ನ. 2ರಂದು ಕೆಆರ್ಎಸ್ಗೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ
ಮಂಡ್ಯ, ಅಕ್ಟೋಬರ್ 31; ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 2ರಂದು ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ. ಅಂದು ಕಬಿನಿ ಜಲಾಶಯಕ್ಕೆ ಸಹ ಬಾಗಿನ ಅರ್ಪಿಸಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾದವರು ಕೆಆರ್ಎಸ್ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಇದೊಂದು ಪವಿತ್ರ ಕಾರ್ಯವೆಂಬ ನಂಬಿಕೆಯು ಇದೆ. ಜಲಾಶಯ ಭರ್ತಿಯಾದರೆ ನಾಡು ಸುಭೀಕ್ಷೆಯಾಗಿರುತ್ತದೆ ನೀರಿನ ಗಲಾಟೆ ಕಡಿಮೆಯಾಗುತ್ತದೆ.
ಜುಲೈ ಅಥವ ಆಗಸ್ಟ್ನಲ್ಲಿ ಭರ್ತಿಯಾಗಬೇಕಿದ್ದ ಕೆಆರ್ಎಸ್ ಜಲಾಶಯ ಈ ಬಾರಿ ಅಕ್ಟೋಬರ್ ಅಂತ್ಯಕ್ಕೆ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ನವೆಂಬರ್ 2ರ ಮಂಗಳವಾರ ಕಬಿನಿ ಮತ್ತು ಕೆಆರ್ಎಸ್ಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ. ಮಂಗಳವಾರ ಬೆಳಗ್ಗೆ10 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮವಿದೆ.
ಬಳಿಕ ಕಬಿನಿಯಿಂದ ಹೆಲಿಕಾಪ್ಟರ್ ಮೂಲಕ ಕೆಆರ್ಎಸ್ಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಮಧ್ಯಾಹ್ನ 1 ಗಂಟೆಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಕೆಆರ್ಎಸ್ಗೆ ಬಾಗಿನ ಅರ್ಪಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಡ್ಯಾಂಗಳ ನೀರಿನ ಮಟ್ಟ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್ಎನ್ಎಂಡಿಸಿ)ದ ಮಾಹಿತಿ ಪ್ರಕಾರ ಕೆಆರ್ಎಸ್ ಜಲಾಶಯದಲ್ಲಿ 38.04 ಮೀಟರ್ (124.80 ಅಡಿ) ನೀರಿನ ಸಂಗ್ರಹವಿದೆ. ಡ್ಯಾಂ ಭರ್ತಿಯಾಗಿದ್ದು, 6626 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ಜಲಾಶಯವು ಭರ್ತಿಯಾಗಿದೆ. ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕಾಗಿಯೇ ಡ್ಯಾಂಗೆ ಸುಣ್ಣ ಬಣ್ಣ ಮಾಡಲಾಗುತ್ತಿದೆ. ಡ್ಯಾಂನಲ್ಲಿ 2283.89 ಅಡಿ ನೀರಿನ ಸಂಗ್ರಹವಿದೆ. ಡ್ಯಾಂ ಭರ್ತಿಯಾಗಿದ್ದು 700 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ವಿಶೇಷ ಪೂಜೆಯನ್ನು ಸಲ್ಲಿಸಿದ್ದರು
ಆಗಸ್ಟ್ನಲ್ಲಿಯೇ ಭರ್ತಿಯಾಗುತ್ತಿದ್ದ ಕೆಆರ್ಎಸ್ ಜಲಾಶಯ ಈ ವರ್ಷ ಅಕ್ಟೋಬರ್ 15 ಕಳೆದರೂ ಭರ್ತಿಯಾಗಿರಲಿಲ್ಲ. ಕೊಡಗು, ಹಾಸನ ವ್ಯಾಪ್ತಿಯಲ್ಲಿ ಮಹಾಮಳೆ ಸುರಿಯದಿರುವುದು ಇದಕ್ಕೆ ಕಾರಣವಾಗಿತ್ತು. ಈ ಬಾರಿ ಡ್ಯಾಂ ಭರ್ತಿ ಆಗುವುದಿಲ್ಲ ಎಂದೇ ಅಂದಾಜಿಸಲಾಗಿತ್ತು. ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ಎಸ್ನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಮಾಡಿದ್ದರು.

ಭರ್ತಿಯಾದ ಜಲಾಶಯ
ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಜಲಾಶಯ ಭರ್ತಿಯಾಗಿದೆ. 11 ವರ್ಷಗಳ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ. ಕಬಿನಿ ಜಲಾಶಯಕ್ಕೆ ಸಹ ಅಂದೇ ಬಾಗಿಲವನ್ನು ಅರ್ಪಣೆ ಮಾಡಲಿದ್ದಾರೆ.

113 ಅಡಿಗೆ ಕುಸಿದಿದ್ದ ನೀರಿನ ಮಟ್ಟ
ಕೆಆರ್ಎಸ್ ಜಲಾಶಯದ ಪೂರ್ಣಮಟ್ಟ 124.80 ಅಡಿ. ಜಲಾಶಯ ಈ ಹಿಂದೆಯೇ ಭರ್ತಿಯಾಗುವ ಅವಕಾಶ ಇದ್ದರೂ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ 122 ಅಡಿಯವರೆಗೂ ಭರ್ತಿಯಾಗಿದ್ದ ಜಲಾಶಯದ ನೀರಿನ ಮಟ್ಟ ಮತ್ತೆ 113 ಅಡಿಗೆ ಕುಸಿದಿತ್ತು. ಕಾವೇರಿ ನದಿ ನೀರು ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅನ್ವಯ ಜೂನ್-ಆಗಸ್ಟ್ ನಡುವಿನ ನೀರಿನ್ನು ಕರ್ನಾಟಕ ತಮಿಳುನಾಡಿಗೆ ಹಂಚಿಕೆ ಮಾಡಿತ್ತು.

ಮಂಡ್ಯದ ಜನರಲ್ಲಿ ಹರ್ಷ
ಕೆಆರ್ಎಸ್ ಡ್ಯಾಂ ನೀರಿನ ಸಂಗ್ರಹ 113 ಅಡಿಗೆ ಕುಸಿದಿದ್ದರಿಂದ ಮಂಡ್ಯ ಜಿಲ್ಲೆಯ ರೈತರು ಆತಂಕಗೊಂಡಿದ್ದರು. ಇತ್ತೀಚೆಗೆ ಕಾವೇರಿ ಕಣಿವೆಯಲ್ಲಿ ಮಳೆ ಬೀಳುತ್ತಿದ್ದು, ಪ್ರತಿನಿತ್ಯ ಎಂಟತ್ತು ಸಾವಿರ ಕ್ಯೂಸೆಕ್ ನೀರು ಹರಿದುಬಂದು ಜಲಾಶಯದ ಭರ್ತಿಯಾಗಿದೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ರೈತರು ಸಂತಸಗೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೃಷಿಗೆ, ಕುಡಿಯುವ ನೀರಿಗೆ ಹಾಗೂ ಮೈಸೂರು, ಬೆಂಗಳೂರು ನಗರದ ಕುಡಿಯುವ ನೀರಿಗೆ ಕೆಆರ್ಎಸ್ ಡ್ಯಾಂ ನೀರು ಆಸರೆಯಾಗಿದೆ.
ಸಾಮಾನ್ಯವಾಗಿ ಜಲಾಶಯವು ಜೂನ್ ಅಥವಾ ಜುಲೈನಲ್ಲಿ 100 ಅಡಿ ತಲುಪುತ್ತಿತ್ತು. ಆಗಸ್ಟ್ ಅಥವ ಸೆಪ್ಟೆಂಬರ್ನಲ್ಲಿ ಬಾಗಿನ ಅರ್ಪಣೆ ಆಗುತ್ತಿತ್ತು. ಈ ಬಾರಿ ಅಕ್ಟೋಬರ್ ಅಂತ್ಯಕ್ಕೆ ಡ್ಯಾಂ ಭರ್ತಿಯಾಗಿದ್ದು, ನವೆಂಬರ್ನಲ್ಲಿ ಬಾಗಿನ ಅರ್ಪಿಸಲಾಗುತ್ತಿದೆ.












Click it and Unblock the Notifications