ಮಂಡ್ಯ: ಜೀವನದಲ್ಲಿ ಜಿಗುಪ್ಸೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಿಎಡ್ ವಿದ್ಯಾರ್ಥಿನಿ
ಮಂಡ್ಯ, ಡಿಸೆಂಬರ್ 15: ಜೀವನದಲ್ಲಿ ಜಿಗುಪ್ಸೆಗೊಂಡ ವಿದ್ಯಾರ್ಥಿನಿ ವಸತಿನಿಲಯದ ಕೊಠಡಿಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.14 ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ಲೀಲಾವತಿ ಬಡಾವಣೆಯಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿ ಧನಂಜಯ ಎಂಬುವರ ಪುತ್ರಿ ಆದರ್ಶಿಣಿ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಈಕೆ ಮದ್ದೂರು ಪಟ್ಟಣದ 7ನೇ ಕ್ರಾಸ್ನಲ್ಲಿರುವ ಹಿಂದುಳಿದ ವರ್ಗದ ವಿದ್ಯಾರ್ಥಿನಿ ನಿಲಯದಲ್ಲಿದ್ದುಕೊಂಡು ಸಮೀಪದ ಸೋಮನಹಳ್ಳಿಯಲ್ಲಿ ಅಂತಿಮ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಳು.

ಈಕೆ ಎಂದಿನಂತೆ ಬುಧವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಕಂಪ್ಯೂಟರ್ ಕೊಠಡಿಗೆ ಹೋದವಳು ರಾತ್ರಿ ಊಟಕ್ಕೆ ಬರಲಿಲ್ಲ. ಈ ವೇಳೆ ವಸತಿ ನಿಲಯದ ವಾರ್ಡನ್ ಕೊಠಡಿಗೆ ಹೋಗಿ ನೋಡಿದ್ದಾರೆ. ಕೊಠಡಿಯ ಬಾಗಿಲು ಹಾಕಲಾಗಿತ್ತಲ್ಲದೆ, ಒಳಗಿನಿಂದ ಬಾಗಿಲಿನ ಚಿಲಕವನ್ನು ಕೂಡ ಹಾಕಲಾಗಿತ್ತು. ಹೀಗಾಗಿ ಅನುಮಾನಗೊಂಡು ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದು ನೋಡಿದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
"ಕೊಠಡಿಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರು ಅಲ್ಲ. ಅಮ್ಮನ ಆಸೆಯಂತೆ ನಾನು ಆಗಲಿಲ್ಲ.ನನಗೆ ಬಂದ ಕಷ್ಟ ಬೇರೆ ಯಾರಿಗೂ ಬರುವುದು ಬೇಡ. ದೇವರು ನನಗೆ ಮೋಸ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರು ಕೂಡ ನಾನು ಸತ್ತೆ ಎಂದು ಕಣ್ಣೀರು ಹಾಕಬಾರದು" ಎಂದು ಬರೆದಿಟ್ಟಿದ್ದಾರೆ.
ಅಂತಿಮ ಬಿ.ಎಡ್. ಪರೀಕ್ಷೆ ನಡೆಯುತ್ತಿದ್ದು ಪರಿಕ್ಷೆಯಲ್ಲಿ ಸರಿಯಾಗಿ ಬರೆಯದ ಕಾರಣದಿಂದ ಅತ್ಮಹತ್ಯೆ ಮಾಡಿಕೊಂಡಿರುಬಹುದು ಎಂದು ಶಂಕಿಸಲಾಗಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಶವವನ್ನು ಕುಟುಂಬ ವರ್ಗದವರಿಗೆ ನೀಡಲಾಗಿದೆ. ಈ ಸಂಬಂಧ ಮದ್ದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications