ಮಳೆಗಾಲದಲ್ಲಿ ಮಲೆನಾಡಲ್ಲಿ ಗುಡ್ಡಕುಸಿಯಲು ಕಾರಣ ಏನು? ಮತ್ತು ಯಾರು?
ಮಡಿಕೇರಿ, ಆಗಸ್ಟ್ 03: ಇವತ್ತು ಮಳೆ ಬಂದಾಗಲೆಲ್ಲ ಬೆಟ್ಟಗುಡ್ಡಗಳ ನಡುವೆ ಮನೆಗಳನ್ನು ಕಟ್ಟಿಕೊಂಡು ಬದುಕುವ ಜನ ಭಯಭೀತರಾಗುತ್ತಿದ್ದಾರೆ. ಅದರಲ್ಲೂ ಪಶ್ಚಿಮ ಘಟ್ಟದ ಪ್ರದೇಶಗಳ ತಪ್ಪಲಲ್ಲಿ ನೆಲೆ ನಿಂತವರು ಪ್ರತಿವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭಯಪಡುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಏನಾದರೊಂದು ಭೂಕುಸಿತದಂತಹ ಘಟನೆಗಳು ನಡೆಯುತ್ತಲೇ ಇರುವುದು ಆತಂಕಕಾರಿಯಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಹಾಸನ ಮತ್ತು ಕೊಡಗಿನಲ್ಲಿ ಭೂಕುಸಿತ ಪ್ರಕರಣಗಳು ನಡೆಯುತ್ತಿವೆ. ಅದರಲ್ಲೂ 2018 ರಿಂದ 2020ರವರಗೆ ಕೊಡಗಿನಲ್ಲಿ ನಡೆದ ಭೂಕುಸಿತ ಪ್ರಕರಣಗಳು ಭಯ ಹುಟ್ಟಿಸಿದೆ. ಹೀಗಾಗಿ ಮಳೆಗಾಲವನ್ನು ನೆಮ್ಮದಿಯಾಗಿ ಕಳೆಯಲು ನಾವ್ಯಾರು ತಯಾರು ಇಲ್ಲದಂತಾಗಿದೆ. ಮಲೆನಾಡಿನಲ್ಲಿ ಇವತ್ತು ಭೂಕುಸಿತ ಸಂಭವಿಸಲು ಕಾರಣಗಳು ನಾವೇ ಆಗಿದ್ದೇವೆ. ಪ್ರಕೃತಿ ಮೇಲೆ ನಡೆದ ನಿರಂತರ ಅತ್ಯಾಚಾರಗಳು ಇವತ್ತಿನ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿದೆ.

ಹಾಗೆನೋಡಿದರೆ ಇವತ್ತಿಗೂ ಬೆಟ್ಟದ ಮೇಲೆ ಮತ್ತು ಬೆಟ್ಟದ ತಪ್ಪಲಲ್ಲಿ ಮನೆಕಟ್ಟಿಕೊಂಡು ಜೀವನ ಮಾಡುತ್ತಾ ಬಂದವರು ಇದೀಗ ನಿದ್ದೆ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಮಲೆನಾಡಿನಲ್ಲಿ ಅದರಲ್ಲೂ ಕೊಡಗಿನಲ್ಲಿ ಕೆಲವು ಮನೆಗಳು ಕೂಗಳತೆಯಲ್ಲಿದ್ದರೆ ಮತ್ತೆ ಕೆಲವು ಕಿ.ಮೀ.ಗಟ್ಟಲೆ ದೂರದಲ್ಲಿವೆ. ಅಂತಹ ಮನೆಗಳಲ್ಲಿ ಎಂತಹದ್ದೇ ಸಂಕಟ ಬಂದರೂ ತಾವೇ ಧೈರ್ಯವಾಗಿ ನಿಭಾಯಿಸಿಕೊಳ್ಳಬೇಕಾಗಿದೆ. ಬೆಂಕಿಪೊಟ್ಟಣವಿಲ್ಲ ಎಂದರೂ ಅವರು ಹತ್ತಾರು ಕಿ.ಮೀ. ಬರಬೇಕಾಗಿದೆ. ಅವರದ್ಯಾರದೂ ಸುಖ ಜೀವನವಲ್ಲ. ಹೊರಪ್ರಪಂಚದಿಂದ ದೂರವಿದ್ದುಕೊಂಡು ತಾವಾಯಿತು ತಮ್ಮ ತೋಟ ಗದ್ದೆಯಾಯಿತು ಎಂಬಂತೆ ದುಡಿಯುತ್ತಾ ಬದುಕುತ್ತಿದ್ದಾರೆ.
ಹಸಿರಾಗಿಯೇ ಉಳಿದ ಆ ದುರಂತಗಳು
ಇವರೆಲ್ಲರಿಗೂ ಮನೆ ಪಕ್ಕ ಹರಿಯುವ ನೀರ ಜರಿಯೇ ಜೀವಸೆಲೆಯಾಗಿದೆ. ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಪಟ್ಟಣಕ್ಕೆ ಬಂದು ತಮಗೆ ಅಗತ್ಯವಿರುವ ಸಾಮಾನುಗಳನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಾರೆ. ಹೀಗೆ ಬದುಕುತ್ತಿದ್ದವರ ಬದುಕು ಈ ಹಿಂದೆ ನಡೆದ ಭೂಕುಸಿತಕ್ಕೆ ಬಲಿಯಾಗಿ ಹೋಗಿದೆ. ತಲೆಮಾರುಗಳಿಂದ ಜೀವನ ಮಾಡಿಕೊಂಡು ಬಂದಿದ್ದ ಮನೆ, ತೋಟ ಎಲ್ಲವೂ ಮಣ್ಣು ಪಾಲಾಗಿದೆ. ಅವರೆಲ್ಲರೂ ಕಣ್ಣೀರು ಹಾಕುತ್ತಲೇ ಬದುಕು ಸಾಗಿಸುತ್ತಿದ್ದಾರೆ. ಮೂರು ವರ್ಷಗಳ ಕಾಲ ಕೊಡಗಿನಲ್ಲಿ ನಡೆದ ಭೂಕುಸಿತ ಪ್ರಕರಣ ಇನ್ನೂ ಹಸಿರಾಗಿಯೆ ಉಳಿದು ಹೋಗಿದೆ.

ಇವತ್ತು ಕೊಡಗಿಗೊಂದು ಸುತ್ತು ಹೊಡೆದರೆ ಇವತ್ತಿಗೂ ನಗರಗಳ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಮನೆ ಮಾಡಿಕೊಂಡು ವಾಸಮಾಡುತ್ತಿರುವ ಹಲವು ಕುಟುಂಬಗಳು ನಮಗೆ ಕಾಣಸಿಗುತ್ತವೆ. ಅವರು ಅಲ್ಲಿ ಹಿಂದಿನಿಂದಲೂ ಯಾವುದೇ ಭಯವಿಲ್ಲದೆ ಬದುಕುತ್ತಾ ಬಂದಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವಾಗ ಏನಾಗುತ್ತದೆಯೋ ಎಂಬ ಭಯವಂತು ಕಾಡುತ್ತಲೇ ಇದೆ. ಇವತ್ತು ಈ ಪರಿಸ್ಥಿತಿಗೆ ಮಲೆನಾಡು ಬರಲು ಕಾರಣವೇನು ಎಂಬುದನ್ನು ನೋಡುತ್ತಾ ಹೋದರೆ ಅದಕ್ಕೆ ಹತ್ತಾರು ಕಾರಣಗಳು ಸಿಗುತ್ತವೆ.
ಬೆಟ್ಟದ ಮೇಲೆಯೇ ನಿರಂತರ ದಂಧೆ
ತೊಂಬತ್ತರ ದಶಕಗಳವರೆಗೂ ಮಲೆನಾಡಿಗರ ಬದುಕು ಚೆನ್ನಾಗಿಯೇ ಇತ್ತು. ಯಾವ ಆಧುನಿಕ ಸೌಲಭ್ಯಗಳು ಅವರನ್ನು ತಲುಪಿಯೇ ಇರಲಿಲ್ಲ. ಹತ್ತಾರು ಎಕರೆ ತೋಟಗಳಿದ್ದರೂ ಬದುಕು ಮಾತ್ರ ಹಸನಾಗಿರಲಿಲ್ಲ. ಜನರು ಕೂಡ ಆ ಕಷ್ಟದ ಬದುಕಲ್ಲಿಯೂ ಸುಖ ಕಂಡುಕೊಂಡಿದ್ದರು. ನಂತರದ ಕಾಲಘಟ್ಟದಲ್ಲಿ ಬದಲಾವಣೆಗಳು ಹೆಚ್ಚಾದವು ಬೆಟ್ಟಗುಡ್ಡಗಳಲ್ಲಿ ಕಟ್ಟಡಗಳು, ರಸ್ತೆಗಳು ನಿರ್ಮಾಣವಾದವು. ಈ ವೇಳೆ ಒತ್ತೊತ್ತಾಗಿದ್ದ ಮರಗಳನ್ನು ನೆಲಕ್ಕುರುಳಿಸಲಾಯಿತು. ಜೆಸಿಬಿಯನ್ನು ತಂದು ಗುಡ್ಡಗಳನ್ನು ಕೊರೆದು ರಸ್ತೆ ಮಾಡಲಾಯಿತು. ಹೆಮ್ಮರಗಳು ಸತ್ತ ಪರಿಣಾಮ ಅವು ಮಣ್ಣನ್ನು ಹಿಡಿದಿಟ್ಟಿದ್ದ ಬೇರುಗಳು ಸತ್ತು ಮಣ್ಣು ಸಡಿಲವಾಯಿತು.

ಗುಡ್ಡದ ಮೇಲೆ ಕಾಡಿನ ನಡುವೆ ಹೋಂಸ್ಟೇ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದೆಂಬ ಆಲೋಚನೆ ಮಾಡಿದ ಕೆಲವರು ಬಂಡವಾಳ ಶಾಹಿಗಳು ಹಣಸುರಿದು ರೆಸಾರ್ಟ್ ನಿರ್ಮಿಸಿದರು. ಅದಕ್ಕೆ ದಾರಿ ಮಾಡುವ ಸಲುವಾಗಿ ಗುಡ್ಡ ಕೊರೆದರು. ಆಧುನೀಕತೆ ಕುಗ್ರಾಮಗಳನ್ನು ನಾಗರಿಕತೆಯತ್ತ ಕೊಂಡೊಯ್ಯತೊಡಗಿತು. ಇದರ ಜತೆಗೆ ಕಡಮಕಲ್, ಪೂಜಿಮಲೆ, ಸುಟ್ಟತ್ಮಲೆ ಮೊದಲಾದ ಕಡೆ ಬೆಟ್ಟವನ್ನು ಕೊರೆದು ಸುರಂಗತೋಡಿ ಹರಳು ಕಲ್ಲನ್ನು ಹೊರ ತೆಗೆಯುವ ದಂಧೆಯೂ ನಡೆಯಿತು.
ಪ್ರಕೃತಿ ಮುನಿದರೆ ಉಳಿಗಾಲವಿಲ್ಲ
ಇದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಬೆಟ್ಟದ ತಪ್ಪಲು ಪ್ರದೇಶವಾದ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು ಸೇರಿದಂತೆ ಹಲವು ಗ್ರಾಮಗಳ ಜನ ಭಯದಿಂದ ಬದುಕುವಂತಾಗಿದೆ. ಇನ್ನು ಮುಂದೆಯಾದರೂ ಆಗಿರುವ ಪ್ರಮಾದಕ್ಕೆ ಪರಿಹಾರಗಳನ್ನು ಹುಡುಕಿಕೊಂಡು ಸರಿಪಡಿಸುವ ಕೆಲಸವನ್ನು ಮಾಡಬೇಕಾಗಿದೆ. ಪ್ರಕೃತಿ ವಿರುದ್ಧ ಮನುಷ್ಯ ಹೋದರೆ ಉಳಿಗಾಲ ಇಲ್ಲ ಎಂಬುದನ್ನು ಪ್ರಕೃತಿ ಈಗಾಗಲೇ ತೋರಿಸಿಕೊಟ್ಟಿದೆ.
ಇಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಸಂಕಷ್ಟ ಅನುಭವಿಸುತ್ತಿರುವುದು ಮಾತ್ರ ನಿಜಕ್ಕೂ ದುರಂತವೇ.. ನಾವೆಲ್ಲರೂ ಆಧುನೀಕತೆ ಮತ್ತು ವಾಣಿಜ್ಯಕರಣದ ಹೆಸರಿನಲ್ಲಿ ಪ್ರಕೃತಿ ಮಾಡಬಾರದನೆಲ್ಲ ಮಾಡಿದ್ದೇವೆ. ಮಾಡುತ್ತಲೂ ಇದ್ದೇವೆ. ಹೀಗಾಗಿ ಕೆಲವೊಮ್ಮೆ ಪಕೃತಿ ಮುನಿದಾಗ ಅದರ ಪರಿಣಾಮಗಳನ್ನು ಎದುರಿಸುವುದು ಅನಿವಾರ್ಯವಾಗಿದೆ.












Click it and Unblock the Notifications