ಕೆ.ಆರ್.ಪೇಟೆ ಬಳಿ ಹೇಮಾವತಿ ನದಿಯಲ್ಲಿ ಮುಳುಗಿ ಅಪ್ಪಮಗ ಸಾವು
ಮಂಡ್ಯ, ಅಕ್ಟೋಬರ್ 21: ಹೇಮಾವತಿ ನದಿಯಲ್ಲಿ ಜಾನುವಾರುಗಳ ಮೈತೊಳೆಯುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ತಂದೆ ಮಗ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗೋಂದಿಹಳ್ಳಿ ಬಳಿ ನಡೆದಿದೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಗೋಂದಿಹಳ್ಳಿ ಗ್ರಾಮದ ಶಿವನಂಜಪ್ಪ ಅವರ ಪುತ್ರ ಕುಮಾರ್(42) ಮತ್ತು ತೇಜಸ್(4) ಮೃತಪಟ್ಟ ತಂದೆಮಗ.

ತಮ್ಮ ಜಮೀನಿನ ಬಳಿ ಹರಿಯುವ ಹೇಮಾವತಿ ನದಿಯಲ್ಲಿ ಜಾನುವಾರುಗಳ ಮೈತೊಳೆಯಲು ಕುಮಾರ್ ತಮ್ಮ ನಾಲ್ಕು ವರ್ಷದ ಮಗುವಿನೊಂದಿಗೆ ನದಿಗೆ ತೆರಳಿದ್ದು, ಮಗುವನ್ನು ನದಿ ದಡದಲ್ಲಿ ಮಗುವನ್ನು ನಿಲ್ಲಿಸಿ ದನವನ್ನು ನದಿಗಿಳಿಸಿ ತೊಳೆಯಲು ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಹೇಮಾವತಿ ನದಿ ನೀರಿನ ಸೆಳೆತಕ್ಕೆ ಸಿಲುಕಿದ ಕುಮಾರ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದೇ ವೇಳೆ ದಡದಲ್ಲಿ ನಿಂತಿದ್ದ ಮಗು ತೇಜಸ್ ತನ್ನ ತಂದೆಯನ್ನು ಹುಡುಕಿಕೊಂಡು ನೀರಿಗೆ ಇಳಿದಿದ್ದು ಆತನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓಕುಳಿ ಸ್ನಾನದ ವೇಳೆಗೆ ಮುಳುಗಿ ಸಾವು: ದೀಪಾವಳಿ ಅಂಗವಾಗಿ ನಡೆಯುತ್ತಿದ್ದ ಓಕುಳಿ ಸ್ನಾನ ಮಾಡಲು ಹೋದ ಭಕ್ತನೊಬ್ಬ ಕಲ್ಯಾಣಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದ ಶ್ರೀ ಶಂಭುಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ನಡೆದಿದೆ.
ಸಾಸಲುಕೊಪ್ಪಲು ಗ್ರಾಮದ ಅಣ್ಣಯ್ಯಪ್ಪ(45) ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿ. ಈತ ಸಾಸಲು ಕ್ಷೇತ್ರದಲ್ಲಿ ದೀಪಾವಳಿ ಅಂಗವಾಗಿ ನಡೆಯುತ್ತಿದ್ದ ಸಗಣಿಯ ಓಕಳಿಯಾಟಕ್ಕೆ ತೆರಳಿದ್ದು, ನಡೆಯುತ್ತಿತ್ತು. ಓಕುಳಿ ಮುಗಿದ ನಂತರ ಸ್ನಾನ ಮಾಡಲು ಅಣ್ಣಯ್ಯಪ್ಪ ಸೇರಿದಂತೆ ನೂರಾರು ಭಕ್ತರು ಸುಮಾರು ಕಲ್ಯಾಣಿಗೆ ಇಳಿದಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣಿಗೆ ಇಳಿದಿದ್ದ ಎಲ್ಲ ಭಕ್ತರು ನೀರಿನಿಂದ ದಡಕ್ಕೆ ಬಂದರೂ ಅಣ್ಣಯ್ಯಪ್ಪ ನೀರಿನಿಂದ ಮೇಲೆ ಬಾರದೆ ಮುಳುಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆ ದಾಳಿಗೆ ಮೇಕೆ ಬಲಿ : ಭಾರತೀಪುರ ಗ್ರಾಮದ ಬಳಿ ಚಿರತೆಯೊಂದು ದಾಳಿ ಮಾಡಿ ಮೇಕೆಯೊಂದನ್ನು ಕೊಂದು ಭಾಗಶಃ ತಿಂದು ಪರಾರಿಯಾಗಿರುವ ಘಟನೆ ನಡೆದಿದೆ.
ಭಾರತೀಪುರ ಗ್ರಾಮದ ಲೇಟ್ ರಾಜೇಗೌಡ ಅವರ ಪತ್ನಿ ಮಹದೇವಮ್ಮ ಅವರಿಗೆ ಸೇರಿದ ಮೇಕೆಯನ್ನು ಮನೆಯ ಹಿತ್ತಲ ಬಳಿ ಕಟ್ಟಿ ಹಾಕಿದ್ದ ಸಂದರ್ಭದಲ್ಲಿ ದಾಳಿ ನಡೆಸಿರುವ ಚಿರತೆಯು ಕತ್ತಿನ ಭಾಗವನ್ನು ಕಚ್ಚಿ ಸಾಯಿಸಿ ನಂತರ ಸ್ವಲ್ಪ ಭಾಗ ತಿಂದು ಪರಾರಿಯಾಗಿದೆ.
ಈ ಹಿಂದೆ ಸಮೀಪದ ಮಾರೇನಹಳ್ಳಿ ಗ್ರಾಮ ನಿವಾಸಿ ದೇವರಾಜು ಅವರ ಮನೆಯಲ್ಲಿ ಎಮ್ಮೆಯನ್ನು ಸಹ ತಿಂದು ಹಾಕಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ವನಪಾಲಕ ನಾರಾಯಣ ಅವರು ಮಹಜರು ನಡೆಸಿ ಚಿರತೆಯನ್ನು ಬೋನಿಟ್ಟು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.
ಗ್ರಾಮದಲ್ಲಿ ಚಿರತೆಯ ಹಾವಳಿಯಿಂದ ಜನ ಬೆಚ್ಚಿಬಿದ್ದಿದ್ದು, ಹೊರಗೆ ಹೋಗಲು ಭಯಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕೊಟ್ಟಿಗೆಗೆ ನುಗ್ಗಿ ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ತಿಂದು ಬಿಡಬಹುದೇನೋ ಎಂಬ ಗ್ರಾಮಸ್ಥರನ್ನು ಕಾಡುತ್ತಿದೆ.












Click it and Unblock the Notifications