ಪ್ರಿಯಕರನೊಂದಿಗೆ ಸೇರಿ ಪತಿಗೆ ಸೈನೈಡ್ ಮಿಶ್ರಿತ ತೀರ್ಥ ಕುಡಿಸಿ ಕೊಲೆಗೈದ ಪತ್ನಿ
ಮಡಿಕೇರಿ, ಆಗಸ್ಟ್ 8: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ದೇವರ ತೀರ್ಥಕ್ಕೆ ಸೈನೈಡ್ ಬೆರೆಸಿ ಪತಿಗೆ ಕುಡಿಸಿ ಕೊಲೆಗೈದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದ್ದು, ಪೊಲೀಸರ ತನಿಖೆಯಿಂದ ಕೃತ್ಯ ಬಹಿರಂಗಗೊಂಡಿದೆ.
ಸೋಮವಾರಪೇಟೆ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ತಣ್ಣೀರುಹಳ್ಳ ನಿವಾಸಿ ಸುರೇಶ್ ತನ್ನ ಪತ್ನಿಯಿಂದಲೇ ಕೊಲೆಗೀಡಾದ ವ್ಯಕ್ತಿ. ಈತ ಕೆಲ ದಿನಗಳ ಹಿಂದೆ ಕೇರಳದ ಕಾಸರಗೋಡಿನಿಂದ ಕೊರಿಯರ್ ನಲ್ಲಿ ಬಂದಿದ್ದ ತೀರ್ಥವನ್ನು ಸೇವಿಸಿ ಸಾವನ್ನಪ್ಪಿದ್ದಾನೆ ಎಂಬ ವದಂತಿ ಹರಡಿತ್ತು.
ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಪ್ರಕರಣ: ಪತಿ ಬಂಧನ
ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದರಿಂದ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಉನ್ನತಾಧಿಕಾರಿ ಡಾ. ಸುಮನ್ ಡಿ.ಪಿ., ಮಾರ್ಗದರ್ಶನದಲ್ಲಿ ತಂಡ ತನಿಖೆ ಆರಂಭಿಸಿತ್ತು.
ಪ್ರಕರಣದ ಜಾಡು ಹಿಡಿದು ಹೋದ ತಂಡಕ್ಕೆ ಈ ಪ್ರಕರಣದ ಹಿಂದೆ ಅನೈತಿಕ ಸಂಬಂಧದ ವಾಸನೆ ಬಂದಿತ್ತು. ಮೃತಪಟ್ಟ ಸುರೇಶನ ಪತ್ನಿ ರಾಧಾಳ ಮೇಲೆಯೇ ಅನುಮಾನ ಶುರುವಾಗಿತ್ತು. ಏಕೆಂದರೆ ಸುರೇಶ್ ಕೆಲಸ ಮಾಡುತ್ತಿದ್ದ ಹೋಟೆಲ್ ವಿಳಾಸಕ್ಕೆ ತೀರ್ಥದ ಬಾಟಲಿ ಬಂದಿತ್ತು. ಅಲ್ಲದೆ ಅದರ ಮೇಲೆ ಮನೆಯ ಯಜಮಾನ ಮಾತ್ರ ಕುಡಿಯಬೇಕು ಎಂದು ಬರೆಯಲಾಗಿತ್ತು. ಮೋಸದ ಬಗ್ಗೆ ಅರಿಯದ ಸುರೇಶ್ ಅದನ್ನು ಕುಡಿದಿದ್ದನು.
ತೀರ್ಥ ಸೇವಿಸಿದ ಕೆಲವೇ ಹೊತ್ತಿನಲ್ಲಿ ಆತನ ಮನೆಗೆ ಸುರೇಶನ ಪತ್ನಿ ರಾಧಾಳೊಂದಿಗೆ ತೋಟದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು ಮನೆಗೆ ಬಂದಿದ್ದಳು. ಈ ವೇಳೆ ಆಕೆಯೊಂದಿಗೆ ಸುರೇಶ್, ದೇವಸ್ಥಾನದಿಂದ ತೀರ್ಥ ಬಂದಿದೆ. ಕುಡಿದರೆ ಬಾಯೆಲ್ಲ ಒಗರು ಆಗುತ್ತಿದೆ ಎಂದಿದ್ದಾನೆ. ಅವನ ಮಾತಿಗೆ ಆಕೆ ತೀರ್ಥದಲ್ಲಿ ಗೋಮೂತ್ರ ಹೆಚ್ಚಿರಬಹುದು. ಹೆಚ್ಚಿಗೆ ಕುಡಿಯಬೇಡಿ ಎಂದು ಕಿವಿಮಾತು ಹೇಳಿ ಹೋಗಿದಾಳೆ. ಆಕೆ ಹೋದ ಕೆಲವೇ ಸಮಯದಲ್ಲಿ ಮಲಗಿದ ಸುರೇಶ್ ಮತ್ತೆ ಮೇಲೇಳಲಿಲ್ಲ.
ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ 16 ವರ್ಷದ ಯುವತಿಯ ಕತ್ತು ಕೊಯ್ದು ಹತ್ಯೆ
ಗಂಡ ವಿಷದ ತೀರ್ಥ ಸೇವಿಸುತ್ತಿದ್ದಂತೆಯೇ ಹೆಂಡತಿ ಸ್ನಾನಕ್ಕೆ ಹೋಗಿದ್ದಳು. ಆಕೆ ಸ್ನಾನ ಮುಗಿಸಿ ಬರುವ ವೇಳೆಗೆ ಸುರೇಶ್ ಸಾವನ್ನಪ್ಪಿದ್ದನು. ಬಳಿಕ ಆಕೆ ತನಗೆ ಏನೂ ಗೊತ್ತಿಲ್ಲದಂತೆ ಪಾರ್ಸಲ್ ಬಂದ ತೀರ್ಥ ಸೇವಿಸಿ ಗಂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಆಕೆಯ ಮೇಲೆಯೇ ಸಂಶಯ ಬಂದಿದ್ದರಿಂದ ಮತ್ತು ಹಲವು ಸಾಕ್ಷಿಗಳು ಸಿಕ್ಕಿದ್ದರಿಂದ ಅವಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾಳೆ.
ಮೃತ ಸುರೇಶನ ಪತ್ನಿ ರಾಧಾಳಿಗೂ ಸೋಮವಾರಪೇಟೆ ಬಸವೇಶ್ವರ ರಸ್ತೆ ನಿವಾಸಿ, ಮೆಡಿಕಲ್ ರೆಪ್ರೆಸೆಂಟೀಟಿವ್ ಆಗಿರುವ ಬಿ.ಡಿ. ಮುರಳಿ ಎಂಬಾತನಿಗೆ ಅನೈತಿಕ ಸಂಬಂಧವಿತ್ತು. ಆತನಿಗೆ ಸೇರಿದ ತೋಟದಲ್ಲಿ ಕೆಲಸ ಮಾಡಲು ರಾಧಾ ಹೋಗುತ್ತಿದ್ದಳು. ಹೀಗಾಗಿ ಇವರಿಬ್ಬರಲ್ಲಿ ಅನೈತಿಕ ಸಂಬಂಧ ಬೆಳೆದಿದೆ. ಎರಡು ತಿಂಗಳ ಹಿಂದೆ ಮುರಳಿ ರಾಧಾಳ ಮನೆಗೆ ಬಂದಿದ್ದನು. ಇದೇ ಸಂದರ್ಭದಲ್ಲಿ ಪತಿ ಸುರೇಶ್ ಕೂಡ ಮನೆಗೆ ಬಂದಿದ್ದರಿಂದ ಇಬ್ಬರ ಸಂಬಂಧ ಬಹಿರಂಗವಾಗಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿತ್ತು. ಅಲ್ಲದೆ ಇನ್ನು ಮುಂದೆ ಮುರುಳಿ ತೋಟಕ್ಕೆ ಕೆಲಸ ಹೋಗದಂತೆ ಗಂಡ ಸುರೇಶ್ ಎಚ್ಚರಿಕೆ ನೀಡಿದ್ದನು.
ಹಲಗೂರು ಹೆದ್ದಾರಿಯಲ್ಲಿ ಅಂಗಡಿಯಲ್ಲಿದ್ದವನ ಕೊಚ್ಚಿ ಕೊಂದ ದುಷ್ಕರ್ಮಿಗಳು
ಮುರುಳಿ ಜತೆ ಸಂಪರ್ಕದಲ್ಲಿದ್ದ ರಾಧಾ ತಮ್ಮ ಸಂಬಂಧಕ್ಕೆ ಗಂಡ ಅಡ್ಡಿಪಡಿಸುತ್ತಿರುವ ಬಗ್ಗೆ ಆತನಿಗೆ ತಿಳಿಸಿದ್ದು, ಇಬ್ಬರು ಸೇರಿ ಸುರೇಶನನ್ನು ಮುಗಿಸಲು ಸಂಚು ರೂಪಿಸಿದ್ದಾರೆ. ಅದರಂತೆ ಮೆಡಿಕಲ್ ರೆಪ್ ಆಗಿರುವ ಮುರಳಿ ಹೈದರಾಬಾದ್ ನಿಂದ ರೂ. 20 ಸಾವಿರಕ್ಕೆ ಸೈನೈಡ್ ಖರೀದಿ ಮಾಡಿದ್ದಾನೆ. ನಂತರ ಕಾಸರಗೋಡಿಗೆ ಹೋಗಿ ಅಲ್ಲಿನ ದೇವಾಲಯದ ಹೆಸರಿನಲ್ಲಿರುವ ತೀರ್ಥದ ಬಾಟಲಿ ಖರೀದಿಸಿ ಅದಕ್ಕೆ ಎರಡರಿಂದ ಮೂರು ಹನಿ ಸೈನೈಡ್ ಬೆರೆಸಿ ಸುರೇಶನ ಹೆಸರಿಗೆ ಹೋಟೆಲ್ ಗೆ ಕೊರಿಯರ್ ಮಾಡಿದ್ದಾನೆ.
ಇತ್ತ ಎಲ್ಲವೂ ತಿಳಿದಿದ್ದ ರಾಧಾ ಏನೂ ಗೊತ್ತಿಲ್ಲದಂತೆ ಗಂಡ ತೀರ್ಥ ಸೇವಿಸಿ ಸಾವನ್ನಪ್ಪಿದ್ದಾನೆ ಎಂಬಂತೆ ಜನರ ಮುಂದೆ ನಾಟಕವಾಡಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಇದೀಗ ನಿಜಾಂಶ ಬೆಳಕಿಗೆ ಬಂದಿದ್ದು, ರಾಧಾ ಮತ್ತು ಪ್ರಿಯಕರ ಮುರುಳಿ ಜೈಲ್ ಸೇರಿದ್ದಾರೆ. ಪ್ರಿಯಕರ ಮುರುಳಿಗೆ ಮದುವೆಯಾಗಿ ಒಂದು ಮಗುವಿದೆ ಎನ್ನಲಾಗಿದೆ.