ಬ್ರಹ್ಮಚಾರಿಗಳಿಗಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ... ನೋಂದಣಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್!
ಮಂಡ್ಯ, ಆಗಸ್ಟ್ 27 : ಮದುವೆಯಾಗಿಲ್ಲವೇ? ಏಕೆ, ವಯಸ್ಸೆಷ್ಟು ಎಂದು ಸ್ನೇಹಿತರು, ಸಂಬಂಧಿಕರು ಕೇಳುವುದರಿಂದ ಬೇಸತ್ತ ಬ್ರಹ್ಮಚಾರಿ ಪಡೆಯೊಂದು ಪಾದಯಾತ್ರೆ ಯೋಜನೆಯನ್ನು ರೂಪಿಸಿ ಆ ಮೂಲಕ ತಮ್ಮಲ್ಲಿರುವ ಕೀಳರಿಮೆ ತೊಡೆದುಹಾಕಲು ನಿರ್ಧರಿಸಿದೆ.
ಧಾರ್ಮಿಕವಾಗಿ ಬ್ರಹ್ಮಚಾರಿ ಎಂಬುದಕ್ಕೆ ಹಲವಾರು ಜಾನಪದ ಕಥೆಗಳನ್ನು ಹೊಂದಿರುವ ಶ್ರೀ ಮಹದೇಶ್ವರನನ್ನೇ ಬ್ರಾಂಡ್ ಅಂಬಾಸಿಡರ್ ಮಾಡಿಕೊಂಡಿರುವ ಬ್ರಹ್ಮಚಾರಿಗಳ ತಂಡ, ಬರುವ ಅಕ್ಟೋಬರ್ ತಿಂಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಕೀಳರಿಮೆ ಬಿಟ್ಟು ಎಂಜಾಯ್ ಮಾಡಲು ಯೋಜನೆ ರೂಪಿಸಿದೆ.
77 ಮಲೆ ಒಡೆಯನ ಕಾಣಲು ಕಾಡಲ್ಲಿ 7.5 ಕಿಮೀ ಮೆಟ್ಟಿಲು ನಿರ್ಮಾಣ; ಡಿಸೆಂಬರ್ಗೆ ಪೂರ್ಣ
" ನಾನಾ ಕಾರಣಗಳಿಂದಾಗಿ ಕೆಲವು ಯುವಕರು ಮದುವಯಾಗದೆ ಇನ್ನೂ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಸ್ನೇಹಿತರು, ಬಂಧುಗಳು ಇನ್ನೂ ಮದುವೆಯಾಗಿಲ್ಲವೆ ಎಂದು ಕೇಳುವುದರ ಮೂಲಕ ಕಿರಿಕಿರಿ ಉಂಟುಮಾಡುತ್ತಲೇ ಇರುತ್ತಾರೆ. ಇದರಿಂದ ಎಷ್ಟೋ ಮನಸ್ಸು ಕೆಡಿಸಿಕೊಂಡು ದಿನವಿಡೀ ಯಾವುದೇ ಲವಲವಿಕೆಯಿಲ್ಲದೆ ಬೇಸರದಿಂದ ಕುಳಿತುಬಿಡುತ್ತಿದ್ದಾರೆ. ನಾವೂ ಲೈಫ್ನಲ್ಲಿ ಎಂಜಾಯ್ ಮಾಡಬೇಕು, ಎಲ್ಲರಂತೆ ಇರಬೇಕು. ಅವರಿವರು ಆಡುವ ಮಾತಿಗೆ ಬೆಲೆ ಕೊಡದೆ ಚೇತೋಹಾರಿಯಾಗಿ ಕಾಲ ಕಳೆಯುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ" ಎಂದು ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದ ಎಂ. ಶಿವಪ್ರಸಾದ್ ಹೇಳುತ್ತಾರೆ.
30 ವರ್ಷ ದಾಟಿದವರಿಗೆ ಪಾದಯಾತ್ರೆ
ಪಾದಯಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ಈ ತಂಡ, 30 ವರ್ಷ ತುಂಬಿದ ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ಕಡ್ಡಾಯವಾಗಿ 30 ತುಂಬಿರಬೇಕು ಎಂಬ ಷರತ್ತಿನೊಂದಿಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪಾದಯಾತ್ರೆ ವಿಚಾರವನ್ನು ಕಂಡ ಹಲವಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ 122 ಕಿ.ಮೀ ಪಾದಯಾತ್ರೆ ಮಾಡುವುದಾಗಿ ಪೋಸ್ಟರ್ನಲ್ಲಿ ಹೇಳಲಾಗಿದೆ.
ಹುಬ್ಬಳ್ಳಿ ಗಣೇಶೋತ್ಸವಕ್ಕೆ ಪೊಲೀಸ್ ಕಮೀಷನರೇಟ್ ಹೈ ಅಲರ್ಟ್
ನೋಂದಣಿಗೆ ಭಾರಿ ಡಿಮ್ಯಾಂಡ್
ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಹೆಸರಿನಲ್ಲಿ ಈ ಪಾದಯಾತ್ರೆ ಆಯೋಜಿಸಲಾಗಿದೆ. ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಆಯೋಜಕರಿಗೆ ನಿರಂತರ ಕರೆಗಳು ಬರಲಾರಂಭಿಸಿವೆ. ಅವರನ್ನು ನಿಭಾಯಿಸುವುದು ಸವಾಲಾಗಿದೆ. ಆದರೂ ಯಾರನ್ನು ನಿರಾಶೆ ಮಾಡಬಾರದು ಎಂದು ಆಯೋಜಕರು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಗರ, ಪಟ್ಟಣಗಳ ಮೂಲಕವೇ ಪಾದಯಾತ್ರೆ
ಪಾದಯಾತ್ರೆ ಮಳವಳ್ಳಿ-ಕೊಳ್ಳೆಗಾಲ-ಹನೂರು ಮಾರ್ಗವಾಗಿ ಪ್ರಯಾಣ ಸಾಗಲಿದೆ. ಸತ್ತೇಗಾಲ ಸಮೀಪ ಚಿಕ್ಕಲ್ಲೂರಿಗೆ ಹೋಗುವ ಮಾರ್ಗದಲ್ಲಿ ತಿರುವು ಪಡೆದುಕೊಂಡರೆ ಮಲೆಮಹದೇಶ್ವರ ಬೆಟ್ಟಕ್ಕೆ 13ಕಿ.ಮೀ. ಅಂತರ ಕಡಿಮೆಯಾಗುತ್ತದೆ. ಆದರೆ, ಪಾದಯಾತ್ರೆಯನ್ನು ಎಂಜಾಯ್ ಮಾಡಿಕೊಂಡು ಹೋಗುವ ಉದ್ದೇಶದಿಂದ ಶಾರ್ಟ್ಕಟ್ ಮಾರ್ಗವನ್ನು ಬಿಟ್ಟು ಪ್ರಮುಖ ನಗರ, ಪಟ್ಟಣಗಳ ಮೂಲಕ ಮುಖ್ಯರಸ್ತೆಯಲ್ಲೇ ಹೋಗಲು ತಂಡ ನಿರ್ಧರಿಸಿದೆ.
ಮಾರ್ಗಮಧ್ಯೆ ಸಿಗುವ ನಗರ/ಪಟ್ಟಣಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುವುದು. ಮದುವೆಯಾಗಿಲ್ಲವೆಂದು ನಾವೇಕೆ ಕೀಳರಿಮೆ ಬೆಳೆಸಿಕೊಳ್ಳಬೇಕು? ಸ್ವತಂತ್ರ ಜೀವನ ನಡೆಸೋಣ. ಸಿಂಗಲ್ ಆಗಿದ್ದುಕೊಂಡೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಹೆಚ್ಚಿನ ಅವಕಾಶ ಸಿಕ್ಕಿದೆ ಎಂದು ತಿಳಿದುಕೊಳ್ಳುತ್ತೇವೆ ಎನ್ನುತ್ತಾರೆ ತಂಡದ ಸಂಚಾಲಕ ಎಂ.ಶಿವಪ್ರಸಾದ್ ಕಾಗೆಪುರ ಹೆಮ್ಮೆಯಿಂದಲೇ ಹೇಳುತ್ತಾರೆ.
ಪಾದಯಾತ್ರೆಗೆ ವಿಶೇಷ ಷರತ್ತು
ಪಾದಯಾತ್ರೆಯಲ್ಲಿ ಭಾಗವಹಿಸುವವರಿಗಾಗಿಯೇ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕಡ್ಡಾಯವಾಗಿ 30 ವರ್ಷ(ಆರ್ಧಾ ಕಾರ್ಡ್ನಲ್ಲಿ ನಮೂದಿಸಿರುವಂತೆ) ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ. ನಿಶ್ಚಿತಾರ್ಥ ಆಗಿದ್ದವರಿಗೂ ನಿಷೇಧ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಪಾದಯಾತ್ರೆ ವೇಳೆ ದಾನಿಗಳ ನೆರವಿನೊಂದಿಗೆ ಯಾತ್ರಿಗಳಿಗೆ ಉಚಿತವಾಗಿ ಊಟ, ತಿಂಡಿ, ಕಾಫಿ, ಉಪಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಯಾತ್ರಿಗಳು ಗಮನ ಸೆಳೆಯಲು ಪ್ರತಿಯೊಬ್ಬರಿಗೂ ಒಂದು ಕ್ಯಾಪ್, ಟೀಶರ್ಟ್, ಬ್ರಾಹ್ಮಚಾರಿಗಳ ಬಾವುಟವನ್ನು ಕೊಡಲಾಗುತ್ತಿದೆ. ಇವುಗಳಿಗೆ ಮಾತ್ರ ಯಾತ್ರಾರ್ಥಿಗಳು ಹಣ ಪಾವತಿಸಬೇಕಾಗಿರುತ್ತದೆ. ಇನ್ನು ಪ್ರತೀ 5 ಕಿ.ಮೀ.ಗೊಂದು ಚಹಾ ವಿರಾಮ , ಪ್ರತೀ 10 ಕಿ.ಮೀ. ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಪಾದಯಾತ್ರೆ ಯೋಜನೆ ಕುರಿತಂತೆ ಮಾಹಿತಿ ನೀಡಲು ವೆಬ್ಸೈಟ್ ತೆರೆಯುವ ಉದ್ದೇಶವಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗುವುದು. ಖರ್ಚು ವೆಚ್ಚದ ವಿವರಗಳನ್ನು ವೆಬ್ಸೈಟ್ನಲ್ಲೇ ಪ್ರಕಟಿಸಲಾಗುವುದು. ಪಾದಯಾತ್ರೆ ನಿರ್ವಹಣೆಗಾಗಿಯೇ ಒಂದು ತಂಡ ಸಹ ಕಾರ್ಯನಿರ್ವಹಿಸಲಿದೆ ಎಂದು ಎಂ. ಶಿವಪ್ರಸಾದ್ ಕಾಗೆಪುರ ತಿಳಿಸಿದ್ದಾರೆ.