ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ಭಾವಚಿತ್ರ ದಹಿಸಿ ಆಕ್ರೋಶ
ಮಂಡ್ಯ: ಪಾಕಿಸ್ತಾನವನ್ನು ಹೊಗಳಿ ಮಾತನಾಡಿದ ಮಾಜಿ ಸಂಸದೆ ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿ, ರಮ್ಯಾ ಭಾವಚಿತ್ರವನ್ನು ದಹಿಸಿದರು.
ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನವನ್ನು ಸಮರ್ಥಿಸಿಕೊಂಡು ಮಾತನಾಡುತ್ತಾ ಅಲ್ಲಿಯ ಜನರೂ ಒಳ್ಳೆಯವರು ಎಂದು ಹೇಳುವ ಮೂಲಕ ಕಾಂಗ್ರೆಸ್ ನವರು ದೇಶ ವಿರೋಧಿಗಳ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ದೂರಿದರು.[ರಮ್ಯಾಗೆ ವಿಶ್ವದ ಮಾಹಿತಿ ಅಪಾರ, ನೊಬಲ್ ಪ್ರಶಸ್ತಿ ಸಿಗಲಿ!!]
ಭಾರತದ ಮುಕುಟವಾಗಿರುವ ಕಾಶ್ಮೀರದ ವಿಷಯದಲ್ಲಿ ದಿನಂಪ್ರತಿ ಒಂದಲ್ಲಾ ಒಂದು ವಿಷಯವಾಗಿ ಕ್ಯಾತೆ ತೆಗೆದು, ಗಡಿ ಕಾಯುವ ನಮ್ಮ ಸೈನಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅಲ್ಲದೆ, ಕಾಶ್ಮೀರದಲ್ಲಿ ಶಾಂತಿ ಕದಡುತ್ತಿದೆ. ಇಂತಹ ಪಾಕಿಸ್ತಾನ ಮತ್ತು ಅಲ್ಲಿಯ ಜನತೆಯನ್ನು ಸಮರ್ಥಿಸಿಕೊಂಡಿರುವ ರಮ್ಯಾ ಅವರ ಇನ್ನೊಂದು ಮುಖ ಬಯಲಾಗಿದೆ ಎಂದು ಟೀಕಿಸಿ, ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಸುಟ್ಟು ಕೋಪ ಹೊರಹಾಕಿದರು.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]
ಪ್ರತಿಭಟನೆಯಲ್ಲಿ ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ವಿವೇಕ್, ರಾಜ್ಯ ಉಪಾಧ್ಯಕ್ಷ ಎಚ್.ಆರ್.ಅಶೋಕ್ ಕುಮಾರ್, ಮಲ್ಲಿಕಾರ್ಜುನ್, ಅರವಿಂದ್, ಮಂಜುನಾಥ್, ಶಿವು, ವಸಂತಕುಮಾರ್, ಮೈ.ವಿ.ರವಿಶಂಕರ್, ತಾಯಮ್ಮ, ಹೊನ್ನಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲೊಂಡಿದ್ದರು. ಪ್ರತಿಭಟನೆ ನಡೆಸಿದ ಕಾರಣ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.