ನಾನು ರೈತರ ವಿರುದ್ಧ ಟ್ವೀಟ್ ಮಾಡೇ ಇಲ್ಲ : ರಮ್ಯಾ ಕಿಡಿ
ಮಂಡ್ಯ, ಸೆಪ್ಟೆಂಬರ್ 09 : "ನಾನು ರೈತರು ನಡೆಸುತ್ತಿರುವ ಹೋರಾಟ ಮತ್ತು ಕರ್ನಾಟಕ ಬಂದ್ ಅಗತ್ಯತೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿಯೇ ಇಲ್ಲ. ನನ್ನ ಎಲ್ಲ ಟ್ವೀಟ್ ಗಳು ಪಬ್ಲಿಕ್ ಡೊಮೇನ್ ನಲ್ಲಿ ಇವೆ. ಯಾರು ಬೇಕಾದರೂ ನೋಡಿಕೊಳ್ಳಬಹುದು" ಎಂದು ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ರಮ್ಯಾ ಅವರು, 'ರೈತರು ನಡೆಸುತ್ತಿರುವ ಹೋರಾಟದ ಅಗತ್ಯವಿದೆಯೆ ಎಂದು ಟ್ವೀಟ್ ಮಾಡಿದ್ದಾರೆ' ಎಂದು ಕೆಲ ಕನ್ನಡ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗಿದ್ದಕ್ಕೆ ಪ್ರತಿಯಾಗಿ, ಒನ್ಇಂಡಿಯಾ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಾನು ಆ ರೀತಿ ಟ್ವೀಟ್ ಮಾಡಿಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ವಿವಾದದ ಸುಳಿಯಲ್ಲಿ ಸಿಲುಕುತ್ತಿರುವ ರಮ್ಯಾ ಅವರನ್ನು, ಕಾವೇರಿಗಾಗಿ ನಡೆಯುತ್ತಿರುವ ಹೋರಾಟದ ಸಂದರ್ಭದಲ್ಲಿ ಮತ್ತೊಂದು ವಿವಾದ ತಾನಾಗಿಯೇ ಅರಸಿಕೊಂಡು ಬಂದಿದೆ. [ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]
ಕನ್ನಡಿಗರ ಹೋರಾಟವನ್ನು ಪ್ರಶ್ನಿಸಿ ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ ಎಂಬ ಸುದ್ದಿ ಸುದ್ದಿ ವಾಹಿನಿ ಮೂಲಕ ಹಬ್ಬುತ್ತಿದ್ದಂತೆ, ಹಲವಾರು ಟೀಕಾಸ್ತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಮೇಲೆ ಎಸೆಯಲಾಯಿತು. ಈ ಕುರಿತು ಪ್ರಶ್ನಿಸಿದಾಗ ಅವರು ಮೇಲಿನಂತೆ ಸ್ಪಷ್ಟೀಕರಣ ನೀಡಿದರು.
ಪಾಕಿಸ್ತಾನದ ಬಗ್ಗೆ ಕಾಮೆಂಟ್ ಮಾಡಿದ ನಂತರ ಅನಗತ್ಯವಾಗಿ ವಿವಾದಕ್ಕೀಡಾಗುತ್ತಿದ್ದೇನೆ. ಮಂಡ್ಯದ ರೈತರ ಕಷ್ಟವನ್ನು ಅರಿಯಲು ಅಲ್ಲಿ ಭೇಟಿ ನೀಡಿದೆ. ಪರಿಸ್ಥಿತಿ ಅಧ್ಯಯನ ಮಾಡಿದ ನಂತರ ನಾಲೆಗಳಿಗೆ ನೀರು ಬಿಡಲು ನಾನೇ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೆ. ಹೀಗಿರುವಾಗ ನಾನೇಕೆ ಹೋರಾಟದ ವಿರುದ್ಧ ಮಾತಾಡಲಿ ಎಂದು ಅವರು ಪ್ರಶ್ನಿಸಿದರು. [ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]