ಬ್ರೇಕ್ ವೈಫಲ್ಯದಿಂದ ಅಡ್ಡಾದಿಡ್ಡಿ ಲಾರಿ ಚಲಿಸಿ ಮಂಡ್ಯದಲ್ಲಿ ನಾಲ್ವರು ಸಾವು
ಮಂಡ್ಯ, ಅಕ್ಟೋಬರ್ 2: ಮಂಗಳವಾರದಂದು ಇಲ್ಲಿನ ಗುತ್ತಲು ರಸ್ತೆಯಲ್ಲಿ ಸರಕು ತುಂಬಿದ ಲಾರಿಯೊಂದು ಪಾದಚಾರಿಗಳ ಮೇಲೆ ಚಲಿಸಿದ ಪರಿಣಾಮವಾಗಿ ನಾಲ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಲಾರಿಯ ಬ್ರೇಕ್ ವೈಫಲ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳ ಮೂಲಕ ತಿಳಿಯುತ್ತಿದೆ.
ಯಾವಾಗ ಸರಕು ತುಂಬಿದ ಲಾರಿ ಬ್ರೇಕ್ ವಿಫಲವಾಗಿ ರಸ್ತೆ ಬದಿ ನಿಂತಿದ್ದವರ ಮೇಲೆ ಚಲಿಸಿ, ನಾಲ್ವರ ಸಾವಿಗೆ ಕಾರಣವಾಯಿತೋ ಸಿಟ್ಟಿಗೆದ್ದ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಅಂದ ಹಾಗೆ ಸರಕು ತುಂಬಿದ್ದ ಈ ಲಾರಿಯು ಮಂಡ್ಯದಿಂದ ಭಾರತಿನಗರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಗುತ್ತಲು ರಸ್ತೆಯ ಬೆನಕ ಸಮುದಾಯ ಭವನದ ಬಳಿ ಈ ಘಟನೆ ಸಂಭವಿಸಿದ್ದು, ಬ್ರೇಕ್ ವಿಫಲವಾದ ಮೇಲೆ ಸುಮಾರು ಮುನ್ನೂರು ಮೀಟರ್ ತನಕ ಲಾರಿ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ಇನ್ನು ಇದೇ ಅವಘಡದಲ್ಲಿ ಗಾಯಗೊಂಡಿರುವ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ದೂರು ದಾಖಲು ಮಾಡಿಕೊಂಡು, ಘಟನೆ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications