ಮಡಿಕೇರಿ; ಆಟೋ ದರ ಏರಿಕೆಗೆ ಚಾಲಕರ ಪ್ರತಿಭಟನೆ
ಮಡಿಕೇರಿ, ಮಾರ್ಚ್ 05; ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆ ಆಟೋರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕು ಎಂದು ಚಾಲಕರು ಒತ್ತಾಯಿಸಿದರು. ವಿರಾಜಪೇಟೆ ನಗರ ಆಟೋ ಚಾಲಕರು ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ವಿರಾಜಪೇಟೆ, ಕಡಂಗ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಮುಂತಾದ ಕಡೆ ಸುಮಾರು ಎರಡು ಗಂಟೆಗಳ ಕಾಲ ಆಟೋ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಡಳಿತ ತಕ್ಷಣ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಕೊಡಗು ಜಿಲ್ಲೆಯಾದ್ಯಂತ ಏಕರೂಪದ ಆಟೋ ಪ್ರಯಾಣ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿರಾಜಪೇಟೆ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ. ಎಂ. ಶಶಿಧರನ್, "ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ವಿರುದ್ಧ ಈ ಹಿಂದೆ ಪ್ರತಿಭಟನೆ ಮಾಡಿ ಆಟೋ ಪ್ರಯಾಣ ದರ ಪರಿಷ್ಕರಣೆಗೆ ಫೆಬ್ರವರಿ 25ರ ಗಡುವು ನೀಡಲಾಗಿತ್ತು" ಎಂದರು.

"ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ಸ್ಪಂದನೆ ನೀಡಿಲ್ಲ ಮತ್ತು ತೈಲೋತ್ಪನ್ನಗಳ ಬೆಲೆ ಇಳಿಕೆಯ ಬಗ್ಗೆ ಸರ್ಕಾರದಿಂದ ಯಾವುದೇ ಭರವಸೆಯೂ ದೊರೆಯುತ್ತಿಲ್ಲ" ಎಂದು ಆರೋಪಿಸಿದರು.
2015ರಲ್ಲಿ ನಿಗದಿಪಡಿಸಿರುವ ದರವನ್ನು ಪಡೆದು ಆಟೋ ಚಲಾಯಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇ. 48ರಷ್ಟು ಏರಿಕೆಯಾಗಿದೆ. ಅಲ್ಲದೆ ಆಟೋ ಬಿಡಿಭಾಗಗಳ ಬೆಲೆ ಮತ್ತು ವಿಮಾ ಕಂತು, ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಚಾಲಕರು ಹೇಳಿದರು.
ಕೋವಿಡ್ ಪರಿಸ್ಥಿತಿಯ ಸಂಕಷ್ಟದಿಂದ ಚಾಲಕರು ಇನ್ನೂ ಕೂಡ ಹೊರ ಬಂದಿಲ್ಲ. ಇದರ ನಡುವೆಯೇ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ಜಿಲ್ಲಾಡಳಿತ ತಕ್ಷಣ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಜಿಲ್ಲೆಯಾದ್ಯಂತ ಏಕರೂಪದ ಆಟೋ ಪ್ರಯಾಣ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಮುಖರಾದ ಚಂದ್ರು, ಸತೀಶ್, ಡಾಲು, ಸುಗುಣ ಸೇರಿದಂತೆ ಎಲ್ಲಾ ಆಟೋ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.












Click it and Unblock the Notifications