ಸ್ಪರ್ಧಿಯೇ ಅಲ್ಲವೆಂದ ಕೈ-ತೆನೆಗೆ ಸವಾಲಾದ ಬಿಜೆಪಿ!
ಮಂಡ್ಯ, ಡಿಸೆಂಬರ್ 21: ಗ್ರಾಮ ಪಂಚಾಯತಿ ಚುನಾವಣೆಯನ್ನು ಮಂಡ್ಯ ಜಿಲ್ಲೆಯಲ್ಲಿ ಇದೀಗ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಈ ಮೂರು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇದೇ ಪ್ರಥಮ ಬಾರಿಗೆ ಬಿಜೆಪಿ ಕೂಡ ಪಾರಮ್ಯ ಸಾಧಿಸಲು ಹವಣಿಸುತ್ತಿದೆ.
ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಸ್ಪರ್ಧಿಗಳಾಗಿದ್ದರೆ, ಈ ಬಾರಿ ಬಿಜೆಪಿ ಕೂಡ ಇಲ್ಲಿ ತೀವ್ರ ಸ್ಪರ್ಧೆಯೊಡ್ಡುತ್ತಿದ್ದು, ಆ ಪಕ್ಷದ ಮುಖಂಡರು ಗ್ರಾ.ಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದು ಎದ್ದು ಕಾಣುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಅದರಲ್ಲೂ ಬೇರೆಲ್ಲೂ ಬಿಜೆಪಿ ಅಷ್ಟೊಂದು ಪ್ರಬಲವಾಗಿಲ್ಲದಿದ್ದರೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಸ್ಪರ್ಧೆಯೊಡ್ಡಲು ತಯಾರಾಗಿದೆ.

ತಳಮಟ್ಟದಲ್ಲಿ ಸಂಘಟನೆಗೊಳ್ಳುತ್ತಿರುವ ಬಿಜೆಪಿ
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸ್ಪರ್ಧಿಯೇ ಅಲ್ಲ ಎಂಬಂತಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಇದೀಗ ಬಿಜೆಪಿ ಸ್ಪರ್ಧೆಯೊಡ್ಡಲು ಆರಂಭಿಸಿದೆ. ಕಳೆದ ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಖಾತೆ ತೆರೆದಿದ್ದು, ಈಗ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಇಲ್ಲಿ ಬಿಜೆಪಿಯ ಎಲ್ಲ ಘಟಕಗಳು ಕಾರ್ಯರೂಪಕ್ಕಿಳಿದಿವೆ. ಅಷ್ಟೇ ಅಲ್ಲ ಇದೀಗ ನಡೆಯುತ್ತಿರುವ ಗ್ರಾ.ಪಂ ಚುನಾವಣೆಯಲ್ಲಿಯೂ ಗೆಲುವಿಗಾಗಿ ಶ್ರಮಿಸುತ್ತಿರುವುದು ಗೋಚರಿಸತೊಡಗಿದೆ. ಕಳೆದ ವಿಧಾನಸಭಾ ಚುನಾವಣೆ ನಂತರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೊಳ್ಳುತ್ತಿದ್ದು, ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸದಲ್ಲಿ ಸಚಿವರಾಗಿರುವ ಡಾ.ನಾರಾಯಣಗೌಡ ನಿರತರಾಗಿದ್ದಾರೆ.

ಗ್ರಾ.ಪಂ ಅಧಿಕಾರ ಪಡೆಯಲು ಕಸರತ್ತು
ಗ್ರಾಮ ಪಂಚಾಯತಿ ಚುನಾವಣೆಯನ್ನು ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಡಿ. 27ರಂದು ನಡೆಯಲಿರುವ ಗ್ರಾ.ಪಂ ಚುನಾವಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪೈಕಿ ಕನಿಷ್ಠ 20ರಲ್ಲಿ ಬಿಜೆಪಿ ಬೆಂಬಲಿತರು ಆಡಳಿತದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಹಠಕ್ಕೆ ಬಿದ್ದಿದ್ದು, ಅದಕ್ಕೊಸ್ಕರ ಎಲ್ಲ ರೀತಿಯ ರಾಜಕೀಯ ಕಸರತ್ತುಗಳನ್ನು ಮಾಡುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ.

33 ಬಿಜೆಪಿ ಬೆಂಬಲಿತರು ಅವಿರೋಧ ಆಯ್ಕೆ
ಕಳೆದ ವಿಧಾನಸಭಾ ಉಪ ಚುನಾವಣೆವರೆಗೂ ಸ್ಪರ್ಧಿಯೇ ಅಲ್ಲದ ಬಿಜೆಪಿ ಇದೀಗ ಗ್ರಾಮ ಪಂಚಾಯತಿ ಚುನಾವಣೆಯ ವೇಳೆಗೆ ತಮ್ಮ ಕ್ಷೇತ್ರದಲ್ಲಿ ಸುಮಾರು 33 ಸದಸ್ಯರು ಚುನಾವಣೆಗೆ ಹೋಗದೆ ಬಿಜೆಪಿ ಬೆಂಬಲಿತರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದರೆ ಅಚ್ಚರಿಯಾಗಬಹುದು. ಇದರ ಹಿಂದೆ ನಾರಾಯಣಗೌಡರ ಶ್ರಮ ಇರುವುದನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪೈಪೋಟಿ ನಡುವೆಯೂ ಸುಮಾರು 33 ಬಿಜೆಪಿ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ.

ಅವಿರೋಧವಾಗಿ ಗೆದ್ದವರಿಗೆ ಬಿಜೆಪಿ ಸನ್ಮಾನ
ಕೆ.ಆರ್ ಪೇಟೆ ತಾಲೂಕಿನಲ್ಲಿ ಬಿಜೆಪಿ ಸಾಧನೆ ಶೂನ್ಯ ಎಂದು ಟೀಕೆ-ಟಿಪ್ಪಣಿ ಮಾಡುತ್ತಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರಿಗೆ ಇದೊಂದು ಸವಾಲಿನ ಉತ್ತರ ಎಂದರೂ ತಪ್ಪಾಗುವುದಿಲ್ಲ. ಸದ್ಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ 33 ಗ್ರಾ.ಪಂಗಳಲ್ಲಿ 48 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಇವರಲ್ಲಿ 33 ಮಂದಿ ಬಿಜೆಪಿ ಬೆಂಬಲಿತರಾಗಿದ್ದು ಅವರನ್ನು ಉಸ್ತುವಾರಿ ಸಚಿವ ಡಾ.ನಾರಾಯಣಗೌಡರು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಬಿಜೆಪಿ ಪಕ್ಷದ ಶಲ್ಯವನ್ನು ಹೆಗಲಿಗೆ ಹಾಕಿ ಅಭಿನಂದಿಸಿ ಸನ್ಮಾನಿಸಿದ್ದಾರೆ.
Recommended Video

ನಾರಾಯಣಗೌಡರ ಕೈ ಹಿಡಿತ್ತಾರಾ?
ಜೊತೆಗೆ ಡಿ. 27ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗ್ರಾಮಗಳ ಸಮಗ್ರವಾದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಟೀಕೆ-ಟಿಪ್ಪಣಿಗಳಿಗೆ ತಾಲೂಕಿನ ಪ್ರಜ್ಞಾವಂತ ಮತದಾರ ಬಂಧುಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವ ಮೂಲಕ ತಕ್ಕ ಉತ್ತರವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇವರ ಮಾತನ್ನು ಕ್ಷೇತ್ರದ ಮತದಾರರು ಕೇಳುತ್ತಾರಾ? ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ.












Click it and Unblock the Notifications