ನಿಧಿಗಾಗಿ ಮಂತ್ರವಾದಿಯಿಂದ ಮಾರ್ಕ್, ಒದೆ ಕೊಟ್ಟ ಗ್ರಾಮಸ್ಥರಿಂದ ಶಾಕ್
ನಾಗಮಂಗಲ (ಮಂಡ್ಯ ಜಿಲ್ಲೆ), ಜುಲೈ 18: ಭೂಮಿಯಲ್ಲಿ ನಿಧಿಯಿದೆ ಎಂದು ಪೂಜೆ ಮಾಡಿ, ಆ ನಿಧಿ ತೆಗೆಯಲು ಹೊರಟವರು ಪೊಲೀಸರ ಅತಿಥಿಯಾದ ಘಟನೆ ತಾಲೂಕಿನ ಕಂಚನಹಳ್ಳಿಯಲ್ಲಿ ನಡೆದಿದೆ.
ಕಂಚನಹಳ್ಳಿಯ ಜಮೀನು ಮಾಲೀಕ ಚಿಕ್ಕೇಗೌಡ, ಬೆಂಗಳೂರಿನ ಬಾಬು, ಮಹೇಶ, ಗಂಗಹನುಮಯ್ಯ ಬಂಧಿತರು. ನಿಮ್ಮ ಜಮೀನಿನಲ್ಲಿ ನಿಧಿಯಿದೆ ಎಂದು ಜಮೀನು ಮಾಲೀಕ ಚಿಕ್ಕೇಗೌಡರಿಗೆ ಯಾರೋ ಹೇಳಿದ್ದರು. ಇದನ್ನು ನಂಬಿದ ಅವರು ಪಂಡಿತರನ್ನು ಕರೆಸಿ ಭೂಮಿಗೆ ಮಡಿಕೆ- ಕುಡಿಕೆಗಳಿಂದ ಪೂಜೆ ಮಾಡಿ, ಕಾರ್ಮಿಕರ ಮೂಲಕ ಭೂಮಿ ಅಗೆದು ನಿಧಿಯನ್ನು ಹೊರ ತೆಗೆಯಲು ಮುಂದಾಗಿದ್ದಾರೆ.
ಜಮೀನಿನಲ್ಲಿ ಪೂಜೆ ಮಾಡಿ, ನಿಧಿ ಅಗೆಯುತ್ತಿರುವ ವಿಚಾರ ಗ್ರಾಮದಲ್ಲಿ ಹರಡಿದೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಅವರನ್ನು ಹಿಡಿದು ಧರ್ಮದೇಟು ನೀಡಿ, ಬೆಳ್ಳೂರು ಪೋಲಿಸರಿಗೆ ಒಪ್ಪಿಸಿದ್ದಾರೆ.

ನಿಧಿ ತೆಗೆಯಲು ನೆಲಮಂಗಲದಿಂದ ಒಬ್ಬ ಮಂತ್ರವಾದಿಯನ್ನು ಕರೆಸಿ, ಆತ ಪೂಜೆ ಮಾಡಿ ಹಾಕಿದ ಗುರುತಿನ ಜಾಗದಲ್ಲಿ ಭೂಮಿ ಅಗೆಯುವ ಕಾರ್ಯವನ್ನು ಕಾರ್ಮಿಕರು ಮಾಡಿದ್ದರು. ಹಾರೆ- ಗುದ್ದಲಿಗಳಿಂದ ಭೂಮಿಯನ್ನು ಅಗೆಯುತ್ತಿರುವುದನ್ನು ನೋಡಿದಾಗ ಗ್ರಾಮಸ್ಥರಿಗೆ ಅನುಮಾನ ಬಂದು, ಸ್ಥಳಕ್ಕೆ ಬಂದವರೇ ನಾಲ್ವರನ್ನು ಹಿಡಿದು ತದುಕಿ ಬಳಿಕ ಪೊಲೀಸರಿಗೆ ನೀಡಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ಸದ್ಯಕ್ಕೆ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.











Click it and Unblock the Notifications