ಮಂಡ್ಯ ಹನಿಟ್ರ್ಯಾಪ್: ಯುವತಿಯೊಂದಿಗೆ ಸಿಕ್ಕಿಬಿದ್ದು, ಭಯದಿಂದ ದೂರು ನೀಡಿದ್ರಾ ಚಿನ್ನದ ವ್ಯಾಪಾರಿ?
ಮಂಡ್ಯ, ಸೆಪ್ಟೆಂಬರ್ 8 : ಮಂಡ್ಯದ ಚಿನ್ನದ ವ್ಯಾಪಾರಿಯ ಹನಿಟ್ರ್ಯಾಪ್ ಪ್ರಕರಣ ಇದೀಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಯುವತಿ ಜೊತೆಗಿನ ಆಡಿಯೋ ವೈರಲ್ ಆದ ಬೆನ್ನಲ್ಲೇ ವೀಡಿಯೋ ಸಹ ಹೊರಬಿದ್ದಿರುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಜಗನ್ನಾಥಶೆಟ್ಟಿಯೊಂದಿಗೆ ಓರ್ವ ಮಹಿಳೆ ಇರುತ್ತಾಳೆ. ಬಳಿಕ ಇಬ್ಬರು ಯುವಕರು ಮತ್ತು ಮಹಿಳೆಯೊಬ್ಬಳು ಪ್ರವೇಶಿಸಿ ಜಗನ್ನಾಥಶೆಟ್ಟಿ ಹಾಗೂ ಯುವತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಬಳಿಕ ಇಬ್ಬರ ಮೇಲೂ ಹಲ್ಲೆಯನ್ನೂ ನಡೆಸಿದ್ದಾರೆ. ಕಾಲೇಜೊಂದರ ಪ್ರಿನ್ಸಿಪಾಲ್ ಎಂದು ಹೇಳಿಕೊಂಡ ಜಗನ್ನಾಥಶೆಟ್ಟಿ ಟ್ಯೂಷನ್ ಹೇಳಿಸಿಕೊಳ್ಳಲೆಂದು ಯುವತಿ ವಸತಿ ಗೃಹಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ. ಆದರೂ ಬಿಡದೆ ಮೂವರು ಹಲ್ಲೆ ಮತ್ತು ನಿಂದನೆಯನ್ನು ಮುಂದುವರಿಸುತ್ತಾರೆ. ತಪ್ಪಾಯ್ತು ಬಿಟ್ಟು ಬಿಡಿ ಎಂದು ಜಗನ್ನಾಥಶೆಟ್ಟಿ ಕೈಮುಗಿದು ಬೇಡಿಕೊಂಡರೂ ಈ ತಂಡ ಬಿಡದೆ ಹಲ್ಲೆ ಮುಂದುವರಿಸಿದ್ದು ವೈರಲ್ ಆಗಿರುವ ವೀಡಿಯೋದಲ್ಲಿ ಕಂಡುಬಂದಿದೆ.
ಶನಿವಾರ ರಾತ್ರಿ ಬರುವಂತೆ ಯುವತಿಗೆ ಕರೆ
ಯುವತಿಯೊಬ್ಬಳನ್ನು ತಾನೇ ಲಾಡ್ಜ್ಗೆ ಕರೆದ ಜಗನ್ನಾಥಶೆಟ್ಟಿ ಶನಿವಾರ ನೈಟ್ ಬನ್ನಿ , ಸೋಮವಾರ ಬೆಳಗ್ಗೆ ವಾಪಸ್ ಹೋಗೋಣ, ಶನಿವಾರ, ಭಾನುವಾರ ಲಾಡ್ಜ್ನಲ್ಲೇ ಇರೋಣ. ಶನಿವಾರ ರಾತ್ರಿ 9 ಗಂಟೆ ವೇಳೆಗೆ ಮೈಸೂರಿಗೆ ಬರುತ್ತೇನೆ, ಒಂದೊಳ್ಳೆ ಲಕ್ಸುರಿ ರೂಂ ಮಾಡೋಣ ಎಂದು ಆಹ್ವಾನ ಮಾಡುವಂತಹ ಆಡಿಯೋ ವೈರಲ್ ಆಗಿತ್ತು.

ಪಾಠ ಮಾಡುವುದಕ್ಕೆ ಬುಕ್ ತರುತ್ತೀರಾ ಎಂದು ಯುವತಿ ಕೇಳಿದರೆ, ಯಾವುದು ಬೇಕು, ಭಾರತದ್ದೋ, ನೆರೆ ರಾಷ್ಟ್ರದ್ದೋ , ಭಾರತ-ಶ್ರೀಲಂಕಾ ಸಂಬಂಧಿಸಿದ್ದು ಬೇಕೋ, ಭಾರತ ವಿಭಜನೆ ಬೇಕಾ ಎಲ್ಲಾ ಪಾಠವನ್ನೂ ಮಾಡೋಣ ಬಾ ಎಂದು ಯುವತಿಯನ್ನು ಜಗನ್ನಾಥಶೆಟ್ಟಿ ಲಾಡ್ಜ್ಗೆ ಕರೆದಿರುವುದು ಆಡಿಯೋದಲ್ಲಿದೆ.
ತಪ್ಪು ಮುಚ್ಚಿಕೊಳ್ಳಲು ಶೆಟ್ರು ದೂರು ಕೊಟ್ರಾ ?
ಈ ಎಲ್ಲಾ ವೀಡಿಯೋ ವೈರಲ್ ಆಗುವ ಮುನ್ನವೇ ಜಗನ್ನಾಥಶೆಟ್ಟಿ ಸಲ್ಮಾ ಮತ್ತು ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಗಳೂರಿಗೆ ಹೋಗಲೆಂದು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಜಗನ್ನಾಥ್ ರನ್ನು ಮೈಸೂರಿಗೆ ಡ್ರಾಪ್ ಕೊಡುವುದಾಗಿ ನಾಲ್ವರು ಕಾರಿನಲ್ಲಿ ಕರೆದೊಯ್ದು ನಂತರ ಚಿನ್ನದ ಪರೀಕ್ಷೆಗೆಂದು ನನ್ನನ್ನು ಅಪಹರಿಸಿ ಲಾಡ್ಜ್ಗೆ ಕರೆದೊಯ್ದು ಕೂಡಿಹಾಕಿದ್ದರು.
ಬಳಿಕ ಯುವತಿಯೊಬ್ಬಳನ್ನು ಕೊಠಡಿಗೆ ಕಳುಹಿಸಿ, ಈಕೆಯೊಂದಿಗೆ ಏಕೆ ಬಂದಿದ್ದೀಯಾ ಎಂದು ಹಲ್ಲೆ ನಡೆಸಿದರು. ನಂತರ 50 ಲಕ್ಷರೂ ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಆತಂಕಗೊಂಡ ನಾನು ನನ್ನ ಸ್ನೇಹಿತರಾದ ಶ್ರೀನಿವಾಸಶೆಟ್ಟಿ ಮತ್ತು ಇತರರಿಂದ ಹಣ ತರಿಸಿಕೊಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದರು.

ತಪ್ಪು ಮುಚ್ಚಿಕೊಳ್ಳಲು ದೂರು ನೀಡಿದ್ರಾ?
ತಪ್ಪು ಮುಚ್ಚಿಕೊಳ್ಳಲು ಜಗನ್ನಾಥಶೆಟ್ಟಿ ಹನಿಟ್ರ್ಯಾಪ್ ದೂರು ಕೊಟ್ಟಿದ್ದಾರೆ ಎಂಬ ಸಂಶಯವೂ ಉಂಟಾಗಿದೆ. ಇದರಿಂದಲೇ ಅವರು ಆಗಸ್ಟ್ 19ರಂದು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಜಗನ್ನಾಥಶೆಟ್ಟಿಗೆ ಹಲ್ಲೆ ಮಾಡಿ ಹಣ ಪಡೆದಿದ್ದ ಸಲ್ಮಾ ಮತ್ತು ಗ್ಯಾಂಗ್ ವೀಡಿಯೋ ವೈರಲ್ ಮಾಡಿ ಮತ್ತಷ್ಟು ತೊಂದರೆ ನೀಡುವ ಸಾಧ್ಯತೆಗಳಿವೆ ಎಂಬ ಅನುಮಾನದಿಂದ ಜಗನ್ನಾಥಶೆಟ್ಟಿ ಅವರು ದೂರು ನೀಡಿರಬಹುದು ಎಂದು ಹೇಳಲಾಗಿದೆ. ಈ ಎಲ್ಲಾ ವೀಡಿಯೋ ಮತ್ತು ಆಡಿಯೋಗಳನ್ನು ನೋಡಿ ಕೇಳಿರುವ ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications