ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ನೀರವ ಮೌನ; ಅಭಿಮಾನಿ ಕಣ್ಣೀರು
ಮಂಡ್ಯ, ಜುಲೈ 26: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಬಿಎಸ್ವೈ ಹುಟ್ಟೂರಾದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ನೀರವ ಮೌನ ಆವರಿಸಿದೆ.
ಬಿ.ಎಸ್. ಯಡಿಯೂರಪ್ಪನವರು ಹುಟ್ಟು ಮತ್ತು ಬಾಲ್ಯವನ್ನು ಬೂಕನಕೆರೆಯಲ್ಲೇ ಕಳೆದಿದ್ದರು. ಆದರೆ ಉದ್ಯೋಗ ಅರಸಿ ಶಿವಮೊಗ್ಗದ ಶಿಕಾರಿಪುರಕ್ಕೆ ಆಗಮಿಸಿದ ಬಿಎಸ್ವೈ ಅಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿದ್ದು ಈಗ ಇತಿಹಾಸ.
ಇಂದು ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬೂಕನಕೆರೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಭಿಮಾನಿಯೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಬೂಕನಕೆರೆಯ ಹೆಮ್ಮೆಯ ಮಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸುದ್ದಿ ಕೇಳಲು ಜನರು ಟಿವಿ ನೋಡಲು ಕುಳಿತುಕೊಂಡಿದ್ದರು. ಈ ಕಾರಣದಿಂದಾಗಿ ಬೂಕನಕೆರೆಯ ಬೀದಿಗಳು ನಿರ್ಜನವಾಗಿದ್ದವು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿಮಾನಿಯಾದ ಮಧುಸೂದನ್ ಕಣ್ಣೀರು ಹಾಕಿ, "ಯಡಿಯೂರಪ್ಪನವರು ನಮ್ಮೂರಿನ ಮಗ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಇದೀಗ ಕೇಂದ್ರದವರು ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಿರುವುದು ತಪ್ಪು. ಇದರಿಂದ ನಮಗೆ ಕಣ್ಣೀರು ಬರುತ್ತಿದೆ,'' ಎಂದು ಹೇಳಿದ್ದಾರೆ.
"ಗೋಗಾಲಮ್ಮ, ಸ್ವಾತಂತ್ರ್ಯ ಸಿದ್ದಲಿಂಗೇಶ್ವರನ ಮೇಲೆ ಆಣೆ, ಬಿ.ಎಸ್. ಯಡಿಯೂರಪ್ಪ ಇಲ್ಲದೇ ಇದ್ದರೆ ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತದೆ. ಈಗ ಯಡಿಯೂರಪ್ಪ ಅವರ ಮಕ್ಕಳಿಗಾದರು ಅಧಿಕಾರ ನೀಡಬೇಕು,'' ಎಂದು ಯಡಿಯೂರಪ್ಪ ಅಭಿಮಾನಿ ಬೂಕನಕೆರೆ ಮಧುಸೂದನ್ ತಿಳಿಸಿದರು.












Click it and Unblock the Notifications