಯಮವನ್ನು ಪಾಲನೆ ಮಾಡಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ.

9.30ಕ್ಕೆ ದೇವಾಲಯದ ಬಾಗಿಲು ತೆರೆಯುತ್ತಿದ್ದರಿಂದ ಪೂಜೆ, ಮಹಾಮಂಗಳಾರತಿ ವಿಳಂಬವಾಗುತ್ತಿತ್ತು. ಮುಂಜಾನೆ ದೇವಾಲಯಕ್ಕೆ ಬಂದ ಭಕ್ತಾದಿಗಳು ಹಲವು ತಾಸು ಕಾಯಬೇಕಾಗಿತ್ತು. ಈಗ 7.30ಕ್ಕೆ ಬಾಗಿಲು ತೆರೆಯುವುದರಿಂದ ಅನುಕೂಲವಾಗಲಿದೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಕೆಲವು ದಿನಗಳ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಆಗ ಭಕ್ತರು ನೂರಾರು ದೂರುಗಳನ್ನು ನೀಡಿದ್ದರು. ದೇವಾಲಯದ ಸಿಬ್ಭಂದಿ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಆಗ ದೂರು ಬಂದಿತ್ತು.
ದೂರುಗಳನ್ನು ಪರಿಶೀಲಿಸಿದ್ದ ನಂಜೇಗೌಡ ಅವರು ನಿಯಮಾವಳಿಗಳನ್ನು ಪಾಲಿಸಿ, 7.30ಕ್ಕೆ ದೇವಾಲಯವನ್ನು ತೆರೆಯಿರಿ ಎಂದು ಮುಖ್ಯ ಅರ್ಚಕರಿಗೆ ಸೂಚನೆ ನೀಡಿದ್ದರು. ಆದ್ದರಿಂದ, ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಆಡಳಿತ ಮಂಡಳಿ ಮುಂದಾಗಿದೆ.












Click it and Unblock the Notifications