ಕೊಡಗಿನ ಶಾಸಕರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ?

ಮಡಿಕೇರಿ ಜೂನ್ 25: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದೆ. ಇಷ್ಟರಲ್ಲೇ ಉತ್ತಮವಾಗಿ ಮಳೆ ಸುರಿಯಬೇಕಿತ್ತು. ಆದರೆ ಇಲ್ಲಿಯವರೆಗೆ ಭಾರೀ ಮಳೆ ಸುರಿದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಳೆ ಸುರಿದರೂ ಕೆಆರ್ ಎಸ್ ಜಲಾಶಯ ತುಂಬುವಷ್ಟು ಮಳೆ ಬರುತ್ತದಾ ಎಂಬುದೇ ಜನರ ಪ್ರಶ್ನೆಯಾಗಿದೆ.

ಕಳೆದ ವರ್ಷ ಸುರಿದ ಮಳೆಯಿಂದ ಬಹಳಷ್ಟು ಕಷ್ಟ ನಷ್ಟ ಅನುಭವಿಸಿದ ಜನಕ್ಕೆ ಈ ಬಾರಿಯ ಕಡಿಮೆ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಂತೆ ಕಂಡರೂ ಮಳೆ ಸಮರ್ಪಕವಾಗಿ ಸುರಿಯದೆ ಹೋದರೆ ಕೊಡಗು ಮಾತ್ರವಲ್ಲದೆ, ಕಾವೇರಿ ಜಲಾನಯನ ಪ್ರದೇಶದ ಎಲ್ಲರಿಗೂ ತೊಂದರೆ ತಪ್ಪಿದಲ್ಲ.

ಕಳೆದ ವರ್ಷದ ಮಳೆಹಾನಿಯಿಂದ ಇನ್ನೂ ಕೊಡಗು ಹೊರಬಂದಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಮುಕ್ತಿಯೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಸಂಶಯವಿಲ್ಲ.

 ಕೊಡಗಿನಲ್ಲಿ 172619.62 ಲಕ್ಷ ರೂಪಾಯಿ ನಷ್ಟ

ಕೊಡಗಿನಲ್ಲಿ 172619.62 ಲಕ್ಷ ರೂಪಾಯಿ ನಷ್ಟ

ಕಳೆದ ವರ್ಷ ಸಂಭವಿಸಿದ ಭೂಕುಸಿತ, ಪ್ರವಾಹದಿಂದ ಜಿಲ್ಲೆಯಲ್ಲಿ 172619.62 ಲಕ್ಷ ರೂಪಾಯಿ ನಷ್ಟವಾಗಿದೆ. ಇದರಲ್ಲಿ ಬೆಳೆ ಹಾನಿ 30002.14 ಲಕ್ಷ ರೂಪಾಯಿ, ಸಾರ್ವಜನಿಕ ಸೇತುವೆ ರಸ್ತೆ ಇತರೆಗೆ 140294.41 ಲಕ್ಷ, ಮನೆ ಹಾನಿ 2304.68 ಹಾಗೂ ಜಾನುವಾರುಗಳಿಗೆ 18.39 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಇದು ಜಿಲ್ಲಾಡಳಿತ ಮಾಡಿದ ಪಟ್ಟಿಯಾಗಿದೆ.

ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಈಗಾಗಲೇ ಸಾರ್ವಜನಿಕ ರಸ್ತೆ ಮತ್ತು ಸೇತುವೆಗಾಗಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಸೇರಿದಂತೆ ಒಟ್ಟು 66.58 ಕೋಟಿ ಮಾತ್ರ ಅನುದಾನ ಬಿಡುಗಡೆಗೊಳಿಸಲಾಗಿದೆ. ಉಳಿದಂತೆ ಯಾವುದೇ ರೀತಿಯ ಸ್ಪಂದನೆ ದೊರೆಯದಿರುವುದು ಜಿಲ್ಲೆಯ ಜನರನ್ನು ಕಂಗೆಡುವಂತೆ ಮಾಡಿದೆ.

 ಕೇವಲ 66.58 ಕೋಟಿ ರೂಪಾಯಿ ಬಿಡುಗಡೆ

ಕೇವಲ 66.58 ಕೋಟಿ ರೂಪಾಯಿ ಬಿಡುಗಡೆ

ಒಟ್ಟು 124117.00 ಹೆಕ್ಟೇರ್ ಕೃಷಿ ಭೂಮಿ ನಷ್ಟ ಹೊಂದಿದ ರೈತರಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಸಂಪೂರ್ಣ ಭೂಮಿ ಕಳೆದುಕೊಂಡ ರೈತರಿಗೆ ಬದಲಿ ಭೂಮಿ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಒಂದು ವರ್ಷ ಕಳೆಯುತ್ತಾ ಬಂದು ಮಳೆಗಾಲ ಪ್ರಾರಂಭವಾದರೂ ಮನೆ ನೀಡಿಲ್ಲ. ಕೇವಲ ಒಂದು ಜಿಲ್ಲೆಯನ್ನೇ ಮರು ಸ್ಥಾಪಿಸಲಾಗಲಿಲ್ಲ ಎನ್ನುವುದಾದರೆ ಕೇರಳದ ಪರಿಸ್ಥಿತಿ ನಿರ್ಮಾಣವಾಗಿದ್ದರೆ ನಮ್ಮ ರಾಜ್ಯ ಸರ್ಕಾರ ಹೇಗೆ ನಿಭಾಯಿಸುತ್ತಿತ್ತು ಎಂಬುದು ಜನರ ಪ್ರಶ್ನೆಯಾಗಿದೆ.

ಇದೀಗ ಕೊಡಗಿನ ಶಾಸಕರಾದ ಅಪ್ಪಚ್ಚುರಂಜನ್ ಮತ್ತು ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಕೊಡಗಿನ ಸಮಸ್ಯೆ ಕುರಿತಂತೆ ಪತ್ರ ಬರೆದು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಆ ಮೂಲಕ ಕೊಡಗಿನ ಈಗಿನ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ.

 ಮನೆ ನಿರ್ಮಾಣಕ್ಕೆ ಅನುದಾನ ನೀಡಿ

ಮನೆ ನಿರ್ಮಾಣಕ್ಕೆ ಅನುದಾನ ನೀಡಿ

ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮನೆ ಕಳೆದುಕೊಂಡು ನಿರ್ಗತಿಕರಾದ ನಿರಾಶ್ರಿತರಿಗೆ ಕೂಡಲೇ ಮನೆ ವಿತರಣೆಯಾಗಬೇಕು ಹಾಗೂ ಮನೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಿ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು ಮುಂದೆ ಬರುವ ರೈತರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಹೊಸದಾಗಿ ಸರ್ಕಾರದ ವತಿಯಿಂದ ನಿರ್ಮಿಸುತ್ತಿರುವ ಮನೆಯನ್ನು ತ್ವರಿತವಾಗಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು.

ಈಗಾಗಲೇ ಜಿಲ್ಲಾಡಳಿತದಿಂದ ಅಪಾಯದ ಅಂಚಿನಲ್ಲಿರುವ ಕೆಲವು ಮನೆಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು, ಮನೆ ಖಾಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಆದರೆ ಈ ರೀತಿ ಒತ್ತಡಕ್ಕೆ ಒಳಗಾದ ನಿರಾಶ್ರಿತರು ಬಾಡಿಗೆ ಮನೆ ಪಡೆಯಲು ಮುಂಗಡ ಹಣ ಹಾಗೂ ಬಾಡಿಗೆ ಕಟ್ಟಲು ಹಣ ಇಲ್ಲದೇ ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರವು ಈ ರೀತಿ ಅಪಾಯದ ಅಂಚಿನಲ್ಲಿರುವ ನಿರಾಶ್ರಿತರನ್ನು ಬದಲಿ ಜಾಗಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಮುಂಗಡವಾಗಿ ಕನಿಷ್ಟ 10 ರಿಂದ 15 ಸಾವಿರ ರೂಪಾಯಿಯನ್ನು ನೀಡುವ ಮೂಲಕ ನಿರಾಶ್ರಿತರು ಬೀದಿ ಪಾಲಾಗದಂತೆ ಕ್ರಮ ವಹಿಸಬೇಕು.

 ಕಾಫಿ ಬೆಳೆಗಾರರ ಸಾಲಮನ್ನಾ ಮಾಡಿ

ಕಾಫಿ ಬೆಳೆಗಾರರ ಸಾಲಮನ್ನಾ ಮಾಡಿ

ಸಿ ಮತ್ತು ಡಿ. ಜಮೀನನ್ನು ಲ್ಯಾಂಡ್ ಬ್ಯಾಂಕಿನಿಂದ ಈಗಾಗಲೇ ರಾಜ್ಯ ಸರ್ಕಾರ ವಾಪಸ್ಸು ಪಡೆದಿರುವುದರಿಂದ ಜಮೀನು ಕಳೆದುಕೊಂಡ ರೈತರಿಗೆ ಹಂಚುವುದು ಹಾಗೂ ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಮೀನನ್ನು ಅವರವರ ಹೆಸರಿಗೆ ಮಂಜೂರು ಮಾಡುವುದು ಅಗತ್ಯವಾಗಿದೆ.

ಕಾಫಿ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ, ನಂತರ ಪುನಃ ಸಾಲವನ್ನು ನೀಡಬೇಕು. ಇಂತಹ ಸಾಲವನ್ನು ದೀರ್ಘಾವಧಿ ಬಡ್ಡಿ ರಹಿತ ಸಾಲವನ್ನಾಗಿ ಮಾಡಬೇಕು. ಜಮೀನು ಕಳೆದುಕೊಂಡ ಗ್ರಾ.ಪಂ.ವ್ಯಾಪ್ತಿಯ ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ನೀಡಬೇಕು.

 ಗುಡ್ಡ ಬಿರುಕು ಬಿಟ್ಟ ಪ್ರದೇಶದ ಜನಕ್ಕೆ ಮನೆ ಕೊಡಿ

ಗುಡ್ಡ ಬಿರುಕು ಬಿಟ್ಟ ಪ್ರದೇಶದ ಜನಕ್ಕೆ ಮನೆ ಕೊಡಿ

ಜಿಲ್ಲೆಯಲ್ಲಿನ ರಸ್ತೆ ಅಭಿವೃದ್ಧಿಗೆ ಕೂಡಲೇ ಕನಿಷ್ಠ 500 ಕೋಟಿ ಬಿಡುಗಡೆ ಮಾಡುವುದು. (ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ (ಜಿ.ಪಂ.ರಸ್ತೆ) ರಸ್ತೆಯೇ ರೂ. 318.79 ಕೋಟಿ ನಷ್ಟ ಹೊಂದಿದೆ) ಈ ಪೈಕಿ ಜಿಲ್ಲಾ ಪಂಚಾಯಿತಿಗೆ ಜಮೀನು ಕಳೆದುಕೊಂಡು ನಿರಾಶ್ರಿತರಾಗಿರುವ ರೈತರ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರವೇ ಭರಿಸುವುದು. ಮೊದಲ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ವರ್ಷ ವ್ಯಾಸಂಗ ಮುಗಿಯುವವರೆಗೂ ಸರ್ಕಾರವೇ ಅವರ ಶುಲ್ಕವನ್ನು ಪಾವತಿಸಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು.

ಕೆಲವು ಕಡೆ ಗುಡ್ಡದ ಮೇಲೆ ಮನೆ ನಿರ್ಮಿಸಿಕೊಂಡಿರುವ ಕಡೆಗಳಲ್ಲಿ ಗುಡ್ಡಗಳು ಬಿರುಕು ಬಿಟ್ಟಿದ್ದು, ಮುಂದೆ ಅಪಾಯವಾಗುವ ಸಂಭವ ಹೆಚ್ಚು. ಈ ಪ್ರದೇಶ ವಾಸಕ್ಕೆ ಸೂಕ್ತವಾಗಿರುವುದಿಲ್ಲ. ಆದುದರಿಂದ ಇಂತವರಿಗೂ ಸಹ ಹೊಸದಾಗಿ ಮನೆ ನೀಡಬೇಕು. ಗುಡ್ಡಗಳು ಕುಸಿದು ಮಣ್ಣುಗಳು ಒಂದೆಡೆ ಸೇರಿದ್ದು, ಕೆಲವು ಕಡೆ ತುಂಬಾ ಇಳಿಜಾರು ಪ್ರದೇಶವಾಗಿರುವುದನ್ನು ಸರ್ಕಾರದ ಅನುದಾನದಲ್ಲಿ ಸಮತಟ್ಟು ಮಾಡಿಸಿ ರೈತರು ಮತ್ತೆ ವ್ಯವಸಾಯ ಮಾಡಲು ಯೋಗ್ಯವಾಗುವಂತೆ ಭೂಮಿಯನ್ನು ಸರ್ಕಾರದ ಅನುದಾನದಲ್ಲಿಯೇ ಹದ ಮಾಡಬೇಕು. ಭೂ ಕುಸಿತದಿಂದ ಮರಗಳು ಬಿದ್ದಿದ್ದು, ಅಂತಹ ಮರಗಳನ್ನು ಯಾವುದೇ ನಿರ್ಬಂಧವಿಲ್ಲದೆ ರೈತರೇ ಮಾರಾಟ ಮಾಡಲು, ಇಲ್ಲವೇ ಸ್ವಂತ ಉಪಯೋಗಕ್ಕೆ ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.

 ಸರ್ಕಾರದ ಸ್ಪಂದನೆಯೇ ಉಳಿದಿರುವ ಪ್ರಶ್ನೆ

ಸರ್ಕಾರದ ಸ್ಪಂದನೆಯೇ ಉಳಿದಿರುವ ಪ್ರಶ್ನೆ

ಭೂ ಕುಸಿತದಿಂದ ಮನೆಯ ದಾಖಲಾತಿಗಳು, ಭೂ ದಾಖಲಾತಿಗಳು, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲಾತಿಗಳು ಮಣ್ಣಿನಲ್ಲಿ ನಾಶವಾಗಿರುವುದರಿಂದ ಸಂಬಂಧಿಸಿದ ಇಲಾಖೆ ಮೂಲಕ ಕೂಡಲೇ ಅಂತಹ ದಾಖಲಾತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಮೇಲ್ಕಂಡ ಸಮಸ್ಯೆಯನ್ನು ಇತ್ಯರ್ಥಪಡಿಸುವ ಮೂಲಕ ಕಣ್ಣೀರಿನಲ್ಲಿರುವ ರೈತರಲ್ಲಿ ಹೊಸ ಚೈತನ್ಯ ಮೂಡುವಂತೆ ತಾವುಗಳು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಇದು ಶಾಸಕರು ಸರ್ಕಾರಕ್ಕೆ ಬರೆದ ಪತ್ರವಾಗಿದ್ದು, ಸರ್ಕಾರ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ವರ್ಷವಾಗುತ್ತಾ ಬಂದರೂ ಇನ್ನೂ ಪತ್ರ ಬರೆದು ಗಮನಸೆಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿರುವುದು ನಿಜಕ್ಕೂ ದುರಂತದ ಸಂಗತಿಯೇ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+