ತಮಿಳುನಾಡಿಗೆ ನೀರು ಹರಿಸದಂತೆ ಬಿಜೆಪಿಯಿಂದ ಕೆಆರ್ ಎಸ್ ಗೆ ಮುತ್ತಿಗೆ
ಶ್ರೀರಂಗಪಟ್ಟಣ, ಜುಲೈ 6: ಜಲಾಶಯ ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಕೆಆರ್ ಎಸ್ ಜಲಾಶಯದ ಮುಖ್ಯ ದ್ವಾರದ ಬಳಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಶ್ರೀಧರ್ ನೇತೃತ್ವದಲ್ಲಿ, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹಾಗೂ ಬಿಜೆಪಿ ಕಾರ್ಯಕರ್ತರು ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದು, ಇದೇ ವೇಳೆ ಅವರನ್ನು ತಡೆದ ಪೊಲೀಸರು ಬಳಿಕ ಬಂಧಿಸಿದ್ದಾರೆ.

ಇದಕ್ಕೂ ಮುನ್ನ ಜಲಾಶಯದ ಮುಖ್ಯ ದ್ವಾರದ ಬಳಿ ಕಾರ್ಯಕರ್ತರು ಜಮಾಯಿಸಿ ಧರಣಿ ನಡೆಸಿದರಲ್ಲದೆ, ಸರಕಾರದ ಕ್ರಮವನ್ನು ಖಂಡಿಸಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮೂರು ವರ್ಷಗಳಿಂದ ಕೆಆರ್ ಎಸ್ ಜಲಾಶಯ ಭರ್ತಿಯಾಗದ ಕಾರಣ ಮಂಡ್ಯ ಸೇರಿದಂತೆ ಹಲವು ರೈತರು ಬೆಳೆ ಬೆಳೆಯಲಾಗದೆ ತೊಂದರೆಗೀಡಾಗಿದ್ದಾರೆ ಎಂದರು.
ರಾಜ್ಯ ಸರಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನೇರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಿ ಕೃಷಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ ಅವರಿಗೆ ನೀರು ನಿಲ್ಲಿಸುವಂತೆ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮನವಿ ಸಲ್ಲಿಸಿದರು. ಆದರೆ ಸರಕಾರದ ಆದೇಶವಿಲ್ಲದೆ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಎಂಜಿನಿಯರ್ ಹೇಳಿದರು.

ಆಗ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ತಾವೇ ಕ್ರಸ್ಟ್ ಗೇಟ್ ಗಳನ್ನು ಮುಚ್ಚಲು ಜಲಾಶಯದ ಒಳಗೆ ನುಗ್ಗಲು ಮುಂದಾದಾಗ ಪೊಲೀಸರು ತೇಜಸ್ವಿನಿ ರಮೇಶ್ ಸೇರಿ ನೆರೆದಿದ್ದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ನೇತೃತ್ವದಲ್ಲಿ ಡಿವೈಎಸ್ಪಿ ವಿಶ್ವನಾಥ್, ಇಬ್ಬರು ಸರ್ಕಲ್ ಇನ್ ಸ್ಪೆಕ್ಟರ್, ಮೂವರು ಸಬ್ ಇನ್ ಸ್ಪೆಕ್ಟರ್, ಎರಡು ಡಿಆರ್ ಎಸ್ ತುಕಡಿ, ಎರಡು ಕೆಎಸ್ ಆರ್ ಪಿ ತುಕಡಿ ಸೇರಿದಂತೆ 130ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications