ಮದ್ದೂರು ಬಳಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಸಾವು
ಮಂಡ್ಯ, ಸೆಪ್ಟೆಂಬರ್ 13: ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದ ಬಾಲಕನನ್ನು ರಕ್ಷಿಸಲು ಹೋದ ಯುವಕ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಆತಗೂರು ಗ್ರಾಮದಲ್ಲಿ ನಡೆದಿದೆ.
ಆತಗೂರು ಗ್ರಾಮದ ನಿವಾಸಿ ನಾಗರಾಜು ಎಂಬುವರ ಪುತ್ರ ಚಂದನ್ ಕುಮಾರ್ (21) ಹಾಗೂ ಕುಣಿಗಲ್ ತಾಲೂಕಿನ ನಿಡಸಾಲೆ ಹೋಬಳಿಯ ಉಜ್ಜನಿ ಗ್ರಾಮದ ರಾಜೇಶ್ ಪುತ್ರ ಕಿರಣ್ (13) ಮೃತಪಟ್ಟ ದುರ್ದೈವಿಗಳು.
ಚಂದನ್ ಕುಮಾರ್ ಸಂಬಂಧಿಯಾಗಿದ್ದ ಕಿರಣ್, ಚಂದನ್ ಕುಮಾರ್ ಮನೆಯಲ್ಲಿದ್ದುಕೊಂಡು 7ನೇ ತರಗತಿಯಲ್ಲಿ ಓದುತ್ತಿದ್ದನು.

ಚಂದನ್ ಕುಮಾರ್ ಹಾಗೂ ಕಿರಣ್ ಸೆ.12 ಸಂಜೆ 5.30ರ ಸುಮಾರಿಗೆ ಆತಗೂರು ಗ್ರಾಮದ ಹೊರವಲಯದಲ್ಲಿರುವ ತಂದೆಯ ಜಮೀನಿನಲ್ಲಿ ಬೆಳೆಯಲಾಗಿದ್ದ ಬದನೆಕಾಯಿ ಗಿಡಗಳಿಗೆ ನೀರು ಹಾಯಿಸಲು ತೆರಳಿದ್ದರು.
ಈ ವೇಳೆ ಜಮೀನಿನಲ್ಲಿದ್ದ ಸುಮಾರು 10 ಅಡಿ ಆಳದ ಕೃಷಿ ಹೊಂಡದಿಂದ ನೀರನ್ನು ತುಂಬಿಸಿ ಕೊಂಡೊಯ್ದು ನೀರು ಹಾಕುತ್ತಿದ್ದರು. ಕಿರಣ್ ನೀರು ತುಂಬಿಸುವ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದು, ಇದನ್ನು ಕಂಡ ಚಂದನ್ ಕುಮಾರ್ ಕಿರಣ್ ನನ್ನು ರಕ್ಷಿಸುವ ಸಲುವಾಗಿ ಮುಂದಾಗಿದ್ದು, ಅದರಂತೆ ಕೃಷಿ ಹೊಂಡಕ್ಕೆ ಧುಮುಕಿದ್ದು ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನು ನೋಡಿದ ಅಲ್ಲಿದ್ದ ಬಾಲಕರು ರಕ್ಷಿಸುವಂತೆ ಕೂಗಿದ್ದು, ತಕ್ಷಣ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಘಟನಾ ಸ್ಥಳಕ್ಕೆ ಬಂದಿದ್ದು, ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲೇ ಕಿರಣ್ ಮತ್ತು ಚಂದನ್ ಕುಮಾರ್ ಮೃತಪಟ್ಟಿದ್ದರು.
ಸ್ಥಳಕ್ಕೆ ಬಂದ ಕೆಸ್ತೂರು ಠಾಣೆ ಪೊಲೀಸರು ಮಧ್ಯರಾತ್ರಿ ಬಳಿಕ ಇಬ್ಬರ ಶವವನ್ನು ಹೊರತೆಗೆದು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ವಾರಸುದಾರರ ವಶಕ್ಕೆ ಶವವನ್ನು ನೀಡಲಾಗಿದೆ. ಈ ಸಂಬಂಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications