Kodagu: ಕೊಡಗಿನಲ್ಲಿ ಹಳ್ಳಹಿಡಿದ ಜಲಜೀವನ್ ಮಿಷನ್: ಅವ್ಯವಹಾರದ ಶಂಕೆ!
ಮಡಿಕೇರಿ, ಡಿಸೆಂಬರ್ 27: ಪ್ರತಿ ಮನೆ, ಮನೆಗೆ ನೀರು ತಲುಪಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರಲಾದ ಜಲಜೀವನ್ ಮಿಷನ್ ಯೋಜನೆ ಕೊಡಗಿನಲ್ಲಿ ಹಳ್ಳಹಿಡಿದಿದ್ದು, ನಾಮಕಾವಸ್ಥೆಗೆ ಕೆಲವು ಕಡೆಗಳಲ್ಲಿ ನೀರಿನ ಸಂಪರ್ಕ ನೀಡದೆ ನಲ್ಲಿಗಳನ್ನು ಅಳವಡಿಸಿ ಭ್ರಷ್ಟಾಚಾರ ಎಸಗಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಇದೀಗ ಜಿಲ್ಲೆಯಲ್ಲಿ ಈ ಯೋಜನೆ ಸಂಬಂಧ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರಲಾರಂಭಿಸಿದ್ದು, ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸುವಂತಾಗಿದೆ.
ಈಗಾಗಲೇ ಕೊಡಗಿನ ಬಹುತೇಕ ಮನೆಗಳಿಗೆ ನಲ್ಲಿ ಅಳವಡಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರು ಮನೆಗೆ ಹರಿದು ಬರುತ್ತಿಲ್ಲ. ಹೀಗಾಗಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಹಲವರು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಪೊನ್ನಂಪೇಟೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪವಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರು ಈ ಬಗ್ಗೆ ಮಾತನಾಡಿ, ಯೋಜನೆಯಂತೆ ಪ್ರತಿ ಮನೆಗೆ ನೀರು ತಲುಪಬೇಕಾಗಿದ್ದು ಇದುವರೆಗೆ ತಲುಪಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪೈಪ್ ಹಾಗೂ ನಲ್ಲಿಗಳನ್ನು ಅಳವಡಿಸಿ ಕಳೆದ ಒಂದು ವರ್ಷದಿಂದ ನೀರು ಸರಬರಾಜು ಮಾಡದೆ ಬಿಟ್ಟಿದ್ದಾರೆ. ಮೂಲಭೂತವಾಗಿ ನಿರಂತರ ನೀರಿನ ವ್ಯವಸ್ಥೆಯನ್ನು ಕಂಡು ಹಿಡಿಯದೆ, ಕೇವಲ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಿ, ನಲ್ಲಿಗಳನ್ನು ನಿರ್ಮಿಸಿದ್ದು, ಪೈಪುಗಳನ್ನು ಅಳವಡಿಸದೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಜನ ಕಣ್ಣಿಗೆ ಮಣ್ಣೆರೆಚಲಾಗಿದೆ. ಸದ್ಯಕ್ಕೆ ಹಳ್ಳಿ, ಹಳ್ಳಿಗಳ ಮನೆ ಮುಂದೆ ನಲ್ಲಿ ನಿರ್ಮಾಣವಾಗಿದ್ದು ನೀರು ಮಾತ್ರ ಮರೀಚಿಕೆಯಾಗಿದೆ.
ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ
ಈ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬ ಒತ್ತಾಯವನ್ನು ಜಿಪಂ ಮಾಜಿ ಸದಸ್ಯ ಎಚ್.ಇ.ಗಣೇಶ್ ಮಾಡಿದ್ದು, ಸತ್ಯ ಹೊರಬರಲು ಸಮಿತಿಯೊಂದನ್ನು ರಚಿಸಿ ತನಿಖೆಗೊಳಪಡಿಸಬೇಕು ಹಾಗೆಯೇ ಉಳಿದಿರುವ ಯಾವುದೇ ಬಿಲ್ಲುಗಳನ್ನು ಪಾವತಿಸದಂತೆ ತಡೆಹಿಡಿಯಬೇಕು ಎಂಬ ಸಲಹೆ ನೀಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ಭಾರಿ ದುರುಪಯೋಗವಾಗಿದೆ ಎಂದು ಕಳೆದ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ವಕ್ತಾರಾದ ತೆನ್ನಿರಾ ಮೈನಾ ಆರೋಪ ಮಾಡಿದ್ದರಲ್ಲದೆ ತನಿಖೆಗೆ ಆಗ್ರಹಿಸಿದ್ದರು.

ಇದೀಗ ಶಾಸಕ ಪೊನ್ನಣ್ಣ ಅವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹತ್ತು ದಿನದ ಒಳಗೆ ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಯೋಜನೆಯ ಸಮಸ್ಯೆಯ ಬಗ್ಗೆ ಜನವರಿ 20 ರಂದು ಪ್ರತ್ಯೇಕ ವಿಶೇಷ ಸಭೆಯನ್ನು ಕರೆಯುವುದಾಗಿ ಹೇಳಿದ್ದು ಆ ವೇಳೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಸರ್ಕಾರದ ದುಡ್ಡಿನಲ್ಲಿ ಜಾತ್ರೆ ಮಾಡಿದ್ದಾರಾ?
ಕೆಲವರು ಆರೋಪಿಸುವಂತೆ ಜಲಜೀವನ್ ವಿಷನ್ ಯೋಜನೆಯಲ್ಲಿ 200 ಕೋಟಿಗೆ ಹೆಚ್ಚು ಹಣ ಕೊಡಗಿನಲ್ಲಿ ದುರುಪಯೋಗ ಆಗಿದೆ. ಈ ಹಿಂದೆ ಈ ಸಂಬಂಧ ದಾಖಲೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪಡೆದುಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಜರುಗಲಿಲ್ಲ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣನವರಿಗೆ ತಿಳಿಯದಂತೆ ಕೆಲವು ಮುಖಂಡರು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಸಂಧಾನದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಜತೆಗೆ ಆರೋಪಗಳು ಬಂದಾಗಲೂ ಅಧಿಕಾರಿಗಳು ಸ್ಪಷ್ಟನೆ ನೀಡದೆ ಮೌನಕ್ಕೆ ಜಾರಿರುವುದು ಅಚ್ಚರಿ ಮೂಡಿಸುತ್ತಿದೆ.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡಂತೆ ಕಾಣಿಸುತ್ತಿದೆ. ಕೆಲವು ಮನೆಗಳಿಗೆ ಆತುರ ಆತುರವಾಗಿ ನಲ್ಲಿ ಮತ್ತು ಮೀಟರ್ ಗಳನ್ನು ಅಳವಡಿಸಿ ಹಲವು ತಿಂಗಳು ಕಳೆದರೂ ಪೈಪ್ ಸಂಪರ್ಕವನ್ನು ನೀಡಿಲ್ಲ. ಇದನ್ನು ಗಮನಿಸಿದರೆ ಕಟಾಚಾರಕ್ಕೆ ಮಾಡಿದಂತೆ ಗೋಚರಿಸುತ್ತಿದೆ. ಇಲ್ಲಿ ಸರ್ಕಾರದ ಮಹತ್ವಪೂರ್ಣ ಯೋಜನೆ ಹಳ್ಳ ಹಿಡಿದಿರುವುದು ಮತ್ತು ಸರ್ಕಾರದ ದುಡ್ಡಿನಲ್ಲಿ ಇನ್ಯಾರೋ ಜಾತ್ರೆ ಮಾಡುತ್ತಿರುವುದು ಮೇಲ್ನೊಟಕ್ಕೆ ಎದ್ದು ಕಾಣಿಸುತ್ತಿದೆ. ಈ ಸಂಬಂಧ ತನಿಖೆಯಾಗುತ್ತಾ? ನ್ಯಾಯ ಸಿಗುತ್ತಾ? ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications