ಅಪ್ಪು ನೆನಪಿಗಾಗಿ ಆಂಬುಲೆನ್ಸ್ ದೇಣಿಗೆ ನೀಡಿದ ನಟ ಪ್ರಕಾಶ್ ರಾಜ್
ಮೈಸೂರು, ಆಗಸ್ಟ್ 6: ದಿವಂಗತ ನಟ ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ 'ಅಪ್ಪು ಎಕ್ಸ್ಪ್ರೆಸ್' ಆಂಬುಲೆನ್ಸ್ ಅನ್ನು ಮಿಷನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, " ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ ಅವರ ಅಭಿಮಾನಿ ಸಂಘಗಳು, ಅವರ ಪೋಸ್ಟರ್ಗಳು, ಅವರ ಹೆಸರಿನ ರಸ್ತೆಗಳು ಅವರ ಹಿರಿಮೆ ಸಾರುತ್ತಿದೆ. ಇಂತಹ ಅಪ್ಪು ನೆನಪಿಗೆ ಸಮಾಜಕ್ಕೆ ಏನಾದರೂ ಸೇವಾ ಕಾರ್ಯ ಮಾಡಬೇಕೆಂಬ ಉದ್ದೇಶದಿಂದ ಆಸ್ಪತ್ರೆಗೆ ಆಂಬುಲೆನ್ಸ್ ನೀಡುತ್ತಿದ್ದೇನೆ ಎಂದರು.
ಲಾಲ್ಬಾಗ್ನಲ್ಲಿ ರಾಜ್ ಕುಮಾರ್ 'ಅಪ್ಪು'ಗೆಯ ಅದ್ಭುತ ಪುಷ್ಪ ದೃಶ್ಯ ವೈಭವ
ಪುನೀತ್ಗೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂಬುದು ನನ್ನ ನಂಬಿಕೆಯಾಗಿದೆ. ಈ ರೀತಿ ಬೇರೆಯವರಿಗೆ ಆಗಬಾರದು ಎಂದು ಭಾವಿಸಿ ತುರ್ತು ವಾಹನ ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ ನೀಡುತ್ತಿದ್ದೇವೆ. ಪುನೀತ್ರಾಜ್ಕುಮಾರ್ ಸಾಕಷ್ಟು ಮಂದಿಗೆ ದಾನ ಮಾಡಿದ್ದಾರೆ. ಅವರ ಈ ಗುಣವನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರಕಾಶ್ರಾಜ್ ಪೌಂಡೇಷನ್ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ಕೀಲಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಮೊದಲ ಹೆಜ್ಜೆಯಾಗಿ ಮೈಸೂರಿನ ಸಿಎಐ ವರ್ಡ್ಸ್ವರ್ತ್ ಮೆಮೋರಿಯಲ್ ಆಸ್ಪತ್ರೆಗೆ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದೇವೆ. ರಾಜ್ಯ ಎಲ್ಲಾ ಜಿಲ್ಲೆಗಳಿಗೂ ಈ ರೀತಿ ತುರ್ತು ಸೇವೆ ವಾಹನವನ್ನು ನೀಡುಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಮಿಷನ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಸಹಕರಿಸಲಾಗುವುದು. ತನ್ಮೂಲಕ ಪುನೀತ್ರಾಜ್ ಹಾಗೂ ಅವರ ದಾನ ಧರ್ಮದ ಒಳ್ಳೆಯ ಗುಣಗಳು ರಾಜ್ಯಾದ್ಯಂತ ಸ್ಮರಣೀಯವಾಗಿ ಉಳಿಯುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ನನ್ನ ಚಿಕ್ಕಮ್ಮ ಇದೇ ಮಿಷನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ತಾಯಿ, ಸಹೋದರಿಯೂ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ನನ್ನ ತಾಯಿ ಒಂದು ಅನಾಥಾಶ್ರಮದಲ್ಲಿ ಆಶ್ರಯ ಪಡೆಯಬೇಕಾಯಿತು. ಆ ಹಂತದಲ್ಲಿ ಉಳ್ಳವರು ಆಶ್ರಮಕ್ಕೆ ದಾನ ನೀಡಿದ್ದರಿಂದಲೇ ನಮ್ಮ ಕುಟುಂಬ ಉಳಿಯಿತು. ಈಗ ನಮ್ಮಲ್ಲಿರುವುದನ್ನು ಕೆಲವೊಂದು ಒಳ್ಳೆಯ ಕಾರ್ಯಕ್ಕೆ ಬಳಸುವುದರಿಂದ ಇನ್ನಷ್ಟು ಮಂದಿಗೆ ಸಹಾಯವಾಗುತ್ತದೆ ಎಂದರು.
ನಿರ್ದೇಶಕ ವಿನ್ಸೆಂಟ್ ಪಾಲಣ್ಣ, ಚಲನಚಿತ್ರ ನಿರ್ದೇಶಕ ಸಂತೋಷ್ ಆನಂದ್, ರಾಮ್ ರೂಪನ್, ರೆವರೆಂಡ್ ಸುಜಾತಮ್ಮ ಹಾಗೂ ಇತರರು ಇದ್ದರು.