ಬಾಲಕಿಗೆ ಹೊಸ ಫೋನ್ ಕೊಡಿಸಿದ ಕಾಂಗ್ರೆಸ್; ನೆಟ್ಟಿಗರ ಆಕ್ರೋಶ
ಮಡಿಕೇರಿ, ಮೇ 24; ಕೊರೊನಾ ಸೋಂಕಿಗೆ ಬಲಿಯಾದ ಅಮ್ಮನ ಶಾಶ್ವತ ನೆನಪಿಗಾಗಿ ಆಕೆ ಬಳಸುತಿದ್ದ ಮೊಬೈಲ್ ಅನ್ನು ನನಗೆ ದಯವಿಟ್ಟು ವಾಪಾಸ್ ಸಿಗುವಂತೆ ಮಾಡಿ ಎಂದು ಕೊಡಗಿನ ಬಾಲಕಿಯೊಬ್ಬಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದಳು. ಈ ಬಾಲಕಿಯ ಮನವಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಅಗಿದ್ದು ಲಕ್ಷಾಂತರ ಜನರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕಿ ಮನವಿಗೆ ಸ್ಪಂದಿಸಿದ್ದ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಭಾನುವಾರ ಹೊಸ ಮೊಬೈಲ್ ಫೋನ್ ಕೊಡಿಸಿತ್ತು. ಬಾಲಕಿಗೆ ಮೊಬೈಲ್ ನೀಡುತ್ತಿರುವ ಚಿತ್ರಗಳು ಕೂಡ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಆದರೆ ಈ ಹೊಸ ಮೊಬೈಲ್ ಕೊಡಿಸಿರುವ ವಿಚಾರ ನೆಟ್ಟಿಗರ ವ್ಯಾಪಕ ಟೀಕೆಗೂ ಗುರಿಯಾಗಿದೆ.
ಬಾಲಕಿಯು ಹಂಬಲಿಸಿದ್ದು ತನ್ನ ಅಮ್ಮನ ನೆನಪು ಫೋಟೋಗಳನ್ನು ಹೊಂದಿದ್ದ ಮೊಬೈಲ್ಗಾಗಿ ಮಾತ್ರ. ಹೊಸ ಮೊಬೈಲ್ನೊಂದಿಗೆ ಬಾಲಕಿಗೆ ಯಾವುದೇ ಭಾವನಾತ್ಮಕ ಸಂಬಂಧ ಇಲ್ಲ, ಉಂಟಾಗುವುದೂ ಸಾಧ್ಯವಿಲ್ಲ ಎಂದು ಜನರು ಕಮೆಂಟ್ಗಳನ್ನು ಮಾಡಿದ್ದಾರೆ.

ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆ ತಾಯಿಗೆ ಇತ್ತೀಚೆಗೆ ಕೊರೊನಾ ಸೋಂಕು ದೃಢವಾಗಿತ್ತು. ಅವಳೂ ಮತ್ತು ತಂದೆ ಮನೆಯಲ್ಲೇ ಚಿಕಿತ್ಸೆ ಪಡೆದರು. ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16ರಂದು ಚಿಕಿತ್ಸೆ ಫಲಿಸದೆ ಬಾಲಕಿ ತಾಯಿ ಮೃತಪಟ್ಟರು. ಆ ವೇಳೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ.
ಈ ಕುರಿತಾಗಿ ಬಾಲಕಿ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಒಂದು ಪತ್ರ ಬರೆದಿದ್ದಳು. "ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್ನಲ್ಲಿರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ" ಎಂದು ಮನವಿ ಮಾಡಿದ್ದಳು.
ಈ ವಿಚಾರ ಸುದ್ದಿಯಾಗಿ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಬಾಲಕಿಗೆ ಹೊಸ ಫೋನ್ ಅನ್ನು ಕೊಡಿಸಿದೆ. ಆದರೆ ಬಾಲಕಿಗೆ ಅಮ್ಮನ ಹಳೆಯ ಮೊಬೈಲ್ನಲ್ಲಿ ನೆನಪಿದ್ದದ್ದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಕೊರೊನಾ ಈ ಸಮಯದಲ್ಲಿ ಮಾಸ್ಕ್ ಹಾಕದೆಯೇ ಆರೇಳು ಜನರು ಒಟ್ಟಾಗಿ ಬಾಲಕಿಯನ್ನು ಭೇಟಿ ಮಾಡಿರುವುದರ ಬಗ್ಗೆಯೂ ಪ್ರಶ್ನಿಸಲಾಗಿದೆ.
ಇನ್ನು ಲಾಕ್ಡೌನ್ ಸಮಯದಲ್ಲಿ ಯಾವುದೇ ಅಂಗಡಿಗಳು ಓಪನ್ ಇಲ್ಲದಿದ್ದರೂ ಇವರಿಗೆ ಹೊಸ ಮೊಬೈಲ್ ಕೊಳ್ಳಲು ಸಾಧ್ಯವಾಗಿದ್ದು ಹೇಗೆ? ಎಂದು ಹಲವು ಜನರು ಕೇಳಿದ್ದಾರೆ. ಬಾಲಕಿಗೆ ಸಾಂತ್ವನ ನೀಡುವದಕ್ಕಿಂತ ಹೆಚ್ಚಾಗಿ ಪ್ರಚಾರದ ಆಶಯವಿತ್ತೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.












Click it and Unblock the Notifications