ತಲಕಾವೇರಿಯಲ್ಲಿ ನಿವಾರಣೆಯಾಗದ ದೋಷ, ಬತ್ತಿ ಹೋಗುತ್ತಾ ಕಾವೇರಿ?
ಮಡಿಕೇರಿ, ಅಕ್ಟೋಬರ್ 24: ಸದಾ ಸಮೃದ್ಧವಾಗಿ ಮಳೆ, ಬೆಳೆಯಾಗಿ ಶಾಂತಿಯ ನೆಲೆವೀಡಾಗಿದ್ದ ಕೊಡಗಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ತಲೆದೋರುತ್ತಿದೆ. ಇದಕ್ಕೆ ತಲಕಾವೇರಿಯಲ್ಲಿ ದೋಷ ನಿವಾರಣೆ ಮಾಡದಿರುವುದೇ ಕಾರಣ ಎನ್ನಲಾಗಿದೆ.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗುತ್ತಿಲ್ಲ. ಕಾವೇರಿ ತುಂಬಿ ಹರಿಯುತ್ತಿಲ್ಲ. ಜಾತಿ ವೈಷಮ್ಯ ಗಲಾಟೆ ಸೇರಿದಂತೆ ಒಂದಲ್ಲ ಒಂದು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಇದೆಲ್ಲವೂ ಜಿಲ್ಲೆಯನ್ನು ಕಾಡುತ್ತಿದೆ.
ಏಕೆ ಹೀಗೆ ಆಗುತ್ತಿದೆ ಎಂಬುದನ್ನು ನೋಡುವುದಾದರೆ ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರ ಕೈಗೊಳ್ಳುವಾಗ ಕ್ಷೇತ್ರದಲ್ಲಿ ಋಷಿ ಮುನಿಗಳು ಪ್ರತಿಷ್ಠಾಪಿಸಿದ್ದು ಎನ್ನಲಾದ ಶಿವಲಿಂಗವನ್ನು ಮಣ್ಣಿನಡಿ ಹೂತು ಹಾಕಲಾಗಿದೆಯಂತೆ. ಇದರಿಂದ ದೋಷ ಕಾಣಿಸಿಕೊಂಡಿದ್ದು ಈ ಬಗ್ಗೆ ಹಿಂದೆಯೇ ತಾಂಬೂಲ ಪ್ರಶ್ನೆಯಲ್ಲಿ ಕಾಣಿಸಿಕೊಂಡಿತ್ತು. ಅಲ್ಲದೆ ಮೂರು ವರ್ಷಗಳ ಒಳಗೆ ಪರಿಹಾರವನ್ನು ಮಾಡಬೇಕು ಎಂದು ಸೂಚಿಸಲಾಗಿತ್ತು.

ದೋಷ ಪರಿಹಾರಕ್ಕಿರುವುದು ಆರೇ ತಿಂಗಳು
ಆದರೆ ಆಗಲೇ ಎರಡೂವರೆ ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳೊಳಗಾಗಿ ಪರಿಹಾರ ಮಾಡದಿದ್ದರೆ ತೊಂದರೆಗಳಾಗುವ ಸಾಧ್ಯತೆಯಿದೆ. ಹೀಗಾಗಿ ಪರಿಹಾರ ಮಾಡುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಹತ್ತು ಹಲವು ಸಲಹೆಗಳನ್ನು ನೀಡಿದ್ದು, ಎಲ್ಲರ ಸಹಮತದೊಂದಿಗೆ ಪರಿಹಾರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಅನುದಾನ ಕೊರತೆ
ಸಭೆಯಲ್ಲಿ ಪ್ರಮುಖರಾದ ಎಂ.ಬಿ. ದೇವಯ್ಯ ಅವರು ಮಾತನಾಡಿ, "ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲಿ ಅನುದಾನ ಇದ್ದ ಸಂದರ್ಭ ಪರಿಹಾರ ಮಾಡುವ ಬಗ್ಗೆ ವಾಗ್ದಾನ ಕೊಟ್ಟಿದ್ದೆವು. ನಂತರದಲ್ಲಿ ಸಮಿತಿ ವಿಸರ್ಜನೆಯಾದ ಬಳಿಕ ಪರಿಹಾರ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ," ಎಂದಿದ್ದಾರೆ.

ಕಾವೇರಿ ನದಿ ಬತ್ತಿ ಹೋಗುತ್ತಾ?
ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಕ್ಕೆ ಪರಿಹಾರ ಮಾಡದಿದ್ದರೆ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುವುದಿಲ್ಲ. ಕಾವೇರಿ ನದಿ ಬತ್ತಿ ಹೋಗುವ ಸಾಧ್ಯತೆ ಇರುವ ಬಗ್ಗೆ ತಿಳಿದು ಬಂದಿದೆ. ಹಾಗಾಗಿ ತುರ್ತಾಗಿ ಪರಿಹಾರ ಕಾರ್ಯ ಆಗಬೇಕಾಗಿದೆ ಎಂದಿದ್ದಾರೆ.

ಪರಿಹಾರಕ್ಕೆ ಕೈ ಜೋಡಿಸಿ
ಸಭೆಯಲ್ಲಿದ್ದ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಇದಕ್ಕೆ ಪರಿಹಾರ ಕಾರ್ಯದಲ್ಲಿ ಕಾವೇರಿ ನದಿ ಹರಿಯುವ ಪ್ರದೇಶದ ಜನತೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದ್ದಾರೆ. ಅಗಸ್ತ್ಯೇಶ್ವರನಿಗೆ ಸಮರ್ಪಕವಾಗಿ ಪೂಜೆ ಆಗುತ್ತಿಲ್ಲ. ಇದರಿಂದ ಅಗಸ್ತ್ಯೇಶ್ವರ ಮುನಿಸಿಕೊಂಡಿದ್ದು, ಕಾವೇರಿ ದುಃಖಿತಳಾಗಿದ್ದಾಳೆ. ಪರಿಹಾರ ಆಗಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.












Click it and Unblock the Notifications