ಮಂಡ್ಯದಲ್ಲಿ ಇನ್ಮುಂದೆ ರಾತ್ರಿ ಎತ್ತಿನಗಾಡಿ ಸಂಚರಿಸುವಂತಿಲ್ಲ
ಮಂಡ್ಯ, ಫೆಬ್ರವರಿ 11:ಎತ್ತಿನಗಾಡಿಗಳಲ್ಲಿ ರಾತ್ರಿ ವೇಳೆ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ರೈತರು ಸಾಗಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ವಾಹನಗಳ ಸಂಚಾರ ಹೆಚ್ಚಿರುವ ಕಾರಣದಿಂದಾಗಿ ಎತ್ತಿನ ಗಾಡಿಗಳು ರಾತ್ರಿ ವೇಳೆ ಸಂಚರಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.
ರಸ್ತೆಯಲ್ಲಿ ಸಂಚರಿಸುವ ವಾಹನಗಳು ಎತ್ತಿನಗಾಡಿಗಳಿಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತಿದ್ದು, ಇದರಿಂದ ಎತ್ತುಗಳು ಸೇರಿದಂತೆ ರೈತರು ಜೀವ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ಇದನ್ನು ಮನಗಂಡ ಪೊಲೀಸರು ರಾತ್ರಿ ವೇಳೆ ಎತ್ತಿನ ಗಾಡಿಗಳ ಸಂಚಾರಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಿದ್ದಾರೆ.
ಅಲ್ಲದೆ ಇನ್ನು ಮುಂದೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಎತ್ತಿನಗಾಡಿಗಳು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಮಾತ್ರ ಓಡಾಟ ನಡೆಸುವಂತೆ ಸೂಚಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಟಿಪ್ಪರ್ ವೊಂದು ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಎತ್ತುಗಳು ಸಾವನ್ನಪ್ಪಿದ್ದವು.

ಹೀಗಾಗಿ ಇದೀಗ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಬ್ಬಿಣ ಯಾರ್ಡ್ ಗೆ ತೆರಳಿ ಎತ್ತಿನ ಗಾಡಿಗಳಿಗೆ ಹಾಗೂ ಎತ್ತುಗಳ ಕೊಂಬಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ನಡೆಸಲಾಗಿದೆ. ಕಬ್ಬನ್ನು ತುಂಬಿದ ಅಥವಾ ಅನ್ಲೋಡ್ ಮಾಡಿದ ಎತ್ತಿನ ಗಾಡಿಗಳು ರಾತ್ರಿ ವೇಳೆ ಸಂಚರಿಸುವುದು ಸುರಕ್ಷಿತವಲ್ಲ.
ರಾತ್ರಿ ವೇಳೆ ದೊಡ್ಡ ವಾಹನಗಳ ಹೆಡ್ ಲೈಟ್ ಗಳ ಬೆಳಕು ಎತ್ತುಗಳ ಕಣ್ಣಿಗೆ ರಾಚುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಹಗಲು ವೇಳೆಯಲ್ಲಿ ಎತ್ತಿನ ಗಾಡಿಗಳ ಮೂಲಕ ಕಾರ್ಖಾನೆಗೆ ಕಬ್ಬನ್ನು ತರಲು ರೈತರು ಮುಂದಾಗಬೇಕೆಂದು ಮನವಿ ಮಾಡಲಾಗಿದೆ.
ಎತ್ತುಗಳ ಕೊಂಬು ಹಾಗೂ ಎತ್ತಿನ ಗಾಡಿಗಳಿಗೆ ರೇಡಿಯಂ ಸ್ಟಿಕ್ಕರ್ ಬಳಸುವ ಮೂಲಕ ಅಪಘಾತಗಳಾಗದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಎತ್ತಿನ ಗಾಡಿಗಳಿಗೆ ಕಡಿಮೆ ತೂಕವನ್ನು ತುಂಬಿ ಸಾಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.












Click it and Unblock the Notifications