Mandya: ಮಂಡ್ಯ ಜನ ಹೊರಗಿನವರಿಗೆ ಮಣಿಯಲ್ಲ ಎಂದ ಚಲುವರಾಯಸ್ವಾಮಿ
ಮಂಡ್ಯ ಜಿಲ್ಲೆಯ ಜನ ಬುದ್ಧಿವಂತರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊರಗಿನವರಿಗೆ ಭಾವನಾತ್ಮಕವಾಗಿ ಎಂದೂ ಮಣಿದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಲೋಕಸಭಾ ಅಭ್ಯರ್ಥಿ ಸ್ಟಾರ್ಚಂದ್ರು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಒಂದು ಕಡೆ ಹೋದಾಗ ಅದು ನನ್ನ ಕರ್ಮಭೂಮಿ ಎನ್ನುತ್ತಾರೆ. ರಾಮನಗರ, ಮಂಡ್ಯ, ಚನ್ನಪಟ್ಟಣದಲ್ಲೂ ಅದೇ ಮಾತು ಹೇಳುತ್ತಾರೆ. ರಾಮನಗರವನ್ನು ಪೂರ್ಣವಾಗಿ ತಿರಸ್ಕರಿಸಿ ಮಂಡ್ಯಕ್ಕೆ ಬರುವರೋ ಅಥವಾ ಅರ್ಧಕ್ಕೆ ಬಿಟ್ಟು ಇಲ್ಲಿಗೆ ಬರುವರೋ ಅಥವಾ ಕೊನೇ ಘಳಿಗೆಯಲ್ಲಿ ಬೇರೆ ಯಾರನ್ನಾದರೂ ಕಣಕ್ಕಿಳಿಸುವರೋ ಗೊತ್ತಿಲ್ಲ ಎಂದು ಹೇಳಿದರು.

ಮೂರು ಬಾರಿ ಮುಖ್ಯಮಂತ್ರಿ ಮಾಡಿದ ರಾಮನಗರವನ್ನು ನನ್ನ ಪ್ರಾಣ ಇರೋವರೆಗೂ ಬಿಟ್ಟುಹೋಗೋಲ್ಲ ಎನ್ನುತ್ತಿದ್ದರು. ಈಗ ರಾಮನಗರ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ ಎಂದು ಅಲ್ಲಿಯ ಜನರೇ ಹೇಳುತ್ತಿದ್ದಾರೆ. ಈಗ ಏನು ನಿರ್ಧಾರ ಮಾಡುವರೋ ನೋಡಬೇಕಿದೆ ಎಂದರು.
ಕಾಂಗ್ರೆಸ್ಗೆ ಜನಾಶೀರ್ವಾದ ಎಂದ ಸಚಿವ
ಕುಮಾರಸ್ವಾಮಿ ಅವರು ದೇವೇಗೌಡರ ಮಗ, ಮಾಜಿ ಮುಖ್ಯಮಂತ್ರಿ. ಅಲ್ಲದೆ, ರಾಜ್ಯದ ನಾಯಕ. ಅವರ ಬಗ್ಗೆ ಗೌರವವಿದೆ. ನಾವು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಹೊರಗಿನವರಿಗೆ ಜಿಲ್ಲೆಯ ಜನರು ಅಷ್ಟು ಸುಲಭವಾಗಿ ಅವಕಾಶ ನೀಡಿಲ್ಲ. ಭಾವನಾತ್ಮಕವಾಗಿ ಮಣಿದಿರುವ ನಿದರ್ಶನಗಳೂ ಇಲ್ಲ. ಜಿಲ್ಲೆಯ ಜನರು ತೀರ್ಮಾನ ಮಾಡುವಾಗ ಹತ್ತು ಬಾರಿ ಯೋಚನೆ ಮಾಡುತ್ತಾರೆ. ನಮ್ಮ ಅಭಿವೃದ್ಧಿ ನೋಡಿಕೊಂಡು ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಒಮ್ಮೆ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ನಮ್ಮ ಚುನಾವಣೆ ನಾವು ಮಾಡುತ್ತೇವೆ. ನಾವು ಜನರ ಮುಂದೆ ನಮ್ಮ ಕೆಲಸ ಇಟ್ಟುಕೊಂಡು ಹೋಗುತ್ತೇವೆಯೇ ವಿನಃ ನಾವು ಯಾವುದು ಸುಲಭ, ಕಷ್ಟ ಎಂದು ಜನರ ಮುಂದೆ ಹೋಗುವುದಿಲ್ಲ ಎಂದರು.
ಯುದ್ಧಕ್ಕೆ ನಿಂತಾಗ ಎದುರಾಳಿ ಯಾರೆಂದು ನೋಡುವುದಿಲ್ಲ. ನಾವು ಯಾರನ್ನೋ ಸೋಲಿಸಲು ಇನ್ಯಾರನ್ನೋ ತಂದು ನಿಲ್ಲಿಸುವುದೂ ಇಲ್ಲ. ಸಂಸದೆ ಸುಮಲತಾ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಯುವಂತೆ ನಾವಂತೂ ಹೇಳಿಲ್ಲ. ಕಳೆದ ಚುನಾವಣೆಯಿಂದ ಇಲ್ಲಿಯವರೆಗೂ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಯೂ ಇಲ್ಲ. ಅವರ ನಿಲುವುಗಳ ಬಗ್ಗೆ ಪ್ರಶ್ನೆಯನ್ನೂ ಮಾಡಿಲ್ಲ. ಅವರು ಯಾವ ನಿರ್ಧಾರ ಕೈಗೊಂಡರೂ ನಮ್ಮ ಅಭ್ಯಂತರವಿಲ್ಲ ಎಂದರು.
ವೈಯಕ್ತಿಕವಾಗಿ ಸುಮಲತಾ ಮತ್ತು ನಾವು ವಿಶ್ವಾಸದಿಂದ ಇದ್ದೇವೆ. ಸದ್ಯ ಸುಮಲತಾ ಅವರ ನಡುವೆ ರಾಜಕೀಯ ಮಾತುಕತೆ ನಡೆಸುವ ಪ್ರಮೇಯ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಸಂಪರ್ಕದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ಅತಿ ಶೀಘ್ರದಲ್ಲೇ ನಾರಾಯಣಗೌಡ ಹಾಗೂ ಕೆ.ಆರ್.ಪೇಟೆ ಭಾಗದ ಮುಖಂಡರು ಪಕ್ಷ ಸೇರ್ಪಡೆ ಆಗಲಿದ್ದಾರೆ. ನಾರಾಯಣಗೌಡ ಸೇರ್ಪಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದರು.












Click it and Unblock the Notifications