ಮಂಡ್ಯ ನಗರದಲ್ಲಿ ರಸ್ತೆ ತುಂಬಾ ಬಣ್ಣದ ಚಿತ್ತಾರ ಇರುವುದೇಕೆ?
ಮಂಡ್ಯ , ಜನವರಿ 02: ಹೊಂಡ, ಹಳ್ಳ-ಗುಂಡಿಗಳು, ಚರಂಡಿ, ರಸ್ತೆ ಉಬ್ಬುಗಳಿಂದ ಕೂಡಿರುವ ಮಂಡ್ಯ ಪಟ್ಟಣದ ರಸ್ತೆಗಳ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಅತ್ತಕಡೆ ಗಮನಹರಿಸದ ಕಾರಣದಿಂದಾಗಿ ಕಲಾವಿದರು ತಮ್ಮ ಕುಂಚದ ಮೂಲಕ ಆಕರ್ಷಣೀಯ ಚಿತ್ರಗಳನ್ನು ಬಿಡಿಸಿ ಒಂದೆಡೆ ರಸ್ತೆಗಳಲ್ಲಿರುವ ಹೊಂಡ-ಗುಂಡಿಯಿರುವ ಬಗ್ಗೆ ಸಂಚಾರ ಮಾಡುವವರಿಗೆ ಎಚ್ಚರಿಕೆ ನೀಡುವುದರೊಂದಿಗೆ ಸಂಬಂಧಿಸಿದ ಅಧಿಕಾರಿಗಳ ಗಮನಸೆಳೆಯುವ ಯತ್ನವನ್ನು ಮಾಡಿದ್ದಾರೆ.
ಈಗಾಗಲೇ ಕುಲಗೆಟ್ಟಿರುವ ರಸ್ತೆಗಳ ಅಭಿವೃದ್ಧಿಯನ್ನೇ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಮರೆತಿದ್ದು ಅವರ ಕಣ್ತೆರೆಸುವ ಕೆಲಸವನ್ನು ಮಾಡಿ ಗಮನ ಸೆಳೆದಿದ್ದಾರೆ.
ಮಂಡ್ಯ ನಗರದ ಜಯಚಾಮರಾಜೇಂದ್ರ ವೃತ್ತ, ಎಸ್.ಡಿ.ಜಯರಾಂ ವೃತ್ತ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ ಸೇರಿದಂತೆ ಹಲವೆಡೆ ರಸ್ತೆಗಳ ಅದ್ವಾನ ಸ್ಥಿತಿಗೆ ಕನ್ನಡಿ ಹಿಡಿಯುವಂತೆ ಚಿತ್ರಗಳನ್ನು ರಚಿಸಿದ್ದು, ಈ ಒಂದೊಂದು ಚಿತ್ರವೂ ರಸ್ತೆಗಳ ದುರವಸ್ಥೆಯನ್ನು ಸಾರಿ ಹೇಳುತ್ತಿವೆ.

ಚಿತ್ರಕಲಾವಿದರು ನಗರದಲ್ಲಿ ಗುಂಡಿಗಳಿಂದ ಕೂಡಿರುವ ರಸ್ತೆಗಳ ಮುಂಭಾಗ ಚಿತ್ರ ಬಿಡಿಸುವ ಜೊತೆಗೆ ಗುಂಡಿ ಮುಚ್ಚಿ, ಜೀವ ಉಳಿಸಿ, ರಸ್ತೆ ಉಬ್ಬುಗಳು ಇರುವ ಕಡೆ ನಿಧಾನವಾಗಿ ಚಲಿಸಿ ಎಂಬ ಬರಹಗಳು ವಾಹನ ಸವಾರರನ್ನು ಎಚ್ಚರಿಸುತ್ತಿವೆ. ಸಣ್ಣ ಗುಂಡಿಗಳಿದ್ದರೆ ಅವುಗಳಿಗೂ ಪ್ರೀತಿ ಮತ್ತು ಅಪಾಯದ ಚಿಹ್ನೆಗಳ ಬಿಡಿಸಿ ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಎಲ್ಲರನ್ನು ಸೆಳೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಈ ಕುರಿತಂತೆ ಪ್ರಕಾಶ್ ಆರ್ಟ್ಸ್ನ ಕಲಾವಿದ ಪ್ರಕಾಶ್ ಮಾತನಾಡಿ, ರಸ್ತೆಗಳು ಹಾಳಾಗಿ ಹಲವು ವರ್ಷಗಳಾಗಿವೆ. ಅವುಗಳನ್ನು ದುರಸ್ತಿ ಮಾಡುವ ಕಾರ್ಯ ಇದುವರೆಗೂ ನಡೆದಿಲ್ಲ ಎಂದು ದೂರಿದರು.












Click it and Unblock the Notifications