ಮಂಡ್ಯ ನಗರದೊಳಗೆ ಮುಳ್ಳು ಹಂದಿಯ ಹಿಂಡು ಪತ್ತೆ: ಆತಂಕದಲ್ಲಿ ಜನತೆ
ಮಂಡ್ಯ, ಅಕ್ಟೋಬರ್ 7 : ನಗರದ ಜನನಿಬಿಡ ಪ್ರದೇಶಗಳಲ್ಲಿ ಮುಳ್ಳು ಹಂದಿಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಸೃಷ್ಠಿಯಾಗುತ್ತಿದೆ. ನಗರದ ತಾವರಗೆರೆ 25ನೇ ವಾರ್ಡಿನಲ್ಲಿ ಮುಳ್ಳು ಹಂದಿ ಬಾತ್ರೂಂನಲ್ಲಿರುವುದು ಕಂಡುಬಂತು. ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಳ್ಳುಹಂದಿಯನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
ತಾವರಗೆರೆಯ ಸಿದ್ದಯ್ಯ ಎಂಬುವರ ಮನೆಯ ಬಾತ್ರೂಂನಲ್ಲಿ ಮುಳ್ಳುಹಂದಿ ಕಾಣಿಸಿಕೊಂಡಿತ್ತು. ಇದನ್ನು ನೋಡಿದ ತಕ್ಷಣ ಮನೆಯವರು ಬಾತ್ರೂಂ ಬಾಗಿಲು ಮುಚ್ಚಿ ವಾರ್ಡ್ನ ನಗರಸಭಾ ಸದಸ್ಯ ನಾಗೇಶ್ ಅವರಿಗೆ ಮಾಹಿತಿ ನೀಡಿದರು. ನಾಗೇಶ್ ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ನಗರ ಅರಣ್ಯಾಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಮುಳ್ಳುಹಂದಿಯನ್ನು ಹಿಡಿದು ಪ್ಲಾಸ್ಟಿಕ್ ಡ್ರಂನಲ್ಲಿಟ್ಟುಕೊಂಡು ದ್ವಿಚಕ್ರ ವಾಹನದ ಸಹಾಯದೊಂದಿಗೆ ಕೊಂಡೊಯ್ದರು.
ಪ್ಲಾಸ್ಟಿಕ್ ಡ್ರಂಗೆ ಮುಳ್ಳುಹಂದಿಯನ್ನು ಹಾಕಿದ್ದರೂ ಸಹ ಅದು ತನ್ನ ಹಲ್ಲಿನಿಂದ ಡ್ರಂ ಕೊರೆಯಲು ಯತ್ನಿಸಿತ್ತು. ತಕ್ಷಣ ದ್ವಿಚಕ್ರ ವಾಹನದಲ್ಲಿ ಅರಣ್ಯಧಿಕಾರಿ ಕಚೇರಿಗೆ ಕೊಂಡೊಯ್ದು ಹೋಗಿ ಅಲ್ಲಿನ ವಾಹನದಲ್ಲಿ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡುಹೋಗಿ ಬಿಡಲಾಯಿತು.

ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಅಶೋಕನಗರ ಬಡಾವಣೆಯ ವಿವೇಕಾನಂದ ಜೋಡಿ ರಸ್ತೆಯಲ್ಲೂ ಮತ್ತೊಂದು ಮುಳ್ಳು ಹಂದಿ ಕಾಣಿಸಿಕೊಂಡಿತ್ತು. ಸ್ಥಳೀಯರು ಅದನ್ನು ಕಂಡು ಅಟ್ಟಿಸಿಕೊಂಡು ಹೋದರಾದರೂ, ಚರಂಡಿಯೊಳಗೆ ತೆವಳುತ್ತಾ ಓಡಿಹೋಗಿತ್ತು.
''ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಮೊದಲೆಲ್ಲಾ ಆನೆ, ಚಿರತೆಗಳ ಹಾವಳಿ ಹೆಚ್ಚಿತ್ತು. ಇದೀಗ ಮುಳ್ಳು ಹಂದಿಗಳು ಬರುತ್ತಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇದರಿಂದ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗುತ್ತಿದೆ'' ಎಂದು ನಗರಸಭಾ ಸದಸ್ಯ ನಾಗೇಶ್ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೋಡಿಮಠ ಸ್ವಾಮೀಜಿ, "ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತವೆ, ಭೂಮಿಯಲ್ಲಿರುವ ವಿಷ ಜಂತುಗಳು ಬಂದು ಜನರಿಗೆ ಕಾಟ ಕೊಡುತ್ತವೆ. ಜನ ಮನೆಯಿಂದ ಹೊರಗೆ ಬರುವಾಗ ಬಡಿಗೆ ಹಿಡಿದುಕೊಂಡು ಓಡಾಡುವ ಸ್ಥಿತಿ ಬರುತ್ತದೆ" ಎಂದು ಶ್ರೀಗಳು ಭವಿಷ್ಯ ಹೇಳಿದ್ದರು.












Click it and Unblock the Notifications